ಸದನದಲ್ಲಿ ಹಾಸ್ಯ ಚಟಾಕಿಗಳಿಗೆ ಮೋಸ ಇಲ್ಲ
ಬೆಂಗಳೂರು, ಜ. 30 : ಗಂಭೀರ ಚರ್ಚೆಗಳ ನಡುವೆಯೇ ಸದನದಲ್ಲಿ ಬುಧವಾರವೂ ಹಾಸ್ಯ ಚಟಾಕಿಗಳು ತೂರಿಬಂದವು. ಅವುಗಳ ಒಂದಷ್ಟು ಸ್ಯಾಂಪಲ್ ಇಲ್ಲಿದೆ ನೋಡಿ..
ಸನ್ನಿ ಹಿಡಿದಿದ್ಯಾ..? : 14 ತಿಂಗಳ ಹಸುಗೂಸಿನ ಮೇಲೆ ಬಲಾತ್ಕಾರ ನಡೆದಿದೆ. ಇದೊಂದು ಅಮಾನವೀಯ ಕೃತ್ಯ. ಈ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಅಂತ ಪರಿಷತ್ ಸದಸ್ಯೆ ಮೋಟಮ್ಮ ಸಭಾಪತಿಗಳಿಗೆ ಮನವಿ ಮಾಡಿದ್ರು. ಆದರೆ ಸಭಾಪತಿ ಚರ್ಚೆಗೆ ಅನುಮತಿ ನೀಡಲು ನಿರಾಕರಿಸಿದ್ರು. ಈ ವೇಳೆ ಗರಂ ಆದ ಮೋಟಮ್ಮ ಸಭಾಪತಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಅಲ್ಲದೇ ಸನ್ನಿ ಹಿಡಿದಿರೋವರ ಥರ ಆಡ್ತಾರಲ್ಲ ಅಂತ ಛಾಟಿ ಬೀಸಿದ್ರು. ಬಳಿಕ ನಾನು ಇನ್ಮುಂದೆ ಏನೂ ಪ್ರಶ್ನೆನೂ ಹಾಕಲ್ಲ. ನಾನು ಮಾತನಾಡಲ್ಲ ಅಂತಾ ಮುನಿಸಿಕೊಂಡು ಕೂತರು. ಅದಕ್ಕೆ ನಾನೇನು ಮಾಡಲಿ ಅಂತ ಸಭಾಪತಿಗಳು ಸುಮ್ಮನಾದ್ರು. ಆದರೆ ಮೋಟಮ್ಮ ಮುಖದಲ್ಲಿ ಸಿಟ್ಟು ಇನ್ನೂ ಹಾಗೇ ಉಳಿದಿತ್ತು. ಕನ್ನಡಕದ ಹಿಂದಿನ ಕಣ್ಣಿನಲ್ಲಿ ಆಗಲೂ ಕೋಪ ಎದ್ದು ಕಾಣುತ್ತಿತ್ತು.
ಹಿರಿ-ಮುದಿ ವಯಸ್ಸು : ಪರಿಷತ್ನಲ್ಲಿ ಸದಸ್ಯರ ಕೊರತೆ ಇರೋದಕ್ಕೆ ಸದಾನಂದ ಗೌಡ ಆಡಳಿತ ಪಕ್ಷದ ನಾಯಕರಿಗೆ ಟಾಂಗ್ ಕೊಟ್ಟರು. ಕಾಂಗ್ರೆಸ್ನ ಪರಿಷತ್ ಕೆಲ ಸದಸ್ಯರಿಗೆ ಈ ಸದನದಲ್ಲಿ ಕುಳಿತುಕೊಳ್ಳಲು ಮನಸ್ಸಿಲ್ಲ. ಒಂದೋ ಕ್ಯಾಂಟೀನ್ನಲ್ಲಿ ಇರುತ್ತಾರೆ. ಇಲ್ಲಾ ಆಚೆ ಇರುತ್ತಾರೆ ಅಂತ ಹೇಳಿದ್ರು. ಇದಕ್ಕೆ ವೀರಣ್ಣ ಮತ್ತಿಕಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ರು.. ಒಮ್ಮೆ ಹಿಂದೆ ನೋಡಿಕೊಳ್ಳಿ ಅಂತ ತಿರುಗೇಟು ನೀಡಿದ್ರು. ವೀರಣ್ಣ ಮತ್ತಿಕಟ್ಟಿ ಅವರಂತಹ ಹಿರಿಯ ವಯಸ್ಸಿನಲ್ಲೂ ಯುವಕತನ ತೋರಿ ಇಲ್ಲಿ ಹಾಜರಿರುತ್ತಾರೆ ಅಂತ ಹೇಳುವ ಬದಲು ವೀರಣ್ಣ ಮತ್ತಿಕಟ್ಟಿ ಅವರು, ಮುದಿ ವಯಸ್ಸಿನಲ್ಲೂ ಯುವಕತನ ತೋರಿ ಇಲ್ಲಿ ಹಾಜರಿರುತ್ತಾರೆ ಅಂತ ಹೇಳಿಬಿಟ್ಟರು. ಬಳಿಕ ನೇರವಾಗಿ ಪೆಚ್ಚರಂತೆ ನಗುತ್ತಾ ಮತ್ತಿಕಟ್ಟಿ ಬಳಿ ಕ್ಷಮೆ ಕೋರಿದ್ರು. [ವಿಧಾನಸಭೆ ಕಲಾಪದ ಮುಖ್ಯಾಂಶಗಳು]
