ಮಧ್ಯಂತರ ಚುನಾವಣೆ ಮಾತೇ ಇಲ್ಲ: ಯೂ ಟರ್ನ್ ಹೊಡೆದ ದೇವೇಗೌಡ
Recommended Video
ಬೆಂಗಳೂರು, ಜೂನ್ 21: ಮಧ್ಯಂತರ ಚುನಾವಣೆ ಯಾವಾಗ ಬರುವುದೋ ಗೊತ್ತಿಲ್ಲ ಎನ್ನುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ತಮ್ಮ ಹೇಳಿಕೆಯ ಅರ್ಥ ಅದಲ್ಲ ಎಂದು ಯೂಟರ್ನ್ ತೆಗೆದುಕೊಂಡಿದ್ದಾರೆ.
'ನಾನು ಹೇಳಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ. ವಿಧಾನಸಭೆ ಚುನಾವಣೆ ಕುರಿತು ಅಲ್ಲ' ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಸಾರ್ವತ್ರಿಕ ಚುನಾವಣೆ ಬಳಿಕ ಕಾಂಗ್ರೆಸ್ ಹೈಕಮಾಂಡ್ ಶಕ್ತಿ ಕಳೆದುಕೊಂಡಿದೆ. ಸರ್ಕಾರ ಎಷ್ಟು ದಿನ ಇರುತ್ತದೆಯೋ ಗೊತ್ತಿಲ್ಲ. ಸರ್ಕಾರದ ಅಳಿವು ಉಳಿವು ಎಲ್ಲವೂ ಕಾಂಗ್ರೆಸ್ ಕೈಯಲ್ಲಿದೆ. ಜೆಡಿಎಸ್ ಜತೆ ಹೊರಟರೆ ಕಾಂಗ್ರೆಸ್ ಪಕ್ಷ ಹೋಗುತ್ತದೆ ಎಂಬ ಸಂಕಟ ಅವರಲ್ಲಿದೆ ಎಂದು ದೇವೇಗೌಡ ಶುಕ್ರವಾರ ಬೆಳಿಗ್ಗೆ ಹೇಳಿಕೆ ನೀಡಿದ್ದರು.
ಮಧ್ಯಂತರ ಚುನಾವಣೆ ಗ್ಯಾರಂಟಿ ಎಂದು ದೇವೇಗೌಡರು ಹೇಳಿದ್ದೇಕೆ?
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ. ಕಾಂಗ್ರೆಸ್ಗೆ ಸರ್ಕಾರ ನಡೆಸುವ ಮನಸ್ಸು ಇದೆಯೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಇಲ್ಲಿ ಎಲ್ಲದಕ್ಕೂ ಕ್ರಿಯೆ ಮತ್ತು ಪ್ರತಿಕ್ರಿಯೆಯನ್ನು ಹುಡುಕುವ ಅಗತ್ಯವಿಲ್ಲ. ಇಲ್ಲಿಯೂ ಮೂರನೇ ಒಂದು ಭಾಗದ ನಿಯಮ ಪಾಲನೆಯಾಗುತ್ತಿಲ್ಲ. ನಮ್ಮ ಒಂದು ಸಚಿವ ಸ್ಥಾನವನ್ನೂ ಕಾಂಗ್ರೆಸ್ನವರಿಗೇ ಬಿಟ್ಟುಕೊಟ್ಟಿದ್ದೇವೆ ಎಂದು ಅವರು ಹೇಳಿದ್ದರು. ಇದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿತ್ತು.
ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಹೇಳಿದ್ದು
ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕೆಲವು ಸ್ಥಾನಗಳಿಗೆ ಮಧ್ಯಂತರ ಚುನಾವಣೆಗಳು ಮುಂದಿನ ಅವಧಿಯಲ್ಲಿ ಬರುತ್ತಿವೆ. ಈ ಚುನಾವಣೆಯಲ್ಲಿ ಕಳೆದುಕೊಂಡ ಸ್ಥಾನಗಳ ಬಗ್ಗೆ ನಾನು ಮಾತನಾಡಿದ್ದು. ಜನರ ವಿಶ್ವಾಸವನ್ನು ಮತ್ತೆ ಗಳಿಸಿ ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಅದರ ಕುರಿತು ಹೇಳಿದ್ದೇನೆ ಎಂದು ದೇವೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ.
