ಪ್ರತ್ಯೇಕ ಧ್ವಜಕ್ಕೆ ಕಾನೂನಿನ ಅಡೆತಡೆಯಿಲ್ಲ : ಜಯಚಂದ್ರ
ಬೆಂಗಳೂರು, ಜುಲೈ 19 : ಕರ್ನಾಟಕಕ್ಕೆ ಪ್ರತ್ಯೇಕ ಬಾವುಟ ರೂಪಿಸಬೇಕೆಂಬ ಸಂಗತಿ, ಅದು ರಾಷ್ಟ್ರದಾದ್ಯಂತ ಸೃಷ್ಟಿಸಿರುವ ವಾದ ವಿವಾದದಿಂದಾಗಿ, ರಾಜ್ಯ ಸರಕಾರಕ್ಕೆ ಅತ್ಯಂತ ಪ್ರತಿಷ್ಠೆಯ ಸಂಗತಿಯಾಗಿ ಪರಿಣಮಿಸಿದೆ.
ಬಿಜೆಪಿ ಬಲಿ ಹಾಕಲು ಸಿದ್ದರಾಮಯ್ಯರಿಂದ 'ಕನ್ನಡ' ಅಸ್ತ್ರ?
ಕಾನೂನಾತ್ಮಕವಾಗಿ ಕರ್ನಾಟಕ ಪ್ರತ್ಯೇಕ ಧ್ವಜ ಹೊಂದುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತನ್ನದೇ ಸ್ವಂತ ಬಾವುಟ ಹೊಂದಲು ಯಾವುದೇ ಕಾನೂನಿನ ತೊಡಕಿರುವುದಿಲ್ಲ ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜವಿಲ್ಲವಾದರೂ, ಹಳದಿ ಮತ್ತು ಕೆಂಪು ಬಣ್ಣಗಳಿರುವ, ಕನ್ನಡ ಸಾಹಿತ್ಯ ಪರಿಷತ್ತು ಅಂಗೀಕರಿಸಿರುವ ಬಾವುಟವನ್ನೇ ಕರ್ನಾಟಕದ ಬಾವುಟವೆಂದು ಒಪ್ಪಿಕೊಳ್ಳಲಾಗಿದೆ. ಆದರೆ, ಇದಕ್ಕೆ ಕಾನೂನಿನ ಮಾನ್ಯತೆಯಿಲ್ಲ. ಈ ಕಾರಣದಿಂದಾಗಿ ಪ್ರತ್ಯೇಕ ಧ್ವಜಕ್ಕೆ ರಾಜ್ಯ ಸರಕಾರ ಪಟ್ಟು ಹಿಡಿದಿದೆ. ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರಕಾರಕ್ಕೆ ಇದು ಅವಶ್ಯಕವೂ ಆಗಿದೆ.
ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ : ವಾದ ಪ್ರತಿವಾದ ವಿವಾದ
ನಾಡಗೀತೆಯಾಗ 'ಜಯಭಾರತ ಜನನಿಯ ತನುಜಾತೆ'ಗೂ ಇದೇ ರೀತಿಯ ಅಡೆತಡೆಗಳು ಬಂದಿದ್ದವು. ಆದರೆ, ಈಗ ಅದನ್ನು ನಾಡಗೀತೆಯಾಗಿ ಅಂಗೀಕರಿಸಲಾಗಿದೆ. ಈ ಹಾಡಿಗೆ ಸಾಂವಿಧಾನಾತ್ಮಕವಾಗಿ ಅಥವಾ ಕಾನೂನುಬದ್ಧವಾಗಿ ಮಾನ್ಯತೆ ಇಲ್ಲದಿದ್ದರೂ ಎಲ್ಲ ಸಭೆ ಸಮಾರಂಭಗಳಲ್ಲಿಯೂ ಹಾಡಲಾಗುತ್ತಿಲ್ಲವೆ ಎಂದು ಜಯಚಂದ್ರ ಅವರು ಮರುಪ್ರಶ್ನೆ ಮಾಡಿದ್ದಾರೆ.
ಆದರೂ, ಪ್ರತ್ಯೇಕ ಧ್ವಜದ ಬಗ್ಗೆ ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಕಾನೂನು ತಜ್ಞರ ಅಭಿಮತ ಮತ್ತು ಇತರ ಕಾನೂನಾತ್ಮಕ ನಿರ್ದೇಶನಗಳನ್ನು ಪರಿಗಣನೆಗೆ ತೆಗೆದುಕೊಂಡು ಮುಂದಿನ ಅಡಿ ಇಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಚಿಸಿರುವ ಸಮಿತಿಯೊಂದಿಗೆ ಮೊದಲಿಗೆ ಸಭೆ ನಡೆಸಿ, ಸಾರ್ವಜನಿಕರ ಮುಕ್ತ ಅಭಿಪ್ರಾಯಗಳನ್ನು ಆಲಿಸಿ, ವಿರೋಧ ಪಕ್ಷದ ಅನಿಸಿಕೆಗಳನ್ನು ಕೂಡ ಪರಿಗಣನೆಗೆ ತೆಗೆದುಕೊಂಡು ನಂತರ ಏನು ಮಾಡಬೇಕೆಂಬುದನ್ನು ತೀರ್ಮಾನಿಸುವುದಾಗಿ ಅವರು ತಿಳಿಸಿದರು.