ಇಷ್ಟವಿದ್ದರೂ, ಇಲ್ಲದಿದ್ದರೂ ರಾಜ್ಯಪಾಲರ ಹೊಗಳಬೇಕು : ಸದನದಲ್ಲಿ ಬುಧವಾರ ಸ್ಪೀಕರ್ ಕಾಗೋಡು ತಿಮ್ಮಪ್ಪ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾತುಗಳು ಶಾಸಕರನ್ನು ನಗೆಗಡಲಲ್ಲಿ ತೇಲಿಸಿತು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಲು ಸ್ಪೀಕರ್ ರಮೇಶ್ ಕುಮಾರ್ ಗೆ ಸೂಚಿಸುತ್ತಿದ್ದಂತೆಯೇ ಮಾತು ಆರಂಭಿಸಿದ ರಮೇಶ್ ಕುಮಾರ್ ರಾಜ್ಯಪಾಲರಿಗೆ ಥ್ಯಾಂಕ್ಸ್ ಹೇಳಿದ್ದು ಹೀಗೆ. ನಮಗೆ ಇಷ್ಟ ಇರಲಿ ಇರದೇ ಇರಲಿ ರಾಜ್ಯಪಾಲರಿಗೆ ನಾವು ಥ್ಯಾಂಕ್ಸ್ ಹೇಳೋದು ಕಡ್ಡಾಯ ಮಾಡಿಬಿಟ್ಟಿದ್ದಾರೆ.
ವಿಪರ್ಯಾಸ ಅಂದ್ರೆ, ಕಳೆದ ಬಿಜೆಪಿ ಸರ್ಕಾರವನ್ನ ನನ್ನ ಸರ್ಕಾರ ಅಂತಾ ಭಾಷಣ ಮಾಡುವ ರಾಜ್ಯಪಾಲರು ಸಿದ್ದರಾಮಯ್ಯ ಸರ್ಕಾರವನ್ನ ನನ್ನ ಸರ್ಕಾರ ಅಂತಾ ಹೇಳಿಕೊಳ್ಳುವ ಪರಿಸ್ಥಿತಿ ಇದೆ. ಅದಕ್ಕೆ ಸ್ಪೀಕರ್, ನಾಳೆ ನೀವು ಸಿಎಂ ಆದ್ರೂ ರಾಜ್ಯಪಾಲರು ಅದನ್ನೇ ಹಾಗೇ ಹೇಳಬೇಕು. ಅದಕ್ಕೆ ಟಾಂಗ್ ಕೊಟ್ಟ ರಮೇಶ್ ಕುಮಾರ್, ಸರಿ ಸರ್, ಆದ್ರೆ ಗ್ರಹಚಾರಕ್ಕೆ ಮುಂದೆ ನಿಮ್ಮನ್ನ ರಾಜ್ಯಪಾಲರನ್ನಾಗಿ ಮಾಡಿದ್ರು ನೀವು ಇದೇ ಕೆಲಸ ಮಾಡಬೇಕಲ್ಲ ಅಂದ್ರು. ಅದಕ್ಕೆ ಸ್ಪೀಕರ್ ಕಾಗೋಡು, ನೀವು ಒಳ್ಳೆ ಸಂಸದೀಯ ಪಟು ನಿಮ್ಮನ್ನ ಪಾರ್ಲಿಮೆಂಟ್ಗೆ ಕಳಿಸಬೇಕು ನೋಡ್ರಿ. ಕೊನೆ ಪಕ್ಷ ರಾಜ್ಯಸಭೆಗಾದ್ರೂ ಕಳಿಸಿಬಿಡಿ ಅಂತಾ ಸಿಎಂಗೆ ಹೇಳಿದ್ರು. ಅದಕ್ಕೆ ರಮೇಶ್ ಕುಮಾರ್, ರಾಜ್ಯಸಭೆ ಆಗಬಹುದು. ಆದರೆ ಪಾರ್ಲಿಮೆಂಟ್ ಗೆ ಹೋಗಬೇಕು ಅಂದ್ರೆ ನನಗೆ ಖೇಣಿ ಸಹಾಯ ಮಾಡಬೇಕಾಗುತ್ತೆ ಅಂದಾಗ ಸದನ ನಗೆಗಡಲಲ್ಲಿ ತೇಲಿತು.
