ಬಿಜೆಪಿ ಬಂಡಾಯ ಸಭೆಯಲ್ಲಿ ನಡೆದಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ!
ಬೆಂಗಳೂರು, ಜೂನ್ 01: ರಾಜ್ಯ ಬಿಜೆಪಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಂಡಾಯ ಹೊಸದೇನೂ ಅಲ್ಲ. ಈಗ ಮತ್ತೊಮ್ಮೆ ರಾಜ್ಯ ಬಿಜೆಪಿಯಲ್ಲಿ ಹಿರಿಯ ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಸಭೆ ನಡೆಸಿದ್ದಾರೆ. ಆದರೆ ಸಭೆಯಲ್ಲಿ ಭಾಗವಹಿಸಿದ್ದ ಕೆಲವು ಹಿರಿಯ ಶಾಸಕರು ಇದೀಗ ಯೂಟರ್ನ್ ಹೊಡೆದಿದ್ದಾರೆ. ಜೊತೆಗೆ ಸಭೆ ನಡೆದಿದ್ದು ನಿನ್ನೆ ಮೊನ್ನೆ ಅಲ್ಲ, ಎರಡೂವರೆ ತಿಂಗಳುಗಳ ಹಿಂದೆ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ಕೊಟ್ಟಿದ್ದಾರೆ.
Recommended Video
ಆದರೆ ಸಭೆ ಸೇರಿದ್ದನ್ನು ಹಿರಿಯ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಮಾಜಿ ಸಂಸದ ರಮೇಶ್ ಕತ್ತಿ ಖಚಿತಪಡಿಸಿದ್ದಾರೆ. ಜೊತೆಗೆ ಸಭೆಯಲ್ಲಿ ಚರ್ಚೆ ಮಾಡಿದ್ದ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ವಿಜಯಪುರ ಶಾಸಕ, ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಬಂಡಾಯ ಶಮನವಾಗಿದೆಯಾ? ಜೊತೆಗೆ ಆ ಬಂಡಾಯ ಸಭೆಯಲ್ಲಿ ನಡೆದಿದ್ದೇನೂ? ಇಲ್ಲಿದೆ ಸಂಪೂರ್ಣ ಮಾಹಿತಿ...
ಬಂಡಾಯ ಸಭೆ ಅಲ್ಲ
ಹಿರಿಯ ಶಾಸಕ, ಮಾಜಿ ಸಚಿವ, ಬೆಳಗಾವಿ ಪ್ರಭಾವಿ ನಾಯಕ ಉಮೇಶ್ ಕತ್ತಿ ಅವರ ಮನೆಯಲ್ಲಿ ಬಿಜೆಪಿ ಹಿರಿಯ ಶಾಸಕರು ಸಭೆ ಸೇರಿದ್ದರು. ಊಟಕ್ಕೆ ಆಹ್ವಾನಿಸಿದ್ದು ಉಮೇಶ್ ಕತ್ತಿ ಅವರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ.
ಬಿಜೆಪಿ ಬಂಡಾಯ ಚಿವುಟಿ ಹಾಕಿತಾ ದೆಹಲಿಯ ಆ ಒಂದು ದೂರವಾಣಿ ಕರೆ?
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಾಗೂ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೊಟ್ಟಿದ್ದ ಮಾತನ್ನು ಉಮೇಶ್ ಕತ್ತಿ ಅವರು ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಹಿರಿಯ ಕೆಲಸ ಶಾಸಕರು ಕೂಡ ಮಂತ್ರಿಸ್ಥಾನದ ಬಗ್ಗೆ ಮಾತನಾಡಿದ್ದಾರೆ. ಉಳಿದಿರುವ 6 ಸಚಿವ ಸ್ಥಾನಗಳನ್ನು ಬಿಜೆಪಿ ಹಿರಿಯ ಶಾಸಕರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಸಭೆಯಲ್ಲಿದ್ದವರು ಚರ್ಚೆ ಮಾಡಿದ್ದಾರೆ ಎಂಬ ಮಾಹಿತಿಯಿದೆ.
ಅನುದಾನ ಬಿಡುಗಡೆ
ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಶಾಸಕರೊಬ್ಬರು ಕೊಟ್ಟಿರುವ ಮಾಹಿತಿ ಪ್ರಕಾರ ಸಭೆಯಲ್ಲಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಕ್ಷೇತ್ರಗಳ ವೈಯಕ್ತಿಕ ಸಮಸ್ಯೆಗಳನ್ನು ಸಭೆಯಲ್ಲಿದ್ದವರೊಂದಿಗೆ ಹಂಚಿಕೊಂಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಚುನಾವಣೆ ಬರಲಿದೆ. ಅಷ್ಟರೊಳಗೆ ಕ್ಷೇತ್ರದ ಜನತೆಗೆ ಕಾಣುವಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕು. ಈಗ ಶುರು ಮಾಡಿದ್ರೆ ಮುಂದಿನ ಎರಡು ವರ್ಷಗಳಲ್ಲಿ ಕೆಲವೊಂದು ಕೆಲಸಗಳನ್ನು ಪೂರ್ಣಗೊಳಿಸಬಹುದು.
