ಟಿಡಿಪಿ ಶಾಸಕ ವಕಾಟಿ ನಾರಾಯಣರೆಡ್ಡಿಗೆ ರಿಲೀಫ್ ನೀಡದ ಹೈಕೋರ್ಟ್
ಬೆಂಗಳೂರು ಮೇ 23. ಆರ್ಥಿಕ ಅಪರಾಧದ ಪ್ರಕರಣವೊಂದರಲ್ಲಿ ಹೈಕೋರ್ಟ್ ಟಿಡಿಪಿಯ ಶಾಸಕ ವಕಾಟಿ ನಾರಾಯಣರೆಡ್ಡಿಗೆ ಯಾವುದೇ ರಿಲೀಫ್ ನೀಡಲು ಸೋಮವಾರ ನಿರಾಕರಿಸಿದೆ.
ಹಾಗಾಗಿ ಅವರು ಜೈಲಿನಲ್ಲಿಯೇ ಇರಬೇಕಾದ ಮತ್ತು ವಿಚಾರಣೆಯನ್ನು ಎದುರಿಸಲೇಬೇಕಾದ ಪರಿಸ್ಥಿತಿ ಮುಂದುವರಿದಿದೆ.
ಆರ್ಥಿಕ ಅಪರಾಧಗಳಡಿ ನನ್ನ ವಿರುದ್ಧ ಸಿಬಿಐ ದಾಖಲಿಸಿರುವ ಪ್ರಕರಣ ರದ್ದುಗೊಳಿಸಬೇಕೆಂದು ಕೋರಿ ಬಂಧನದಲ್ಲಿರುವ ತೆಲುಗುದೇಶಂ ಪಕ್ಷದ (ಟಿಡಿಪಿ) ವಿಧಾನ ಪರಿಷತ್ ಸದಸ್ಯ ವಕಾಟಿ ನಾರಾಯಣ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ನಗರದಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕು ಮತ್ತು ಎಫ್ಐಆರ್ ರದ್ದುಗೊಳಿಸಬೇಕೆಂದು ಕೋರಿ ವಕಟಿ ನಾರಾಯಣ ರೆಡ್ಡಿ ಸಲ್ಲಿಸಿದ್ದ ಅರ್ಜಿಯ ಮೇಲಿನ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
"ಈ ಹಂತದಲ್ಲಿ ಪ್ರಕರಣ ರದ್ದುಗೊಳಿಸಲು ಯಾವುದೇ ಸಾಕ್ಷ್ಯ ಕಾಣುತ್ತಿಲ್ಲ. ಆದ್ದರಿಂದ ಆರೋಪಿಗಳು ವಿಚಾರಣೆ ಎದುರಿಸಬೇಕು' ಎಂದು ನ್ಯಾಯಪೀಠ ವಿವರಿಸಿದೆ.
ಪ್ರಕರಣದ ಹಿನ್ನೆಲೆ:
ವಕಾಟಿ ನಾರಾಯಣ ರೆಡ್ಡಿ ಹೈದರಾಬಾದ್ನಲ್ಲಿರುವ ವಿಎನ್ಆರ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರಿನ ಭಾರತೀಯ ಕೈಗಾರಿಕಾ ಹಣಕಾಸು ನಿಗಮದಿಂದ (ಐಎಫ್ಸಿಐ) 2014-15ರಲ್ಲಿ 190 ಕೋಟಿ ರೂ. ಸಾಲ ಮಂಜೂರು ಮಾಡಿಸಿಕೊಂಡಿದ್ದರು.
ಆದರೆ, ಇನ್ನೂ ಆ ಸಾಲ ಮರುಪಾವತಿ ಮಾಡಿಲ್ಲ. ಇದರಿಂದ ಬೊಕ್ಕಸಕ್ಕೆ 205 ಕೋಟಿ ರೂ. ವಂಚನೆ ಆಗಿದೆ ಎಂಬುದು ಸಿಬಿಐ ಆರೋಪಿಸಿತ್ತು. ಅವರನ್ನು ಬಂಧಿಸಿ ವಿಚಾರಣೆ ಕೈಗೊಂಡಿದೆ.