ರೆಡ್ಡಿ ವಿರುದ್ಧದ ಅಕ್ರಮ ಗಣಿಗಾರಿಕೆ ಕೇಸು ಹಳ್ಳ ಹಿಡಿಯುತ್ತಿದೆಯೇ?
ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಸಾಬೀತುಪಡಿಸುವ ಬೇಕಾದ ಅಗತ್ಯ ಸಾಕ್ಷ್ಯಾಧಾರಗಳು ಇಲ್ಲ ಎಂಬ ಅಸಹಾಯಕತೆ ವ್ಯಕ್ತಪಡಿಸಿರುವ ಕೇಂದ್ರೀಯ ತನಿಖಾ ದಳ (ಸಿಬಿಐ).
ಬೆಂಗಳೂರು, ಮೇ 18: ಬಳ್ಳಾರಿಯ ಗಣಿ ಧಣಿ ಜನಾರ್ಧನ ರೆಡ್ಡಿ ಹಾಗೂ ಇತರರ ವಿರುದ್ಧದ ಸುಮಾರು 35 ಸಾವಿರ ಕೋಟಿ ಮೊತ್ತದ ಅಕ್ರಮ ಗಣಿಗಾರಿಕೆ ಕೇಸು ಹಳ್ಳ ಹಿಡಿಯುತ್ತಿದೆಯೇ? ಇಂಥದ್ದೊಂದು ಪ್ರಶ್ನೆ ಈಗ ಪ್ರಜ್ಞಾವಂತರ ಪಡಸಾಲೆಯಲ್ಲಿ ಹರಿದಾಡುತ್ತಿದೆ.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ), ಕೇಂದ್ರ ಸರ್ಕಾರದ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಗೆ ಸಲ್ಲಿಸಿರುವ ಒಂದು ಮಾಹಿತಿ ಈ ಪ್ರಕರಣ ಠುಸ್ ಪಟಾಕಿ ಆಗುತ್ತಿರುವುದರ ಮುನ್ಸೂಚನೆ ನೀಡಿದೆ.
ಕೈಗಾರಿಕಾ ವಾಣಿಜ್ಯ ಇಲಾಖೆಗೆ ಪತ್ರ ಬರೆದಿರುವ ಸಿಬಿಐ, ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳನ್ನು ಸಾಬೀತುಪಡಿಸುವ ಬೇಕಾದ ಅಗತ್ಯ ಸಾಕ್ಷ್ಯಾಧಾರಗಳು ಇಲ್ಲದಿರುವುದರಿಂದ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಮುಂದಿನ ತನಿಖೆ ನಡೆಸಲಾಗಲೀ ಅಥವಾ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡುವ ವಿಚಾರ ಸದ್ಯಕ್ಕೆ ಸಿಬಿಐ ಮುಂದಿಲ್ಲ ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಹೆಚ್ಚಿನ ತನಿಖೆ ಸಾಧ್ಯವಿಲ್ಲ ಎಂದಿತು ಸಂಸ್ಥೆ
ಗೋವಾದ ಬಂದರುಗಳಿಂದ ಟನ್ ಗಟ್ಟಲೆ ಕಬ್ಬಿಣದ ಅದಿರು ವಿದೇಶಗಳಿಗೆ ಅಕ್ರಮವಾಗಿ ರವಾನೆಯಾಗಿರುವುದರ ಬಗ್ಗೆ ಯಾವುದೇ ಪ್ರಕರಣಗಳೂ ದಾಖಲಾಗಿಲ್ಲ. ಇದರಿಂದಾಗಿ, ಕರ್ನಾಟಕದ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ನ್ಯಾ. ಹೆಗ್ಡೆ ವರದಿ ಹೇಳಿದ್ದೇನು?
ಮೂರು ವರ್ಷಗಳ ಹಿಂದೆ ಕರ್ನಾಟಕದ ಅಕ್ರಮ ಗಣಿಗಾರಿಕೆ ವಿರುದ್ಧ ಅಂದಿನ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹಾಗೂ ಅವರ ತಂಡ ನೀಡಿದ್ದ ಸಮಗ್ರ ವರದಿಯ ಆಧಾರದಲ್ಲಿ ಜನಾರ್ಧನ ರೆಡ್ಡಿ ವಿರುದ್ಧ ತನಿಖೆಗೆ ಆದೇಶಿಸಲಾಗಿತ್ತು. ಆ ವರದಿಯಲ್ಲಿ 12.57 ಮೆಟ್ರಿಕ್ ಟನ್ ನಷ್ಟು ಅದಿರನ್ನು ವಿದೇಶಗಳಿಗೆ ಕಾನೂನು ಬಾಹಿರವಾಗಿ ರಫ್ತು ಮಾಡಿರುವುದಾಗಿ ಹೆಗ್ಡೆ ತಿಳಿಸಿದ್ದರು.
