ಕೊರೊನಾ 2ನೇ ಅಲೆ: ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಸಿಗುತ್ತಾ ಅನುಮತಿ?
ಬೆಂಗಳೂರು, ಡಿಸೆಂಬರ್.04: ಕರ್ನಾಟಕದಲ್ಲಿ ಇನ್ನೆರೆಡು ತಿಂಗಳಿನಲ್ಲೇ ಕೊರೊನಾವೈರಸ್ ಎರಡನೇ ಅಲೆ ಸೃಷ್ಟಿಯಾಗುವ ಆತಂಕವಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಎಚ್ಚರಿಕೆ ನೀಡಿದೆ. ಹೊಸ ವರ್ಷಾಚರಣೆ ಹೊಸ್ತಿಲಿನಲ್ಲೇ ರಾಜ್ಯದಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಮಹತ್ವದ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕೊಂಚ ಇಳಿಮುಖವಾಗುತ್ತಿದ್ದಂತೆ ಜನರು ಎಂದಿನಂತೆ ಓಡಾಡುವುದಕ್ಕೆ ಆರಂಭಿಸಿರುವುದು ಉತ್ತಮ ಬೆಳವಣಿಗೆಯಲ್ಲ ಎಂದಿದ್ದಾರೆ.
ಸಿಹಿಸುದ್ದಿ: ಭಾರತದಲ್ಲಿ 90,16,289 ಕೊರೊನಾ ಸೋಂಕಿತರು ಗುಣಮುಖ
ಕರ್ನಾಟಕದಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ಸೃಷ್ಟಿಯಾಗುವ ಆತಂಕವಿದೆ ಎಂದು ತಾಂತ್ರಿಕ ಸಲಹಾ ಸಮಿತಿಯು ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಹೇಳಿದ್ದೇವೆ. ಅಂತಿಮವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕೊರೊನಾವೈರಸ್ 2ನೇ ಅಲೆ ಸೃಷ್ಟಿ ಯಾವಾಗ?
ಜಗತ್ತಿನಲ್ಲಿ ಕೊರೊನಾವೈರಸ್ ಎರಡೇ ಅಲೆ ಹೆಚ್ಚಾಗಿದ್ದು, ರಾಜ್ಯದ ಮೇಲೂ ಅದರ ಪರಿಣಾಮ ಬೀರಲಿದೆ ಎಂದು ತಜ್ಞರ ಸಮಿತಿ 54 ಸಭೆ ನಡೆಸಿ ವರದಿ ನೀಡಿದೆ. ಮೊದಲನೆ ಅಲೆಯಲ್ಲಿ ಕಡಿಮೆಯಾಗುತ್ತ ಬರುತ್ತಿದೆ. ಡಿಸೆಂಬರ್ ಮತ್ತು ಜನವರಿ ತಿಂಗಳಿನಲ್ಲಿ ಚಳಿ ಪ್ರಮಾಣ ಹೆಚ್ಚಾಗಿರುತ್ತದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದಾಗ 45 ದಿನದಿಂದ 90 ದಿನದೊಳಗೆ ರಾಜ್ಯದಲ್ಲೂ ಎರಡನೇ ಅಲೆ ಸೃಷ್ಟಿಯಾಗುತ್ತದೆ. ಜನವರಿ ಅಥವಾ ಫೆಬ್ರವರಿ ವೇಳೆಗೆ ರಾಜ್ಯದಲ್ಲಿ 2ನೇ ಅಲೆ ಬರುವ ಸಾಧ್ಯತೆಯಿದೆ ಎಂದು ತಜ್ಞರ ಸಮಿತಿ ಸ್ಪಷ್ಟ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಹೊಸ ವರ್ಷದ ಆಚರಣೆಗೆ ಕಡಿವಾಣ
