ಮುಂಬರುವ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಡಿ.ಕೆ ಶಿವಕುಮಾರ್
ಬೆಂಗಳೂರು, ಡಿಸೆಂಬರ್ 20: ಮುಂಬರುವ ಬೇಸಿಗೆಯಲ್ಲಿ ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗದಂತೆ ಸಕಲ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
"ಬೇಸಿಗೆಯಲ್ಲಿ ನಿಗದಿತ ವಿದ್ಯುತ್ನ್ನು ನಿರಂತರವಾಗಿ ಪೂರೈಕೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ," ಎಂದು ಅವರು ಭರವಸೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರಿಂದ 'ಬೆಸ್ಕಾಂ ಮಿತ್ರ' ಅಪ್ಲಿಕೇಷನ್ ಬಿಡುಗಡೆ
ನಗರದ ಖಾಸಗಿ ಹೋಟೆಲ್ನಲ್ಲಿಂದು ಬೆಸ್ಕಾಂ ವತಿಯಿಂದ ಹಮ್ಮಿಕೊಳ್ಳಲಾಗಿದ್ದ "ಬೆಸ್ಕಾಂ ಮಿತ್ರ" ಮೊಬೈಲ್ ಆ್ಯಪ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, "ರಾಜ್ಯದ ಜನತೆ ಆತಂಕಪಡುವ ಅಗತ್ಯವಿಲ್ಲ. ಜಲಾಶಯಗಳಲ್ಲಿ ಸಾಕಷ್ಟು ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳಲಾಗಿದೆ. ವಿದ್ಯುತ್ ಸಮಸ್ಯೆಯಾಗದಂತೆ ಸಕಲ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ," ಎಂದರು.
ಕಲ್ಲಿದ್ದಲು ಕೊರತೆಯಿಲ್ಲ
ಕಲ್ಲಿದ್ದಲು ಕೊರತೆಯಿಂದ ರಾಜ್ಯ ಈ ಬಾರಿ ಬೇಸಿಗೆಯಲ್ಲಿ ಕತ್ತಲೆಯಲ್ಲಿ ಮುಳುಗಲಿದೆ ಎಂದು ಕೆಲವು ಮಾಧ್ಯಮದಲ್ಲಿ ಪ್ರಕಟಗೊಳ್ಳುತ್ತಿದೆ. ಆದರೆ ಇದು ವಾಸ್ತವಕ್ಕೆ ದೂರವಾದ ಸುದ್ದಿಯಾಗಿದೆ ಎಂದ ಅವರು, "ಒಂದು ಮಿಲಿಯನ್ ಟನ್ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲಾಗಿದೆ. ಸಮಸ್ಯೆ ಎದುರಾದಲ್ಲಿ ಮತ್ತಷ್ಟು ಕಲ್ಲಿದ್ದಲು ಖರೀದಿಸಲಾಗುವುದು," ಎಂದು ತಿಳಿಸಿದರು.
ವಿದ್ಯುತ್ ಖರೀದಿ
ಅಲ್ಲದೆ, 4 ರೂ. 80 ಪೈಸೆ. ದರದಲ್ಲಿ ಒಂದು ಸಾವಿರ ಮೆಗಾವ್ಯಾಟ್ ವಿದ್ಯುತ್ನ್ನು ಖಾಸಗಿಯಾಗಿ ಖರೀದಿಸಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ ಅವರು, ನೆರೆ ರಾಜ್ಯಗಳಿಗೆ ಹೋಲಿಸಿದಲ್ಲಿ ರಾಜ್ಯದ ವಿದ್ಯುತ್ ಸರಬರಾಜು(ಟ್ರಾನ್ಸ್ ಮಿಷನ್) ವೆಚ್ಚ ಹೆಚ್ಚಿದ್ದು ಇದನ್ನು ತಗ್ಗಿಸುವಂತೆ ಕೇಂದ್ರದ ಮುಂದೆ ಪ್ರಸ್ತಾವನೆ ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ
ಇಡೀ ವಿಶ್ವವೇ ನಮ್ಮ ಬೆಂಗಳೂರು ಮುಖಾಂತರ ಭಾರತ ದೇಶವನ್ನು ಗಮನಿಸುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿದೆ. ಇದಕ್ಕೆ ಇಂಧನ ಇಲಾಖೆಯು ಹೊರತಾಗಿಲ್ಲ ಎಂದು ತಿಳಿಸಿದ ಅವರು "ರಾಜ್ಯದ 5 ವಿದ್ಯುತ್ ಕಂಪನಿಗಳು ದೇಶದಲ್ಲಿಯೇ ಉತ್ತಮ ವಿದ್ಯುತ್ ಕಂಪನಿಗಳೆಂದು ಹೆಸರು ಮಾಡಿದ್ದು, ಒಂದರಿಂದ ಏಳರೊಳಗಿನ ಸ್ಥಾನವನ್ನು ಗಿಟ್ಟಿಸಿರುವುದು ರಾಜ್ಯಕ್ಕೆ ಹೆಮ್ಮೆ ತರುವ ವಿಷಯ," ಎಂದರು.
ರೈತರಲ್ಲಿ ಜಾಗೃತಿ
ಮುಂದುವರೆದು ಮಾತನಾಡಿದ ಅವರು, "ಒಬ್ಬೊಬ್ಬ ರೈತರಿಗೆ ಒಂದರಿಂದ ಒಂದೂವರೆ ಲಕ್ಷ ರೂ.ಗಳನ್ನು ಸರ್ಕಾರವೇ ಭರಿಸುವ ಮೂಲಕ ರೈತರ ವಿದ್ಯುತ್ ಸಂಪರ್ಕವನ್ನು ಸಕ್ರಮ ಮಾಡಲಾಗಿದೆ. ವಿದ್ಯುತ್ ಬಳಕೆ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಜಾಗೃತ ದಳ ಪರಿಣಾಮಕಾರಿಯಾಗಿ ಮಾಡುತ್ತಿದೆ," ಎಂದರು.
ಬೆಸ್ಕಾಂಗೆ 1.4 ಕೋಟಿ ಗ್ರಾಹಕರು
"ರಾಜ್ಯದ ಅರ್ಧದಷ್ಟು ಅಂದರೆ 1.4 ಕೋಟಿ ಗ್ರಾಹಕರು ಬೆಸ್ಕಾಂ ಗ್ರಾಹಕರಾಗಿದ್ದು ಬೆಸ್ಕಾಂ ಸಾರ್ವಜನಿಕರ ಒಳಿತಿಗಾಗಿ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಸ್ಮಾರ್ಟ್ ಮೀಟರ್ ಅಳವಡಿಕೆ, ಕೇಬಲ್ ಬದಲಾವಣೆ ಇದಕ್ಕೆ ಹಲವು ಉದಾಹರಣೆ," ಎಂದರು.
ಕೈಗಾರಿಕೆಗಳಿಂದ ಪರೋಕ್ಷ ಪ್ರಗತಿ
ರಾಜ್ಯದಲ್ಲಿ ಬಂಡವಾಳ ಹೂಡಿರುವ ಕೈಗಾರಿಕೆಗಳು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವ ಮೂಲಕ ರಾಜ್ಯದ ಪ್ರಗತಿಗೆ ಪರೋಕ್ಷವಾಗಿ ಶ್ರಮಿಸುತ್ತಿವೆ. ಇಂತಹ ಕೈಗಾರಿಕೆಗಳಿಗೆ ವಿದ್ಯುತ್ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಸಮಾರಂಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.