ಕೊರೊನಾ ಕನ್ಪರ್ಮ್ ಎನ್ನಲು ಕರ್ನಾಟಕದಲ್ಲಿ ಪ್ರಯೋಗಾಲಯ ಇಲ್ಲ!
ಬೆಂಗಳೂರು, ಮಾರ್ಚ್ 13: ಜಾಗತಿಕವಾಗಿ ತೀವ್ರ ಆತಂಕ ಸೃಷ್ಟಿಸಿರುವ ಕೊರೊನಾ ಮಹಾಮಾರಿ (ಕೋವಿಡ್19) ಕರ್ನಾಟಕದಲ್ಲೂ ಭಯಾನಕ ವಾತವರಣವನ್ನು ಸೃಷ್ಟಿಸಿದೆ.
ಇದುವರೆಗೆ ರಾಜ್ಯದಲ್ಲಿ ಕೊರೊನಾಕ್ಕೆ ಒಬ್ಬ ವ್ಯಕ್ತಿ ಮೃತಪಟ್ಟು, ಐವರಲ್ಲಿ ಸೋಂಕು ಕಾಣಿಸಿಕೊಂಡಿರುವುದರಿಂದ ರಾಜ್ಯ ಸರ್ಕಾರ ಹೈ ಅಲರ್ಟ್ ಘೊಷಿಸಿದೆ. ಆದರೆ, ಕೊರನಾ ಸೋಂಕಿತರ ಬಗ್ಗೆ ಸೂಕ್ತ ತಪಾಸಣೆ ನಡೆಸಿ, ಶೀಘ್ರವೇ ವರದಿಯನ್ನು ಅಂಗೀಕರಿಸಲು ರಾಜ್ಯದಲ್ಲಿ ಸೂಕ್ತ ಪ್ರಯೋಗಾಲಯ ಇಲ್ಲದಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ಶಾಕಿಂಗ್; ಕೊರೊನಾ ವೈರಸ್ ಗೆ ಭಾರತದಲ್ಲಿ ಮೊದಲ ಬಲಿ!
ಕರ್ನಾಟಕದಲ್ಲಿ ಕೊರೊನಾ ಸೋಂಕು ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳ ಪರೀಕ್ಷೆಗೆ ಬೆಂಗಳೂರು, ಹಾಸನ ಶಿವಮೊಗ್ಗ ಹಾಗೂ ಮೈಸೂರಿನಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಆದರೆ, ಪ್ರಯೋಗಾಲಯಗಳನ್ನು ಸ್ಥಾಪಿಸಿದರೂ ಕೊರೊನಾ ಸೋಂಕು ಪರೀಕ್ಷೆಗೆ ಕಳುಹಿಸಿದ ವರದಿಗಳು ವೈದ್ಯರ ಕೈ ಸೇರುವುದು ವಿಳಂಬ ಆಗುತ್ತಿದೆ.
ಏಕೆ ವಿಳಂಬ?
ರಾಜ್ಯದಲ್ಲಿ ಸದ್ಯ ಐದು ಪ್ರಯೋಗಾಲಯ ಹಾಗೂ ಎರಡು ರಕ್ತದ ಮಾದರಿಗಳ ಸಂಗ್ರಹ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಶಂಕಿತರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಗಳನ್ನು ಪ್ರಯೋಗಾಲಯಗಳಿಗೆ ರವಾನೆ ಮಾಡಲಾಗುತ್ತದೆ. ಅಂದೇ ವರದಿ ಬಂದರೂ ಎರಡನೇ ಅಭಿಪ್ರಾಯ ಪಡೆಯಲು ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ ವ್ಯಕ್ತಿಗಳ ಮಾದರಿಗಳನ್ನು ಕಳುಹಿಸಲಾಗುತ್ತಿದೆ. ಇದರಿಂದಾಗಿ ಕೊರೊನಾ ಪಕ್ಕಾ ಇದೆಯೋ ಇಲ್ಲವೋ ಎಂಬ ವರದಿಗಳು ರೋಗಿಗಳ ಕೈಸೇರುವುದು ವಿಳಂಬವಾಗುತ್ತಿದೆ.
ಕರ್ನಾಟಕದಲ್ಲಿ ಇಲ್ಲ
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ನಿಯಮಾವಳಿ ಪ್ರಕಾರ ಕೋವಿಡ್ ಸೋಂಕು ದೃಢಪಟ್ಟಲ್ಲಿ ಅವರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆಗೆ ಕಡ್ಡಾಯವಾಗಿ ಕಳುಹಿಸಬೇಕು. ಅದೇ ರೀತಿ, ಮೊದಲ 10 ಪ್ರಕರಣಗಳಲ್ಲಿ ನೆಗೆಟಿವ್ ಎಂದು ವರದಿ ಉಲ್ಲೇಖಿಸಿದರೂ ಎರಡನೇ ಅಭಿಪ್ರಾಯ ಪಡೆಯಲು ಮಾದರಿಯನ್ನು ಪುಣೆಗೆ ರವಾನಿಸಲೇಬೇಕು. ಆದರೆ, ಕರ್ನಾಟಕದಲ್ಲಿ ಈ ಸೌಕರ್ಯ ಇರದಿರುವುದು ಆತಂಕಕ್ಕೆ ಕಾರಣವಾಗಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪತ್ನಿಗೆ ಕೊರೊನಾ ಸೋಂಕು
ದೃಢಪಟ್ಟಾಗ ಮಾತ್ರ ಅಧಿಕೃತ
ಪ್ರಾದೇಶಿಕ ಪ್ರಯೋಗಾಲಯಗಳಲ್ಲಿ ಸೋಂಕು ಶಂಕಿತರ ವರದಿ ಪಾಸಿಟಿವ್ ಬಂದರೂ ಬಹಿರಂಗಪಡಿಸುವಂತಿಲ್ಲ. ರೋಗಿಗೆ ಚಿಕಿತ್ಸೆಯನ್ನು ಮುಂದುವರಿಸಿ, ಪ್ರತ್ಯೇಕ ವಾರ್ಡ್ನಲ್ಲಿ ನಿಗಾ ಇಡಬೇಕು. ಕೂಡಲೇ ಅವರ ಮಾದರಿಯನ್ನು ಪುಣೆಯ ಎನ್ಐವಿ ಕೇಂದ್ರಕ್ಕೆ ರವಾನಿಸಬೇಕು. ಅಲ್ಲಿ ದೃಢಪಟ್ಟಾಗ ಮಾತ್ರ ಅಧಿಕೃತವಾಗಿ ಸೋಂಕು ಇರುವುದನ್ನು ಘೋಷಿಸಿಬೇಕು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹೇಳುತ್ತದೆ.
ಒಂದು ವಾರ ಕರ್ನಾಟಕ ಬಂದ್!
ಕೊರೊನಾ ಹರಡದಂತೆ ತಡೆಯಲು ಕರ್ನಾಟಕ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಒಂದು ವಾರಗಳ ಕಾಲ ಮಾಲ್, ಚಿತ್ರಮಂದಿರ, ಪಬ್, ಸಾರ್ವಜನಿಕ ಕಾರ್ಯಕ್ರಮಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಶುಕ್ರವಾರ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು. ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಜನರು ಸರ್ಕಾರದ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.