ಗಣೇಶೋತ್ಸವ ಆಚರಣೆಗೆ ನಿರ್ಬಂಧವಿಲ್ಲ; ಆರ್. ಅಶೋಕ
ಬೆಂಗಳೂರು, ಆ. 08: "ಈ ವರ್ಷ ಗಣೇಶೋತ್ಸವ ಆಚರಣೆಗೆ ಯಾವುದೇ ನಿರ್ಬಂಧಗಳು ಇರಲ್ಲ. ಕೋವಿಡ್ ಪೂರ್ವದಲ್ಲಿದ್ದ ನಿಯಮಗಳೇ ಅನ್ವಯಿಸುತ್ತವೆ" ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವಾರ್ಡ್ ಗೊಂದು ಗಣೇಶ ಕೂರಿಸಬೇಕು ಎಂಬ ಪಾಲಿಕೆಯ ನಿಯಮಕ್ಕೆ ಸ್ಪಷ್ಟನೆ ನೀಡಿದರು. "ಈ ಹಿಂದೆ ಕೋವಿಡ್ ಇದ್ದ ಕಾರಣ ಗಣೇಶೋತ್ಸವದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಈಗ ಯಾವುದೇ ನಿರ್ಬಂಧ ವಿಧಿಸಿಲ್ಲ. ಈ ಕುರಿತು ಮುಖ್ಯಮಂತ್ರಿಗಳ ಜತೆಗೂ ಚರ್ಚಿಸಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ 11 ದಿನ ಗಣೇಶೋತ್ಸವ ಆಚರಣೆಗೆ ಅನುಮತಿ
"ಕೋವಿಡ್ ಪೂರ್ವದಲ್ಲಿ ಯಾವ ರೀತಿ ಬೀದಿಗಳಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶವಿತ್ತೋ ಅದೇ ರೀತಿ ಆಚರಿಸಬಹುದು. ರಸ್ತೆಗೊಂದು, ವಾರ್ಡ್ಗೊಂದು, ಬೀದಿಗೊಂದು ಎಂಬ ನಿಯಮಗಳು ಇರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ" ಎಂದರು.
"ವಾರ್ಡ್ ಗೊಂದು ಗಣೇಶ ಮಿತಿ ಮಾಡಿ ಪಾಲಿಕೆ ಆದೇಶ ಹೊರಡಿಸಿರಬಹುದು. ಗಣೇಶ ಉತ್ಸವಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಮಿತಿ, ನಿರ್ಬಂಧ ವಿಧಿಸುವ ತೀರ್ಮಾನ ಮಾಡಿಲ್ಲ. ಗಣೇಶ ಉತ್ಸವ ಸಂದರ್ಭದಲ್ಲಿ ಪ್ಲಾಸ್ಟಿಕ್ ಮತ್ತು ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿ ಕೂರಿಸಲು ಅವಕಾಶವಿಲ್ಲ. ಪರಿಸರ ಸ್ನೇಹಿ ಮಣ್ಣಿನ ಗಣೇಶ ವಿಗ್ರಹ ಕೂರಿಸಬೇಕು" ಎಂದು ಮನವಿ ಮಾಡಿದರು.
ಈದ್ಗಾ ಮೈದಾನ ವಿವಾದ; "ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು. ಅಲ್ಲಿ ಯಾವುದೇ ಕಾರ್ಯಕ್ರಮ ನಡೆಸಬೇಕಾದರೂ ಕಂದಾಯ ಇಲಾಖೆಯ ಅನುಮತಿ ಪಡೆಯಬೇಕು" ಎಂದು ಕಂದಾಯ ಸಚಿವ ಆರ್. ಅಶೋಕ ಸ್ಪಷ್ಟಪಡಿಸಿದ್ದಾರೆ.
"ಈದ್ಗಾ ಮೈದಾನ ವಿವಾದಕ್ಕೆ ಒಳಗಾಗಿದೆ. ಇಲ್ಲಿ ಧ್ವಜಾರೋಹಣ, ಗಣೇಶೋತ್ಸವ, ನಮಾಜ್, ಪ್ರಾರ್ಥನೆ ಏನೇ ಮಾಡುವುದಿದ್ದರೂ ಅನುಮತಿಗಾಗಿ ಕಂದಾಯ ಇಲಾಖೆಗೆ ಮನವಿ ಸಲ್ಲಿಸಬೇಕು. ಅಲ್ಲಿ ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಮನವಿ ಬಂದರೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು. ಈ ಬಗ್ಗೆ ಯಾರೂ ಮನವಿ ಸಲ್ಲಿಸಿಲ್ಲ. ಈ ಹಿಂದೆ ಬಿಬಿಎಂಪಿಯಿಂದ ಅನುಮತಿ ಪಡೆಯುತ್ತಿದ್ದರು" ಎಂದು ತಿಳಿಸಿದರು.
"ಚಾಮರಾಜಪೇಟೆ ಈದ್ಗಾ ಮೈದಾನ ನಮ್ಮದೇ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಈ ಮೈದಾನ ಸರ್ಕಾರದ್ದು. ಯಾವುದೇ ಮನವಿಯನ್ನು ಕಾನೂನು ಪ್ರಕಾರವೇ ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಿಸುವುದು ಬೇಡ" ಎಂದು ಮನವಿ ಮಾಡಿದರು.
"ಈ ಮೈದಾನ ನಮ್ಮದು ಎಂದು ಹೇಳುವರು ದಾಖಲೆಗಳನ್ನು ಸಲ್ಲಿಸಬೇಕು ಎಂದು ಬಿಬಿಎಂಪಿ ಹೇಳಿತ್ತು. ಸೂಕ್ತ ದಾಖಲೆಗಳನ್ನು ಯಾರೂ ಸಲ್ಲಿಸಿಲ್ಲ. ಈ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬುದಕ್ಕೆ ನಮ್ಮ ಬಳಿ ದಾಖಲೆಗಳು ಇವೆ. ಈವರೆಗೂ ಇದು ಬಿಬಿಎಂಪಿಗೆ ಸೇರಿದ್ದು ಎಂದೇ ಭಾವಿಸಲಾಗಿತ್ತು. ದಾಖಲೆಗಳ ಪರಿಶೀಲನೆ ಮಾಡಿದ ಬಳಿಕ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂಬುದು ಖಚಿತವಾಗಿದೆ" ಎಂದು ಅಶೋಕ ತಿಳಿಸಿದ್ದಾರೆ.