ವಿಧಾನಸೌಧದಲ್ಲಿ ಪ್ರಮಾಣವಚನ: ಯಾರೂ ಪೂರ್ಣಾವಧಿ ಆಡಳಿತ ನಡೆಸಿಲ್ಲ!
Recommended Video
ಬೆಂಗಳೂರು, ಮೇ 23: ಚಾಮರಾಜನಗರಕ್ಕೆ ಕಾಲಿಟ್ಟ ಯಾವ ಮುಖ್ಯಮಂತ್ರಿಯೂ ಅಧಿಕಾರ ಅವಧಿ ಪೂರ್ಣಗೊಳಿಸುವುದಿಲ್ಲ ಎಂಬ ಅಭಿಪ್ರಾಯವಿತ್ತು.
ಆದರೆ, ತಮ್ಮ ಅಧಿಕಾರಾವಧಿಯಲ್ಲಿ ಎಂಟಕ್ಕೂ ಹೆಚ್ಚು ಬಾರಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದ ಸಿದ್ದರಾಮಯ್ಯ ಅವರು ಐದು ವರ್ಷದ ಆಡಳಿತ ಪೂರ್ಣಗೊಳಿಸಿ, ಅದು ಹುಸಿ ನಂಬಿಕೆ ಎಂದು ಸಾಬೀತುಪಡಿಸಿದ್ದರು.
ಬುಧವಾರ ಪರಮೇಶ್ವರ್, ಕುಮಾರಸ್ವಾಮಿ ಮಾತ್ರ ಪ್ರಮಾಣ ವಚನ
ಆದರೆ, ಸಿದ್ದರಾಮಯ್ಯ ಅವರು ಎರಡನೆಯ ಬಾರಿ ಅಧಿಕಾರ ಹಿಡಿಯಲು ವಿಫಲರಾಗಿದ್ದಾರೆ. ಚಾಮರಾಜನಗರದಂತೆಯೇ ವಿಧಾನಸೌಧಕ್ಕೂ ಇದೇ ರೀತಿಯ ಅಪವಾದವಿದೆ.
ಎಚ್.ಡಿ. ಕುಮಾರಸ್ವಾಮಿ ಅವರು ಬುಧವಾರ ಸಂಜೆ 4.30ರ ವೇಳೆಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ವಿಧಾನಸೌಧದ ಆವರಣದಲ್ಲಿ ಪ್ರಮಾಣವಚನ ಸ್ವೀಕರಿಸಿದ ಯಾವ ಮುಖ್ಯಮಂತ್ರಿಯೂ ಪೂರ್ಣಾವಧಿ ಅಧಿಕಾರ ನಡೆಸಿಲ್ಲ ಎನ್ನುವುದು ಗಮನಾರ್ಹ.
ಕರ್ನಾಟಕದ ಇತಿಹಾಸದಲ್ಲಿ ದೇವರಾಜ ಅರಸು ಮತ್ತು ಸಿದ್ದರಾಮಯ್ಯ ಮಾತ್ರ ಐದು ವರ್ಷದ ಆಡಳಿತ ಪೂರ್ಣಗೊಳಿಸಿದ್ದಾರೆ. ದೇವರಾಜ ಅರಸರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರೆ, ಸಿದ್ದರಾಮಯ್ಯ ಕಂಠೀರವ ಕ್ರೀಡಾಂಗಣದಲ್ಲಿ ಸ್ವೀಕರಿಸಿದ್ದರು.
ಹಿಂದಿನ ದಿನಗಳಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಅದ್ಧೂರಿಯಾಗಿರುತ್ತಿರಲಿಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ರಾಜಭವನದ ಗಾಜಿನಮನೆಯಲ್ಲಿ ಪ್ರತಿಜ್ಞಾವಿಧಿ ಬೋಧಿಸುತ್ತಿದ್ದರು. ವಿಧಾನಸೌಧದಲ್ಲಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದಿದ್ದು 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ.
