ಶಾಲಾ-ಕಾಲೇಜು ಪ್ರಾರಂಭದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ: ಸುರೇಶ್ ಕುಮಾರ್!
ಬೆಂಗಳೂರು, ಸೆ. 29: ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸದ್ಯಕ್ಕೆ ಶಾಲೆ-ಕಾಲೇಜುಗಳನ್ನು ಪ್ರಾರಂಭ ಮಾಡುವ ಯೋಚನೆಯು ಸರ್ಕಾರದ ಮುಂದೆ ಇಲ್ಲ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಶಾಸಕರ ಮತ್ತು ಸಂಸದರ ಹಾಗೂ ಇತರೆ ಜನಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಹ್ವಾನಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.
Recommended Video
ಕೊರೊನಾ ಸಾಂಕ್ರಾಮಿಕ ರೋಗದ ಪ್ರಸರಣ ದಿನದಿಂದ ದಿನಕ್ಕೆ ತೀವ್ರವಾಗುತ್ತಲೇ ಸಾಗಿದೆ. ಈ ಪರಿಸ್ಥಿತಿಯ ನಡುವೆಯೇ ಸಾಮಾಜಿಕ ಜೀವನ ತಹಬಂದಿಗೆ ಮರಳಬೇಕಿದೆ. ಕೊರೋನಾ ಕಾರಣಕ್ಕಾಗಿ ಅತ್ಯಂತ ಸಂಕಷ್ಟಕ್ಕೆ ಸಿಲುಕಿರುವ ಶಿಕ್ಷಣ ಕ್ಷೇತ್ರದ ಕುರಿತು ತಮ್ಮ ಅಭಿಪ್ರಾಯ ತಿಳಿಸುವಂತೆ ಶಾಸಕರು ಹಾಗೂ ಸಂಸದರಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇದೇ ಸೆ. 25ರಂದು ಪತ್ರ ಬರೆದು ಅಭಿಪ್ರಾಯ ತಿಳಿಸುವಂತೆ ವಿನಂತಿಸಿದ್ದರು.
ಹೀಗಾಗಿ ಶೀಘ್ರದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಅಂತಹ ಯಾವುದೇ ತೀರ್ಮಾನವನ್ನು ಶಿಕ್ಷಣ ಇಲಾಖೆ ಮಾಡಿಲ್ಲ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಶಿಕ್ಷಕರೊಂದಿಗೆ ಸಂವಾದ
ಶಾಲಾ-ಕಾಲೇಜು ಆರಂಭಿಸುವ ದಿನಾಂಕದ ಕುರಿತು ಜೊತೆಗೆ ಶಿಕ್ಷಕ ಸಂಘಟನೆಗಳೊಂದಿಗೆ ಹಾಗೂ ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಅವರಿಂದ ಸಂಫೂರ್ಣ ಮಾಹಿತಿ, ಅಭಿಪ್ರಾಯಗಳನ್ನು ಪಡೆಯುತ್ತಿದ್ದೇನೆ. ಸಧ್ಯ ಬೀದರ್ ಜಿಲ್ಲೆಯಲ್ಲಿ ಪ್ರವಾಸದಲ್ಲಿದ್ದೇನೆ.
ಬೀದರ್ನಿಂದ ಬೆಂಗಳೂರಿಗೆ ಬಂದ ನಂತರ ಈ ಕುರಿತು ಇನ್ನಷ್ಟು ವಿವರವಾಗಿ ವಾಸ್ತವಾಂಶವನ್ನು ತಿಳಿಸುತ್ತೇನೆ. ಅಲ್ಲಿಯವರೆಗೆ ಶಾಲೆಗಳನ್ನುನ ತೆರಯುವ ಬಗ್ಗೆ ಯಾವುದೇ ಗೊಂದಲಗಳು ಬೇಡ. ಹೀಗಾಗಿ ಮತ್ತೊಮ್ಮೆ ಸ್ಪಷ್ಟೀಕರಣ ನೀಡುವುದೆಂದರೆ ನಮ್ಮ ರಾಜ್ಯದ ಶಾಲೆ-ಕಾಲೇಜು ಪ್ರಾರಂಭ ಮಾಡುವ ದಿನಾಂಕದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸುರೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಶಾಲೆ ಆರಂಭಿಸುವ ಕುರಿತು ಅಭಿಪ್ರಾಯ
ಕಳೆದ ಮಾರ್ಚ್ ತಿಂಗಳಿನಳಲ್ಲಿಯೇ ಶಾಲಾ-ಕಾಲೇಜುಗಳನ್ನು ಸರ್ಕಾರ ಮುಚ್ಚಿದೆ. ಅದಾಗಿ ಆಗಲೇ 7 ತಿಂಗಳುಗಳು ಕಳೆದಿವೆ. ಮಕ್ಕಳ ವಿಧ್ಯಾಭ್ಯಾಸ ಕುಂಠಿತವಾಗಿದೆ . ಜೊತೆಗೆ ಜೂನ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಈ ಶೈಕ್ಷಣಿಕ ವರ್ಷ ಆರಂಭವಾಗಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಮಕ್ಕಳು ಸಹಪಾಠಿಗಳೊಂದಿಗೆ ಕಲೆತು ಕಲಿಯಬೇಕು.
