ಓಮಿಕ್ರಾನ್ ಆತಂಕ: ಶಾಲಾ-ಕಾಲೇಜು ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಹತ್ವದ ಹೇಳಿಕೆ
ಬೆಂಗಳೂರು, ಡಿ.07: ರಾಜ್ಯದಲ್ಲಿ ಒಂದು ಕಡೆ ಓಮಿಕ್ರಾನ್ ಪತ್ತೆಯಾಗಿದ್ದರೆ, ಮತ್ತೊಂದುಕಡೆ ಶಾಲಾ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಳ್ಳುತ್ತಿರುವುದು ಆತಂಕ ಮೂಡಿಸಿದೆ. ಈ ಮಧ್ಯೆ ಇತ್ತೀಚೆಗಷ್ಟೇ ಆರಂಭವಾಗಿರುವ ಶಾಲಾ ಕಾಲೇಜುಗಳು ಮತ್ತೆ ಮುಚ್ಚಲಿವೆಯೇ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.
ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದು, ಯಾವುದೇ ಕಾರಣಕ್ಕೂ ಶಾಲಾ- ಕಾಲೇಜುಗಳನ್ನು ಮತ್ತೆ ಬಂದ್ ಮಾಡುವ ಚಿಂತನೆ ಇಲ್ಲ. ಶಿಕ್ಷಣ ಇಲಾಖೆಯ ಮುಂದೆ ಅಂತಹ ಆಲೋಚನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಾಲೆ, ಕಾಲೇಜುಗಳಲ್ಲಿ ಕೋವಿಡ್ ಹೆಚ್ಚಳ: ಶೀಘ್ರದಲ್ಲೇ ಬಿ ಸಿ ನಾಗೇಶ್ ಭೇಟಿ
'ರಾಜ್ಯದಲ್ಲಿ ಎರಡು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಕೆಲವು ಶಾಲೆಗಳಲ್ಲಿಯೂ ಮಕ್ಕಳಿಗೆ ಕೋವಿಡ್ ತಗುಲಿರುವುದು ಗಮನಕ್ಕೆ ಬಂದಿದೆ. ಆದರೆ, ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಶಾಲೆ- ಕಾಲೇಜುಗಳು ಎಂದಿನಂತೆ ಮುಂದುವರಿಯುತ್ತವೆ. ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಲ್ಲಿ ಯಾವುದೇ ಗೊಂದಲ ಬೇಡ' ಎಂದು ಸಚಿವ ಬಿ.ಸಿ. ನಾಗೇಶ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ 1.04 ಕೋಟಿ ಮಕ್ಕಳು ಶಾಲೆಗಳಲ್ಲಿ ಇದ್ದಾರೆ. ಇವರ ಪೈಕಿ ಕೇವಲ 130 ಮಕ್ಕಳಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು, ಸಮಾಜದಲ್ಲಿ ಗಾಬರಿ ಹುಟ್ಟಿಸಬಾರದು ಎಂದು ಹೇಳಿದರು.
ಓಮಿಕ್ರಾನ್ ವೈರಸ್ ಮತ್ತು ಮಕ್ಕಳ ಆರೋಗ್ಯದ ಕುರಿತು ತಜ್ಞರಿಂದ ಅಭಿಪ್ರಾಯ ಪಡೆಯಲಾಗಿದೆ. ತೀವ್ರವಾಗಿ ಹರಡುತ್ತದೆಯಾದರೂ ಆತಂಕಕಾರಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅದರಲ್ಲೂ ಮಕ್ಕಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪೋಷಕರು ಯಾವುದೇ ಆತಂಕಕ್ಕೆ ಒಳಗಾಗದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.