ಯಾರು ಉತ್ತರಿಸುತ್ತಾರೆ ಇವರ ಪ್ರಶ್ನೆಗೆ?
ಈ ಬಗ್ಗೆ ಪ್ರತಿಕ್ರಿಯಿಸಿರುವ ನ್ಯಾ. ಸಂತೋಷ್ ಹೆಗ್ಡೆ, ಮೂರು ವರ್ಷಗಳ ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ನಾವು ನೀಡಿದ್ದ ವರದಿ ಯಾವುದೇ ದುರುದ್ದೇಶದಿಂದ ಕೂಡಿರಲಿಲ್ಲ. ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆ ನಡೆದಿರುವುದಂತೂ ಸತ್ಯ. ಸಾಕ್ಷಾಧಾರಗಳ ಕೊರತೆ ಎಂದು ಹೇಳುವ ಹಾಗೇ ಇಲ್ಲ. ಬೇಲೇಕೇರಿ ಬಂದರಿನಲ್ಲಿ ಸಂಗ್ರಹಿಸಲಾಗಿದ್ದ ಸಾವಿರಾರು ಟನ್ ಗಳಷ್ಟು ಅಕ್ರಮ ಅದಿರು ಏಕಾಏಕಿ ಕಾಣೆಯಾಯಿತು. ಇದಕ್ಕೆ ಕಾರಣ ಯಾರು? ಯಾರಾದರೂ ಇರಲೇಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಹೈಕೋರ್ಟ್ ಹೇಳಿದ್ದೇನು?
ಈಗಾಗಲೇ ಕರ್ನಾಟಕ ಹೈಕೋರ್ಟ್, ಕೆಲ ತಾಂತ್ರಿಕ ಕಾರಣಗಳಿಂದಾಗಿ ಜನಾರ್ಧನ ರೆಡ್ಡಿ ವಿರುದ್ಧದ ಪ್ರಕರಣಗಳಿಂದ ಅವರನ್ನು ಜಾಮೀನಿನ ಮೇರೆಗೆ ಬಿಡುಗಡೆ ಮಾಡಿದೆ. ಅಕ್ರಮ ಗಣಿಗಾರಿಕೆ ಪ್ರಕರಣದ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯವು (ಇಡಿ) ತನ್ನ ಕಾನೂನಿನ ವ್ಯಾಪ್ತಿಯನ್ನು ಮೀರಿ ಈ ಪ್ರಕರಣದ ತನಿಖೆ ನಡೆಸಿದೆ ಎಂದಿದ್ದ ಹೈಕೋರ್ಟ್, ಕೆಲವು ಆರೋಪಗಳಿಂದ ರೆಡ್ಡಿ ಹಾಗೂ ಇತರರನ್ನು ಮುಕ್ತಗೊಳಿಸಿ ರೆಡ್ಡಿ ಅವರಿಗೆ ಜಾಮೀನು ನೀಡಿದೆ. ಅದರ ಬೆನ್ನಲ್ಲೇ, ಈಗ ಸಿಬಿಐ ಕೂಡಾ ಪ್ರಕರಣದ ತನಿಖೆ ಬಗ್ಗೆ ಕೈ ಚೆಲ್ಲಿರುವುದು ಈ ಪ್ರಕರಣ ಹಳ್ಳ ಹಿಡಿಯಲಿದೆಯೇ ಎಂಬುದರ ಬಗ್ಗೆ ಗುಮಾನಿ ಎಬ್ಬಿಸಿದೆ.
ಆದರೂ, ಕೇಸು ನಿಲ್ಲೋದು ಅನುಮಾನ!
ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಜಾರಿ ನಿರ್ದೇಶನಾಲಯವು ಮೇಲ್ಮನವಿ ಸಲ್ಲಿಸಿದೆ. ಆದರೆ, ಇದಕ್ಕೆ ಬೆಂಬಲವಾಗಿ ನಿಲ್ಲಬೇಕಿದ್ದ ಸಿಬಿಐ ಈಗ ಅಸಹಾಯಕತೆ ವ್ಯಕ್ತಪಡಿಸಿರುವುದು ನ್ಯಾಯಾಂಗದ ಕಟಕಟೆಯಲ್ಲಿ ಈ ಕೇಸು ನಿಲ್ಲುವುದು ಅನುಮಾನ ಎಂಬ ಭಾಸ ಮೂಡಿಸಿದೆ.
{promotion-urls}