'ಶ್ರೀಗಳಿಗೆ ಮುಜುಗರವಾಗುವಂಥ ಪರೀಕ್ಷೆ ಮಾಡಿಲ್ಲ'
ಬೆಂಗಳೂರು, ಡಿ. 5 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿಗಳಿಗೆ ಮುಜುಗರವಾಗುವಂಥ ಯಾವ ಪರೀಕ್ಷೆ ನಡೆಸಲಾಗಿಲ್ಲ ಎಂದು ಮಠದ ಪತ್ರಿಕಾ ಹೇಳಿಕೆ ತಿಳಿಸಿದೆ.
ಭಕ್ತರು ಯಾವ ಗೊಂದಲಕ್ಕೆ ಒಳಗಾಗಬೇಕಿಲ್ಲ. ಸ್ವಾಮೀಜಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯ ಬಡಿತ ಪರೀಕ್ಷೆ ನಡೆಸಿ ಮತ್ತು ನ್ಯಾಯಾಲಯದ ಆದೇಶದಂತೆ ಡಿಎನ್ಎ ಪರೀಕ್ಷೆಗೆ ಬೇಕಾದ ರಕ್ತದ ಮಾದರಿ ಪಡೆದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದೆ.[ರಾಘವೇಶ್ವರ ಶ್ರೀಗಳಿಗೆ 13 ಪರೀಕ್ಷೆ ಮಾಡಲಾಗಿದೆ]
ಸ್ವಾಮೀಜಿ ತಾನೊಬ್ಬ ಸಮರ್ಥ ಪುರುಷ ಎಂದು ಹೇಳಿರುವ ಕಾರಣ ಪುರುಷತ್ವ ಸಂಬಂಧಿ ಯಾವ ಪರೀಕ್ಷೆಗಳನ್ನು ನಡೆಸಲಾಗಿಲ್ಲ. ಸತತ 5 ಗಂಟೆ ಕಾಲ ನಡೆದ ವಿವಿಧ ಪರೀಕ್ಷೆಗೆ ಸ್ವಾಮೀಜಿ ಸಂಪೂರ್ಣ ಸಹಕಾರ ನೀಡಿದ್ದಾರೆ. ವೈದ್ಯರು ಸಹ ಯಾವ ಒತ್ತಡ ಹೇರದೇ ಸಾವಧಾನವಾಗಿ ಪರೀಕ್ಷೆ ನಡೆಸಿರುತ್ತಾರೆ. ಭಕ್ತರು ಅನಗತ್ಯ ಗೊಂದಲಕ್ಕೆ ಒಳಗಾಗಬಾರದು ಎಂದು ಮಠದ ಪ್ರಕಟಣೆ ತಿಳಿಸಿದೆ.[ರಾಘವೇಶ್ವರ ಶ್ರೀಗಳಿಗೆ ವೈದ್ಯಕೀಯ ಪರೀಕ್ಷೆ ಆಗಬೇಕು]
ನ್ಯಾಯಾಲಯ ಮತ್ತು ಸಿಐಡಿ ವಿಚಾರಣೆಗೆ ಸ್ವಾಮೀಜಿ ಸಹಕಾರ ನೀಡಲಿದ್ದಾರೆ. ಡಿಸೆಂಬರ್ 4 ರಂದು ವಿಶೇಷ ಪೂಜೆ ಹಿನ್ನೆಲೆಯಲ್ಲಿ ಒಂದು ದಿನ ಕಾಲಾವಕಾಶ ಕೇಳಲಾಗಿತ್ತು. ಅದರಂತೆ ಶುಕ್ರವಾರ ಪರೀಕ್ಷೆಗೆ ಸ್ವಾಮೀಜಿ ಹಾಜರಿದ್ದು ಸಹಕರಿಸಿದರು ಎಂದು ಹೇಳಿಕೆ ತಿಳಿಸಿದೆ. ಶ್ರೀ ರಾಮಚಂದ್ರಾಪುರ ಮಠದ ಮಾಧ್ಯಮ ಕಾರ್ಯದರ್ಶಿ ಕೃಷ್ಣಪ್ರಸಾದ್ ಅಮ್ಮಂಕಲ್ಲು ಶುಕ್ರವಾರ ಸಂಜೆ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.