ಜೊತೆಗೆ ಮಕ್ಕಳು ಆಟೋಟಗಳಲ್ಲಿಯೂ ಭಾಗವಹಿಸುತ್ತಿಲ್ಲ. ಹೀಗಾಗಿ ಅದನ್ನು ಕೂಡ ಗಮನಿಸಬೇಕು ಎಂದು ಶಾಸಕರಿಗೆ ಬರೆದಿರುವ ಪತ್ರದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಉಲ್ಲೇಖಿಸಿದ್ದರು.
ಒಂದು ಹಂತದಲ್ಲಿ ಮಕ್ಕಳ ಕಲಿಕೆ ನಡೆದಿದೆ
ವಿದ್ಯಾಗಮ ಯೋಜನೆ ಮೂಲಕ ಮಕ್ಕಳ ಶಿಕ್ಷಣ ಆರಂಭವಾಗಿದೆ. ಸಂಪೂರ್ಣವಾಗಿ ಅಲ್ಲದಿದ್ದರೂ ಮಕ್ಕಳು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಜೊತೆಗೆ ಮಕ್ಕಳಿರುವಲ್ಲಿಗೆ ತೆರಳುವ ಶಿಕ್ಷಕರು ಹೋಂ ವರ್ಕ್ ಕೊಡುವುದು, ವಿದ್ಯಾರ್ಥಿಗಳ ಕಲಿಕಾ ವಿಷಯಗಳನ್ನು ತಿಳಿಸುವುದನ್ನು ಮಾಡುತ್ತಿದ್ದಾರೆ.
ಆದರೆ ಅದ್ಯಾವುದು ಕೂಡ ಪೂರ್ಣ ಪ್ರಮಾಣದ ಶಿಕ್ಷಣ ಕೊಟ್ಟಂತೆ ಆಗುವುದಿಲ್ಲ ಎಂಬ ಅಭಿಪ್ರಾಯವೂ ಇದೆ. ಮಕ್ಕಳ ಇಮ್ಯೂನಿಟಿ ಶಕ್ತಿ ಹೆಚ್ಚಾಗಿದೆ. ಆದರೆ ಸಮಸ್ಯೆ ಉಂಟಾದಲ್ಲಿ ಅದನ್ನು ಪರಿಹರಿಸಲು ರಾಜ್ಯ ಆರೋಗ್ಯ ಇಲಾಖೆ ಶಕ್ತವಾದೆಯಾ ಎಂಬ ಚರ್ಚೆಗಳು ನಡೆಯುತ್ತಿವೆ.
ಹೇಗೆ? ಯಾವಾಗ ಆರಂಭಿಸಬೇಕು?
ಇನ್ನು ಶಾಲೆಗಳನ್ನು ಯಾವಾಗ ಆರಂಭಿಸಬೇಕು ಎಂಬುದರ ಕುರಿತು ಕೂಡ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಜನಪ್ರತಿನಿಧಿಗಳ ಅಭಿಪ್ರಾಯ ಕೇಳಿದ್ದರು. ಕೋವಿಡ್ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯನ್ನು ಅದರಿಂದ ಹೊರಗೆ ತರಬೇಕಿದೆ. ಹೀಗಾಗಿ LKG ಯಿಂದ SSLCವರೆಗೆ ಯಾವಾಗ ತರಗತಿಗಳನ್ನು ಪ್ರಾರಂಭಿಸಬೇಕು? ಹಾಗೂ ಯಾವ ತರಗತಿಯನ್ನು ಮೊದಲು ಆರಂಭೀಸಬೇಕು ಎಂದು ಸಲಹೆಗಳನ್ನು ಕೇಳಿದ್ದರು.
ಅದರಿಂದಾಗಿ ಶಾಲಾ-ಕಾಲೇಜುಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ ಎಂದುಕೊಂಡ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಇದೀಗ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೇ ಶಾಲಾ-ಕಾಲೇಜು ಆರಂಭಿಸುವ ಬಗ್ಗೆ ಸರ್ಕಾರ ಯಾವುದೇ ದಿನಾಂಕವನ್ನು ನಿಗದಿ ಮಾಡಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.