ಶಿವಮೊಗ್ಗದ ಯಾವ ಮುಖ್ಯಮಂತ್ರಿಗಳು ಅವಧಿ ಪೂರ್ಣಗೊಳಿಸಿಲ್ಲ!
ಒಂದು ವರ್ಷದಲ್ಲಿಯೇ ಅವರು ರಾಜೀನಾಮೆ ನೀಡುವ ಸ್ಥಿತಿ ಎದುರಾಯಿತು. ಆದರೆ ಮೂರು ದಿನಗಳಲ್ಲಿಯೇ ರಾಜೀನಾಮೆ ವಾಪಸ್ ಪಡೆದರು. 1988ರಲ್ಲಿ ಫೋನ್ ಕದ್ದಾಲಿಕೆ ಆರೋಪ ಎದುರಾದಾಗ ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿದರು.
1990ರಲ್ಲಿ ವೀರೇಂದ್ರ ಪಾಟೀಲ್ ಅವರ ಬಳಿಕ ಮುಖ್ಯಮಂತ್ರಿಯಾದ ಎಸ್. ಬಂಗಾರಪ್ಪ ವಿಧಾನಸೌಧದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಎರಡು ವರ್ಷದ ನಂತರ ಕಾವೇರಿ ಗಲಭೆಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣಕ್ಕೆ ಅವರು ಮುಖ್ಯಮಂತ್ರಿ ಹುದ್ದೆಯನ್ನು ತ್ಯಜಿಸಬೇಕಾಯಿತು. ವೀರಪ್ಪ ಮೊಯಿಲಿ ಅವರ ಸ್ಥಾನವನ್ನು ತುಂಬಿದರು.
ಬೆಂಗಳೂರಿಗೆ ಬಂದು ಎಚ್ಡಿಕೆ ಹರಸಿದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್
ನಂತರ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಎಸ್.ಎಂ. ಕೃಷ್ಣ. 1999ರಲ್ಲಿ ಮುಖ್ಯಮಂತ್ರಿಯಾದ ಅವರು ಅವಧಿಗೆ ಮುನ್ನವೇ ಚುನಾವಣೆ ಎದುರಿಸಲು ಮುಂದಾಗಿದ್ದರು.
2004ರಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚಿಸಿದಾಗ ಧರಂ ಸಿಂಗ್ ಮುಖ್ಯಮಂತ್ರಿಯಾಗಿ ಶಕ್ತಿ ಕೇಂದ್ರದಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದರು. ಎರಡು ವರ್ಷದ ಬಳಿಕ ಸರ್ಕಾರ ಉರುಳಿ ಕುಮಾರಸ್ವಾಮಿ ಅವರು ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿಯಾದಾಗಲೂ ವಿಧಾನಸೌಧದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು.
ಚಾಮುಂಡೇಶ್ವರಿಯ ದರ್ಶನದ ನಂತರ ಕುಮಾರಸ್ವಾಮಿ ಪ್ರಮಾಣ ವಚನ
20 ತಿಂಗಳ ಬಳಿಕ ಕುಮಾರಸ್ವಾಮಿ ಆಡಳಿತ ಕೊನೆಗೊಂಡಿತ್ತು. ಆದರೆ ಜೆಡಿಎಸ್ ಬೆಂಬಲ ಮುಂದುವರಿಸಲು ಒಪ್ಪದ ಕಾರಣ ಬಿ.ಎಸ್. ಯಡಿಯೂರಪ್ಪ ಏಳು ದಿನಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿದ್ದರು.
2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸಹ ಯಡಿಯೂರಪ್ಪ ವಿಧಾನಸೌಧದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದ್ದರು. ಅಕ್ರಮ ಗಣಿಗಾರಿಕೆಗೆ ಆರೋಪದ ವರದಿಯಡಿ ಅವರು ಮೂರು ವರ್ಷದಲ್ಲಿಯೇ ಅಧಿಕಾರ ತ್ಯಜಿಸಿದರು.