ಬೆಂಗಳೂರು-ಮೈಸೂರು ಬುಲೆಟ್ ರೈಲು ಭಾಗ್ಯ ಅಸಾಧ್ಯ
ಬೆಂಗಳೂರು, ಫೆ. 11: ಬೆಂಗಳೂರು ಹಾಗೂ ಮೈಸೂರು ನಡುವಿನ ಅಂತರ ಅತ್ಯಂತ ಕಡಿಮೆ. ಆದ್ದರಿಂದ ಈ ಎರಡು ಪ್ರಮುಖ ನಗರಗಳ ನಡುವೆ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಾಗಬಲ್ಲ ಬುಲೆಟ್ ರೈಲು ಸಂಚಾರ ಆರಂಭಿಸುವುದು ಸಾಧ್ಯವಿಲ್ಲ ಎಂದು ಡಿಎಂಆರ್ಸಿ (Delhi Metro Rail Corporation) ಸಲಹೆಗಾರ ಶ್ರೀಧರನ್ ತಿಳಿಸಿದ್ದಾರೆ.
ಈ ಕುರಿತು ಶ್ರೀಧರನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರು ನಡುವೆ ಗರಿಷ್ಠ 200 ಕಿ.ಮೀ. ವೇಗದ ರೈಲು ಸಂಚಾರ ಆರಂಭಿಸಬಹುದು ಅಷ್ಟೇ. ಇಲ್ಲಿನ ರೈಲ್ವೆ ಹಳಿ ವಿವಿಧ ಜೋಡಣೆಗಳನ್ನು ಹೊಂದಿರುವುದೂ ಕಾರಣ. ಅಲ್ಲದೆ, ಕೇವಲ 130 ಕಿ.ಮೀ. ಅಂತರ ಇರುವ ಕಾರಣ ಬುಲೆಟ್ ರೈಲಿನ ಪ್ರಯೋಜನ ಸಂಪೂರ್ಣ ಪ್ರಮಾಣದಲ್ಲಿ ಬಳಕೆಯಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. [ಕಾಸರಗೋಡು-ಬೈಂದೂರು ನಡುವೆ ರೈಲು]
ಈಗ ಇರುವ ರೈಲ್ವೆ ಹಳಿ ಮೇಲೆ ಬುಲೆಟ್ ರೈಲು ಓಡಿಸುವುದು ಸಾಧ್ಯವಿಲ್ಲ ಎಂದು ಚೀನಾ ತಂತ್ರಜ್ಞರ ತಂಡ ರೈಲ್ವೆ ಇಲಾಖೆಗೆ ವರದಿ ಸಲ್ಲಿಸಿದ ನಂತರ ಶ್ರೀಧರನ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. [ವೈಷ್ಣೋದೇವಿ ದೇಗುಲಕ್ಕೆ ರೈಲು]
"ಅಲ್ಲದೆ, ಗಂಟೆಗೆ 200 ಕಿ.ಮೀ. ವೇಗದಲ್ಲಿ ಸಾಗಬಲ್ಲ ರೈಲು ಸಂಚಾರಕ್ಕಾಗಿ ಸೌಲಭ್ಯ ನಿರ್ಮಿಸಲು ಕಿ.ಮೀ.ಗೆ 90 ರಿಂದ 100 ಕೋಟಿ ರು. ಖರ್ಚು ಬೀಳುತ್ತದೆ. ಯೋಜನೆಗೆ ಒಟ್ಟು 11,000 ಕೋಟಿ ರು. ವೆಚ್ಚವಾಗಲಿದ್ದು, ಕಾಮಗಾರಿ ಮುಗಿಸಲು ಐದು ವರ್ಷ ಬೇಕಾಗುತ್ತದೆ." [ರೈಲ್ವೆ ಯೋಜನೆಯಿಂದ ರಾಜ್ಯಕ್ಕೆ ಹೊರೆ]
"ವೆಚ್ಚದ ಶೇ. 40ರಷ್ಟು ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಜಂಟಿಯಾಗಿ ಭರಿಸಬೇಕಾಗುತ್ತದೆ. ಉಳಿದ ಶೇ. 60ರಷ್ಟು ಮೊತ್ತವನ್ನು ಮಾರುಕಟ್ಟೆಯಿಂದಲೇ ಪಡೆಯಬೇಕಾಗುತ್ತದೆ. ಇದಕ್ಕಾಗಿ ವಿವರವಾದ ಪ್ರಾಜೆಕ್ಟ್ ವರದಿ ತಯಾರಿಸಲು 8 ರಿಂದ 9 ತಿಂಗಳು ಅಗತ್ಯ" ಎಂದು ಶ್ರೀಧರನ್ ಅವರು ಪತ್ರದಲ್ಲಿ ಕರ್ನಾಟಕ ಸರ್ಕಾರಕ್ಕೆ ವಿವರಣೆ ನೀಡಿದ್ದಾರೆ.