Breaking: ಹವಾಮಾನ ವರದಿ, ಕರ್ನಾಟಕದಲ್ಲಿ ಕಡಿಮೆ ಆಗಲಿದೆ ಮಳೆ
ಬೆಂಗಳೂರು ಆಗಸ್ಟ್ 11: ಕರ್ನಾಟಕದಲ್ಲಿ ಭಾನುವಾರದ ನಂತರ ಎಲ್ಲಿಯೂ ಮಳೆ ಬೀಳುವ ಲಕ್ಷಣಗಳು ಇಲ್ಲ. ಕೇವಲ ಶನಿವಾರದವರೆಗೆ ಮಾತ್ರ ಆರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಕಳೆದ ಎರಡು-ಮೂರು ವಾರದಿಂದ ರಾಜ್ಯದಲ್ಲಿ ಅಬ್ಬರಿಸಿದ್ದ ಮಳೆ ಬಹುತೇಕ ತಣ್ಣಗಾಗಿದ್ದು, ಕೆಲವೆಡೆ ಮಾತ್ರ ಶನಿವಾರದವರೆಗೂ ಬೀಳಲಿದೆ. ಭಾನುವಾರದ ನಂತರ ರಾಜ್ಯ ಯಾವ ಭಾಗದಲ್ಲಿಯೂ ಮಳೆ ಮುನ್ಸೂಚನೆ ಇಲ್ಲ. ಮಳೆ ಸಂಬಂಧ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ ಎನ್ನವು ಮೂಲಕ ರಾಜ್ಯ ಹವಾಮಾನ ತಜ್ಞರು ನೆರೆ, ಪ್ರವಾಹ ಪೀಡಿತ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಆಗಸ್ಟ್ 12ರಂದು ಶುಕ್ರವಾರ ಕರಾವಳಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಸೇರಿ ಒಟ್ಟು ಆರು ಜಿಲ್ಲೆಗಳಲ್ಲಿ ಭಾರೀಯಿಂದ ಅತೀ ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು, ಅಂದು ಈ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಮರುದಿನ ಮಳೆ ಮತ್ತಷ್ಟು ಇಳಿಕೆ ಆಗುವ ಹಿನ್ನೆಲೆಯಲ್ಲಿ ಶನಿವಾರ ಮತ್ತದೇ ಆರು ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ.
ಕರಾವಳಿ ಮತ್ತು ಮಲೆನಾಡು ಹೊರತು ಶುಕ್ರವಾರ ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಮುಂದಿನ ಎರಡು ದಿನ ರಾಜ್ಯದ ಕೆಲವು ಪ್ರದೇಶಗಳಲ್ಲಿ ಆಗಾಗ ತುಂತುರು ಮಳೆ ಬೀಳಸುವ ಸಾಧ್ಯತೆ ಇದೆ.
ಚಿಕ್ಕಮಗಳೂರಿಗೆ ಅಧಿಕ ಮಳೆ; ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಧಿಕ 24 ಸೆಂ.ಮೀ. ಮಳೆ ಬಿದ್ದಿದೆ. ಇನ್ನು ಶಿವಮೊಗ್ಗದಲ್ಲಿ 13 ಸೆಂ.ಮೀ, ಸಿದ್ದಾಪುರ, ಕಮ್ಮರಡಿಯಲ್ಲಿ ತಲಾ 12 ಸೆಂ.ಮೀ, ಭಾಗಮಂಡಲ 11 ಸೆಂ.ಮೀ, ಬೆಳಗಾವಿ 10 ಸೆಂ.ಮೀ. ಮಳೆ ದಾಖಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆ ವರದಿ ಮಾಡಿದೆ.