ನಾವೇನೂ ಏಕಾಏಕಿ ಸರ್ಕಾರ ಮಾಡಿಲ್ಲ: ದಿನೇಶ್ ಗುಂಡೂರಾವ್
ಮಧ್ಯಂತರ ಚುನಾವಣೆ ಮಾತೇ ಇಲ್ಲ
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಹೀಗಾಗಿ ಮಧ್ಯಂತರ ಚುನಾವಣೆ ನಡೆಸುವ ಪ್ರಶ್ನೆಯೇ ಇಲ್ಲ. ಮಧ್ಯಂತರ ಚುನಾವಣೆ ನಡೆಯುತ್ತದೆ ಎಂದು ನಾನು ಯಾರ ಬಳಿಯೂ ಮಾತನಾಡಿಲ್ಲ. ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ಚುನಾವಣೆಗೆ ಸಜ್ಜಾಗುತ್ತಿದ್ದೇವೆಯೇ ಹೊರತು ಮಧ್ಯಂತರ ಚುನಾವಣೆ ಇಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟಿದ್ದು
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಮೈತ್ರಿ ಸರ್ಕಾರದಲ್ಲಿಯೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಮೈತ್ರಿ ಸರ್ಕಾರವನ್ನು ಉಳಿಸುವುದು- ಬಿಡುವುದನ್ನು ಕಾಂಗ್ರೆಸ್ ಹೈಕಮಾಂಡ್ಗೆ ಬಿಡಲಾಗಿದೆ. ನಾವು ಪಕ್ಷ ಸಂಘಟನೆಯಲ್ಲಿ ಗಮನ ಹರಿಸಿದ್ದೇವೆ ಎಂದಿದ್ದಾರೆ.
ಕಾಂಗ್ರೆಸ್, ಜೆಡಿಎಸ್ಸಿಗೆ ಅಸ್ತಿತ್ವದ ಪ್ರಶ್ನೆಯ ನಡುವೆ ಮಧ್ಯಂತರ ಚುನಾವಣೆಯ ಜಪ
ನಾವೂ ಹೇಳೊಲ್ಲ, ಅವರೂ ಹೇಳಬಾರದು
ಸರ್ಕಾರ ತೊಂದರೆ ಇಲ್ಲದೆ ಸುಗಮವಾಗಿ ನಡೆಯಲಿ ಎಂಬ ಕಾರಣಕ್ಕೆ ಜೆಡಿಎಸ್ ಕೋಟಾದಡಿ ಇದ್ದ ಒಂದು ಸಚಿವ ಸ್ಥಾನವನ್ನು ಕೂಡ ಕಾಂಗ್ರೆಸ್ಗೆ ಬಿಟ್ಟುಕೊಟ್ಟಿದ್ದೇವೆ. ಸಮ್ಮಿಶ್ರ ಸರ್ಕಾರಕ್ಕೆ ನಾಲ್ಕು ವರ್ಷ ನಮ್ಮ ಕಡೆಯಿಂದ ಚ್ಯುತಿ ಬರುವುದಿಲ್ಲ. ಸರ್ಕಾರ ಉಳಿಸಿಕೊಳ್ಳುವ ಜವಾಬ್ದಾರಿ ಕಾಂಗ್ರೆಸ್ ಮೇಲೆಯೂ ಇದೆ. ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆ ಆಗುವ ರೀತಿ ನಾವು ಹೇಳಿಕೆ ಕೊಡೊಲ್ಲ. ಕಾಂಗ್ರೆಸ್ನವರೂ ಕೊಡಬಾರದು. ಕಾಂಗ್ರೆಸ್ನವರ ನಡೆ ಮೇಲೆ ಸರ್ಕಾರದ ಭವಿಷ್ಯ ಉಳಿದಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ದೂರು ನೀಡಿಲ್ಲ
ನಾನು ದೆಹಲಿಗೆ ಹೋಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ಹೇಳಿದ್ದೇನೆ ಎಂಬ ವರದಿ ಸುಳ್ಳು. ಐಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ರಾಹುಲ್ ಗಾಂಧಿ ಅವರ ಮನವೊಲಿಸಲು ಪ್ರಯತ್ನಿಸಿ ಬಂದಿದ್ದೇನೆ ಎಂದಿದ್ದಾರೆ.