ತಜ್ಞರು ಹೇಳುವ ಪ್ರಕಾರ ಸದ್ಯ ಕೋವಿಡ್ ಮೂರನೇ ಅಲೆಯ ಆತಂಕ ಇಲ್ಲ. ಒಂದು ವೇಳೆ ಬಂದರೆ ಅದು 2022ರ ಫೆಬ್ರುವರಿ ಅಂತ್ಯದಲ್ಲಿ ಬರಬಹುದು ಎಂಬ ಸೂಚನೆ ನೀಡಿದ್ದಾರೆ. ಎಲ್ಲ ಪೋಷಕರೂ ಸಹ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಂಡರೆ ಮುಂಬರುವ ಅಪಾಯವನ್ನೂ ಕಡಿಮೆ ಮಾಡಬಹುದು ಎಂದು ಶಿಕ್ಷಣ ಸಚಿವರು ಹೇಳಿದರು.
ಮಕ್ಕಳಿಗೆ ಮಾಸ್ಕ್ ಕಡ್ಡಾಯ
ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಇಲ್ಲದೆ ಯಾರೂ ಒಳಗೆ ಪ್ರವೇಶಿಸುವಂತಿಲ್ಲ. ಇದಲ್ಲದೆ, ಶಾಲೆಗಳಲ್ಲಿ ಸ್ಯಾನಿಟೇಜೇಷನ್ ಮಾಡಿ ಸ್ವಚ್ಛತೆ ಕಾಪಾಡಲು ಸೂಚಿಸಲಾಗಿದೆ. ಶಿಕ್ಷಣ ಮತ್ತು ಮಕ್ಕಳ ಆರೋಗ್ಯ ಎರಡೂ ಸಹ ಸರ್ಕಾರಕ್ಕೆ ಅಗತ್ಯ. ಮಕ್ಕಳ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಈಗಾಗಲೇ ನೀಡಿರುವ ವೇಳಾಪಟ್ಟಿ ಪ್ರಕಾರವೇ ತರಗತಿಗಳು, ಪರೀಕ್ಷೆಗಳು ನಡೆಯುತ್ತವೆ ಎಂದು ಹೇಳಿದರು.
ಶಾಲೆ ಬಂದ್ ಮಾಡಿದರೆ ಕಲಿಕೆಯಲ್ಲಿ ಹಿಂದುಳಿಯುವಿಕೆ:
ಕೋವಿಡ್ ಒಂದು ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಶಾಲಾ- ಕಾಲೇಜುಗಳನ್ನು ಸುಮಾರು ಒಂದೂವರೆ ವರ್ಷ ಬಂದ್ ಮಾಡಲಾಗಿದೆ. ಈ ಅವಧಿಯಲ್ಲಿ ಹೆಚ್ಚಿನ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ, ಅನೇಕರು ಅಕ್ಷರಾಭ್ಯಾಸವನ್ನೇ ಮರೆತಿದ್ದಾರೆ. ಅನೇಕ ಪೂರಕ ಕೋರ್ಸ್ಗಳನ್ನು ಜಾರಿ ಮಾಡಿ ಅವರನ್ನು ಮತ್ತೆ ಕಲಿಕೆಯ ದಾರಿಗೆ ತರಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮತ್ತೆ ಆತಂಕ ಹುಟ್ಟಿಸಿ ಶಾಲಾ- ಕಾಲೇಜುಗಳನ್ನು ಬಂದ್ ಮಾಡಿದರೆ ಶಿಕ್ಷಣ ವ್ಯವಸ್ಥೆಯೇ ಹದಗೆಡುತ್ತದೆ. ಯಾವುದೇ ಆತಂಕದ ವಾತಾವರಣ ಇಲ್ಲದ ಸಂದರ್ಭದಲ್ಲಿ ಪೋಷಕರೂ ಸಹ ತಮ್ಮ ಮಕ್ಕಳನ್ನು ಧೈರ್ಯವಾಗಿ ಶಾಲೆ- ಕಾಲೇಜುಗಳಿಗೆ ಕಳುಹಿಸಬೇಕು ಎಂದು ಶಿಕ್ಷಣ ಸಚಿವರು ಮನವಿ ಮಾಡಿದ್ದಾರೆ.
Recommended Video