ಇನ್ನು ಯಾರಿಗೂ ಕೊರೊನಾ ಪರಿಹಾರ ಪ್ಯಾಕೇಜ್ ಇಲ್ಲ ಎಂದ ಯಡಿಯೂರಪ್ಪ!
ಬೆಂಗಳೂರು, ಮೇ 27: ''ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಇನ್ನು ಯಾವುದೇ ಸಮುದಾಯಕ್ಕೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆ ಮಾಡುವುದಿಲ್ಲ'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಬುಧವಾರ ಪಂಡಿತ್ ಜವಹರಲಾಲ್ ನೆಹರು ಅವರ 56 ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇರುವ ನೆಹರು ಅವರ ಪ್ರತಿಮೆಗೆ ಸಿಎಂ ಯಡಿಯೂರಪ್ಪ ಮಾಲಾರ್ಪಣೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
ಕೇಂದ್ರದ 2ನೇ ದಿನದ ಘೋಷಣೆ ಬಗ್ಗೆ ಸಿಎಂ ಯಡಿಯೂರಪ್ಪ ಹೇಳುವುದೇನು?
''ಕೊರೊನಾ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿದವರ ಪರಿಹಾರಕ್ಕಾಗಿ ಆರ್ಥಿಕ ಸಂಕಷ್ಟದ ನಡುವೆಯೂ 2100 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದೇನೆ. ಸರ್ಕಾರದಿಂದ ಇನ್ನು ಯಾವುದೇ ಸಮುದಾಯಕ್ಕೆ ಪರಿಹಾರ ಘೋಷಣೆ ಮಾಡಲ್ಲ'' ಎಂದು ಯಡಿಯೂರಪ್ಪ ಹೇಳಿದ್ದಾರೆ.
''ರಾಜ್ಯ ಸರ್ಕಾರ ಈಗಾಗಲೇ ಸಾಕಷ್ಟು ಸಮುದಾಯಗಳಿಗೆ ಪರಿಹಾರ ಘೋಷಿಸಿದೆ. ಘೋಷಿಸಿದ ಪರಿಹಾರಗಳನ್ನು ಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿದರು. ಕೊರೊನಾದಿಂದ ಸಾಕಷ್ಟು ಸಮಸ್ಯೆಗಳು ಉದ್ಬವಿಸಿವೆ. ಈಗ ಹೊರಗಿನ ರಾಜ್ಯಗಳಿಂದ ಜನ ಬರ್ತಿದ್ದಾರೆ. ಅವರೆಲ್ಲರಿಗೂ ಕ್ವಾರಂಟೈನ್ ವ್ಯವಸ್ಥೆ ಮಾಡಬೇಕಿದೆ. ಅವರ ವಸತಿಗೆ ಸಮಸ್ಯೆಯಾಗಿದೆ. ಇದರ ಬಗ್ಗೆಯೂ ಕೇಂದ್ರಕ್ಕೆ ಬರೆದ ಪತ್ರದಲ್ಲಿ ಗಮನ ಸೆಳೆಯಲಾಗಿದೆ'' ಎಂದು ಹೇಳಿದರು
''ಮಾಲ್ ಗಳನ್ನು ತೆರೆಯುವ ಬಗ್ಗೆ ಕೇಂದ್ರ ಸರ್ಕಾರದ ಒಪ್ಪಿಗೆ ಬೇಕಾಗುತ್ತದೆ. ಕೇಂದ್ರ ಒಪ್ಪಿದರೆ ಮಾಲ್ ಗಳನ್ನು ತೆರೆಯಲು ಅವಕಾಶ ನೀಡಲಾಗುತ್ತದೆ'' ಎಂದು ಅವರು ಹೇಳಿದರು.