ಕೊನೆಯ ವರ್ಷ ಚುನಾವಣಾ ವರ್ಷವಾಗಿರುತ್ತದೆ. ಹೀಗಾಗಿ ಉಳಿದರುವ ಎರಡು ವರ್ಷಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಬಿಡುಗಡೆ ಮಾಡುವಂತೆ ಸಿಎಂ ಒತ್ತಡ ಹಾಕಬೇಕು ಎಂಬುದರ ಬಗ್ಗೆ ಚರ್ಚೆ ನಡೆದಿದೆ.
ಕಾಂಗ್ರೆಸ್ ಸರ್ಕಾರದಲ್ಲಿ
ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಬಿಜೆಪಿ ಶಾಸಕರಿಗೆ ಇಷ್ಟೊಂದು ಅನುದಾನದ ಕೊರತೆ ಆಗಿರಲಿಲ್ಲ. ನಮ್ಮ ಬಿಜೆಪಿ ಸರ್ಕಾರದಲ್ಲಿಯೆ ಕೆಲಸಗಳಾಗುತ್ತಿಲ್ಲ. ಕ್ಷೇತ್ರಕ್ಕೆ ನುದಾನವೂ ಬರುತ್ತಿಲ್ಲ. ಹೀಗಾದ್ರೆ ನಾವು ಕ್ಷೇತ್ರದ ಜನತೆಗೆ ಏನೂ ಹೇಳುವುದು? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಈ ಬಗ್ಗೆ ಗಮನ ಹರಿಸುವಂತೆ ಹೇಳಬೇಕು.
ಯಡಿಯೂರಪ್ಪ ವಿರುದ್ಧ ಆಪ್ತರಿಂದಲೇ ಅಸಮಾಧಾನ ಸ್ಪೋಟ, ಬಂಡಾಯ ಸಭೆ!
ಅನುದಾನ ಕೊಡದೇ ಇದ್ದರೆ ಬಿಜೆಪಿಗೆ ನಷ್ಠವಾಗುತ್ತದೆ. ಲೋಕಸಭಾ ಚುನಾವಣೆಗೆ ಬೇಕಾದ ತಯಾರಿಯನ್ನು ಕೇಂದ್ರ ಬಿಜೆಪಿ ಮಾಡಿಕೊಂಡಿದೆ. ಆದರೆ ವಿಧಾನಸಭಾ ಚುನಾವಣೆಗೆ ತಯಾರಿ ಆರಂಭವಾಗಿಲ್ಲ ಎಂದು ಚರ್ಚೆ ಆಗಿದೆ ಎನ್ನಲಾಗಿದೆ.
ನಾಯಕತ್ವ ಬದಲಾವಣೆ
ಮುಖ್ಯವಾದ ವಿಷಯ ಏನೆಂದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆಯೆ ಆಗಿಲ್ಲ. ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪ ಅವರೆ ಮುಂದುವರೆಯಲಿ. ಆದರೆ ನಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾಗಿರುವುದು ಕೂಡ ಅವರೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ, ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡುವ ಬಗ್ಗೆ ಚರ್ಚೆಯೆ ಆಗಿಲ್ಲ.
ಇಂತಹ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯಂತಹ ಬೇಡಿಕೆ ಇಡುವಷ್ಟು ರಾಜಕೀಯ ಜ್ಞಾನದ ಕೊರತೆ ನಮಗಿಲ್ಲ. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ಲಿಂಗಾಯತ ಶಾಸಕರನ್ನು ಕಡೆಗಣಿಸುತ್ತಿರುವ ವಿಚಾರ ಪ್ರಸ್ತಾಪ ಆಗಿದ್ದು ನಿಜ. ಲಿಂಗಾಯತ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂಬ ವಿವಾರಗಳು ಚರ್ಚೆ ಆಗಿವೆ.
ಪಕ್ಷ ಬಿಡುವ ಮಾತನಾಡಿಲ್ಲ
ಬಿಜೆಪಿ ಹಿರಿಯ ಶಾಸಕರ ಸಭೆಯಲ್ಲಿ ಯಾರೂ ಕೂಡ ಪಕ್ಷ ಬಿಡುವ ಮಾತಗಳನ್ನು ಆಡಿಲ್ಲ. ಜೊತೆಗೆ ಮಾಜಿ ಸಿಎಂ ಒಬ್ಬರನ್ನು ಅಥವಾ ಕೇಂದ್ರದ ಸಚಿವರನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡುವ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ಆಗಿಲ್ಲ.
ಹಾಲಿ ಕೇಂದ್ರದಲ್ಲಿ ಸಚಿವರಾಗಿರುವವನ್ನು ಅಥವಾ ಮಾಜಿ ಸಿಎಂ ಒಬ್ಬರನ್ನು ಮುಖ್ಯಮಂತ್ರಿ ಮಾಡಲು ಸಭೆಯಲ್ಲಿ ಚರ್ಚೆ ಆಗಿತ್ತು ಎಂಬುವ ವರದಿಗಳಾಗಿದ್ದವು. ಆದರೆ ಅಂತಹ ಯಾವುದೇ ಚರ್ಚೆಗಳು ಸಭೆಯಲ್ಲಿ ಪ್ರಸ್ತಾಪವಾಗಿಲ್ಲ ಎಂಬ ಖಚಿತ ಮಾಹಿತಿಯಿದೆ.