ಕರ್ನಾಟಕದಲ್ಲಿ ಡಿಸೆಂಬರ್.20 ರಿಂದ ಜನವರಿ.02ರವರೆಗೂ ಶಿಸ್ತುಬದ್ಧವಾಗಿ ಕಾನೂನು ಪಾಲನೆ ಅಗತ್ಯವಿದೆ. ಈ ಬಾರಿ ಹೊಸ ವರ್ಷಾಚರಣೆ ಮಾಡುವುದನ್ನು ರದ್ದುಪಡಿಸುವ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯು ಶಿಫಾರಸ್ಸು ಮಾಡಿದೆ. ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ(MG Road) ಬ್ರಿಗೇಡ್ ರಸ್ತೆಗಳಲ್ಲಿ ವರ್ಷಾಚರಣೆ ರದ್ದುಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಮುಖ್ಯಮಂತ್ರಿಯವರ ಜೊತೆಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಪ್ರಕಟಿಸಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಕೊವಿಡ್-19 ಲಸಿಕೆ ಬರುವವರೆಗೂ ಮಾರ್ಗಸೂಚಿ ಪಾಲನೆ
ರಾಜ್ಯದಲ್ಲಿ ಕೊವಿಡ್-19 ಲಸಿಕೆ ಬಿಡುಗಡೆ ಆಗುವವರೆಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಿದೆ. ಡಿಸೆಂಬರ್ 3ನೇ ವಾರದಲ್ಲಿ ಶಾಲಾ ಕಾಲೇಜು ತೆರೆಯುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಫೆಬ್ರವರಿ ಅಂತ್ಯದವರೆಗೂ ಪ್ರತಿನಿತ್ಯ 1.25 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಪಡಿಸಲಾಗುತ್ತದೆ. ತಾಂತ್ರಿಕ ಸಲಹಾ ಸಮಿತಿ ನೀಡಿರುವ ವರದಿಯಲ್ಲಿನ ಇತರೆ ಅಂಶಗಳ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪನವರ ಜೊತೆಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
Recommended Video
ತಾಂತ್ರಿಕ ಸಲಹಾ ಸಮಿತಿ ಸಲ್ಲಿಸಿದ ಶಿಫಾರಸ್ಸು ವರದಿ ಅಂಶಗಳು
- ರಾಜ್ಯದಲ್ಲಿ ಕೊವಿಡ್ ಕೇರ್ ಸೆಂಟರ್ ಗಳನ್ನು ವಿಸ್ತರಿಸಬೇಕು
- ಹಬ್ಬ-ಹರಿದಿನ, ಧಾರ್ಮಿಕರ ಆಚರಣೆ, ಸಾಂಸ್ಕೃತಿ ಕಾರ್ಯಕ್ರಗಳಲ್ಲಿ ಹೆಚ್ಚಿನ ಜನರು ಸೇರದಂತೆ ಎಚ್ಚರಿಕೆ ವಹಿಸುವುದು
- ಚಳಿಗಾಲ ಅವಧಿ ಆಗಿರುವುದರಿಂದ ಡಿಸೆಂಬರ್ ಮತ್ತು ಜನವರಿಯಲ್ಲಿ ಅತಿಹೆಚ್ಚಾಗಿ ಸೋಂಕು ಹರಡುವ ಅಪಾಯವಿರುತ್ತದೆ. ಈ ಹಿನ್ನೆಲೆಯಲ್ಲಿ ಅತಿಹೆಚ್ಚು ಜನರು ಸೇರುವ ಮದುವೆಯಂತಾ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ಶಿಫಾರಸ್ಸು
- ಮದುವೆ ಕಾರ್ಯಕ್ರಮದಲ್ಲಿ 100, ಸಾರ್ವಜನಿಕ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ 200, ಸಾವಿನ ಮನೆಯಲ್ಲಿ 50 ಹಾಗೂ ಅಂತ್ಯಸಂಸ್ಕಾರದಲ್ಲಿ 20 ಜನರು ಮಾತ್ರ ಭಾಗವಹಿಸಲು ಅನುಮತಿ ನೀಡುವುದು
- ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದ, ಸಾಮಾಜಿಕ ಅಂತರ ನಿರ್ಲಕ್ಷಿಸುವ, ಕೊವಿಡ್-19 ಶಿಷ್ಟಾಚಾರ ಪಾಲಿಸದ ವ್ಯಕ್ತಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಶಿಫಾರಸ್ಸು.