ಲೋಡ್ ಶೆಡ್ಡಿಂಗ್ ಇರಲ್ಲ, ಬೆಲೆ ಏರಿಕೆ ನಮ್ಮ ಕೈಲಿಲ್ಲ: ಡಿಕೆಶಿ
ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರಲ್ಲ, ಬೆಲೆ ಏರಿಕೆ ನಮ್ಮ ಕೈಲಿಲ್ಲ, ಉಪ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪರ ಬರಲಿದೆ ಇವಿಷ್ಟು ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ವಿಧಾನಸೌಧದ ಪಡಸಾಲೆಯಲ್ಲಿ ಹೇಳಿದ ಮಾತುಗಳಿವು
ಬೆಂಗಳೂರು, ಏಪ್ರಿಲ್ 12: ಲೋಡ್ ಶೆಡ್ಡಿಂಗ್ ಜಾರಿ, ವಿದ್ಯುತ್ ಬೆಲೆ ಏರಿಕೆ, ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಫಲಿತಾಂಶದ ಬಗ್ಗೆ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಮಂಗಳವಾರ ವಿಧಾನಸೌಧದ ಪಡಸಾಲೆಯಲ್ಲಿ ಹೇಳಿದರು.
ಸಚಿವ ಸಂಪುಟ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕೃತವಾಗಿ ಲೋಡ್ ಶೆಡ್ಡಿಂಗ್ ಜಾರಿ ಮಾಡಿಲ್ಲ. ಆದರೆ ತಾಂತ್ರಿಕ ಕಾರಣಗಳಿಂದ ವಿದ್ಯುತ್ ವ್ಯತ್ಯಯ ಆಗಿರಬಹುದು ಎಂದರು.
ವಿದ್ಯುತ್ ದರ ಪರಿಷ್ಕರಣೆ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ. 2016ರಲ್ಲಿ ಎಸ್ಕಾಂಗಳು ನೀಡಿದ್ದ ಬೇಡಿಕೆಯನ್ನು ಈಗ ಈಡೇರಿಸಲಾಗುತ್ತಿದೆ.
ದರ ಪರಿಷ್ಕರಿಸುವಂತೆ ವಿದ್ಯುತ್ ವಿತರಣಾ ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದ್ದರೂ, ಬಹುಕಾಲ ಮುಂದೂಡಲಾಗಿತ್ತು. ಈಗ ಅನಿವಾರ್ಯವಾಗಿ ಗ್ರಾಹಕರು ಮತ್ತು ಸರ್ಕಾರದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ದರವನ್ನು ಪರಿಷ್ಕರಿಸಲಾಗಿದೆ ಎಂದರು.
ಕೈಗಾರಿಕೆಗಳ ಅನುಕೂಲತೆಗಾಗಿ ಕೆಲವು ವಿನಾಯ್ತಿಗಳನ್ನು ಬೆಸ್ಕಾಂ ವ್ಯಾಪ್ತಿಯಲ್ಲಿ ನೀಡಲಾಗಿದೆ. ವಿದ್ಯುತ್ ಪರಿಷ್ಕರಣೆಗೂ ಮುನ್ನ ಸಾರ್ವಜನಿಕರ ಕುಂದುಕೊರತೆ ಅಹವಾಲಗಳನ್ನು ಆಲಿಸಿ, ಕೆಇಆರ್ಸಿ ಕೈಗೊಂಡಿರುವ ತೀರ್ಮಾನದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು.
ಉಪಚುನಾವಣೆಯಲ್ಲಿ ನಮಗೆ ಗೆಲುವು: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಹುಮತದಿಂದ ಸುಲಭ ಜಯ ದಾಖಲಿಸುವ ವಿಶ್ವಾಸವಿದೆ. ಇದಕ್ಕೆ ಯಾವುದೇ ಯಾವುದೇ ಗುಪ್ತಚರ ವರದಿಯ ಅಗತ್ಯವಿಲ್ಲ. ಶ್ರಮವಿದ್ದ ಕಡೆ ಫಲವಿರುತ್ತದೆ. ಈ ಫಲಿತಾಂಶ ಸರ್ಕಾರದ ಸಾಧನೆಯ ಪ್ರತಿಬಿಂಬವಾಗಲಿದೆ ಎಂದು ಹೇಳಿದರು.