ಒಂದೊಳ್ಳೆ ಸೀಟಿಗಾಗಿ ಡಿವಿಎಸ್ ಹುಡುಕಾಟ : ಮಾಜಿ ಸಿಎಂ ಸದಾನಂದ ಗೌಡರ ಕಣ್ಣು ಈಗ ಲೋಕಸಭಾ ಕ್ಷೇತ್ರಗಳತ್ತ ನೆಟ್ಟಿದೆ. ಹಾಗಾಗಿ ಅವರಿಗೆ ಆಗಾಗ ಟಿಕೆಟ್ ನೆನಪಾಗ್ತಾ ಇರುತ್ತೆ, ಬುಧವಾರ ಹಾಗೇ ಆಯ್ತು. ವಿಧಾನ ಪರಿಷತ್ ಮೊಗಸಾಲೆಯಲ್ಲಿ ಯಡಿಯೂರಪ್ಪ ಅವರ ಆಪ್ತ ಎಂ.ಡಿ.ಲಕ್ಷ್ಮೀನಾರಾಯಣ ನಿಂತಿದ್ರು. ಇದೇ ವೇಳೆ ಸದಾನಂದ ಗೌಡರ ಎಂಟ್ರಿಯೂ ಆಗುತ್ತೆ. ನೀವು ನಾಡಿದ್ದು ನಿಮ್ಮೂರಲ್ಲಿ ನಡೆಯುವ ಕಾರ್ಯಕ್ರಮ ಒಂದು ವರ್ಗದವರನ್ನು ಬಲಪಡಿಸುವ ಕಾರ್ಯಕ್ರಮ ಮಾಡ್ತಿದ್ದೀರಲ್ಲಾ. ಅದರ ಜೊತೆಗೆ ತುಮಕೂರು ಬಗ್ಗೆ ಒಂಚೂರು ಸ್ಟಡಿ ಮಾಡಬೇಕಲ್ಲಾ ಅಂತಾ ಹೇಳಿದ್ರಂತೆ. ಜೊತೆಗೆ, ನಮಗೆ ಸಹಕಾರ ಕೊಡಿ. ಎಲ್ಲಾ ವರ್ಗಕ್ಕೆ ಒಪ್ಪಿಗೆಯಾಗುವ ಜನಪ್ರತಿನಿಧಿಯನ್ನು ಆಯ್ಕೆ ಮಾಡಿದ್ರೆ ಒಳ್ಳೆಯದಲ್ವಾ ಅನ್ನೋದನ್ನು ಕೇಳಿದ್ರಂತೆ. ಒಟ್ಟಾರೆ ಸದಾನಂದ ಗೌಡರಿಗೆ ಬೆಂಗಳೂರು ಉತ್ತರದಲ್ಲಿ ನನಗೆ ಸ್ಥಾನ ಸಿಗಲ್ಲ ಅಂತ ಕನ್ಫರ್ಮ್ ಆಗಿರ್ಬೇಕು. ಇಲ್ಲಾಂದ್ರೆ ಸದಾನಂದ ಗೌಡರು ತುಮಕೂರು ಬಗ್ಗೆ ಸ್ಟಡಿ ಮಾಡುವಂಥದ್ದೇನಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಗುತ್ತಿಲ್ಲ. [ರಾಹುಲ್ ವಿರುದ್ಧ ಸ್ಪರ್ಧೆಗೆ ಸಿದ್ಧ]
ಸಿಎಂ ರೇಸ್ಗೆ ತಯಾರಾಗುವ ಗುಟ್ಟು : ಸಿಎಂ ರೇಸ್ಗೆ ತಯಾರಾಗೋದು ಹೇಗೆ ಅಂತ ಮಾಜಿ ಸಿಎಂ ಸದಾನಂದ ಗೌಡರು ರಹಸ್ಯ ಬಿಚ್ಚಿಟ್ಟಿದ್ದಾರೆ. ವಿಧಾನ ಪರಿಷತ್ ಮೊಗಸಾಲೆಯಲ್ಲಿ ಹರಟೆಯಲ್ಲಿ ತೊಡಗಿದ್ದ ಗೌಡ್ರು, ಸಿಎಂ ರೇಸ್ ಬಗ್ಗೆ ಪಾಠ ಮಾಡ್ತಿದ್ರು. ರಾಜಕಾರಣ ರೇಸ್ ಇದ್ದಂತೆ. ಇಲ್ಲಿ ಎಲ್ಲರೂ ಸ್ನೇಹಿತರೇ. ಇದೊಂಥರಾ ಸರ್ವೈವಲ್ ಗೇಮ್. ಸಿಎಂ ರೇಸ್ನಲ್ಲಿರುವವರು ಒಬ್ಬರ ಹೆಗಲಿಗೆ ಇನ್ನೊಬ್ಬರು ಕೈಜೋಡಿಸಿ ನಿಂತಿರುತ್ತೇವೆ. ಹೊರಗಿನವರಿಗೆ ಏನಪ್ಪಾ ಇದು ಒಗ್ಗಟ್ಟು ಅಂತಾ ಕಾಣಿಸುತ್ತೆ. ಆದರೆ ಸಿಎಂ ಕ್ಯಾಂಡಿಡೇಟ್ ಆಗಿರುವವರಿಗೆ ಮಾತ್ರ ಸತ್ಯ ಗೊತ್ತಿರುತ್ತದೆ. ಹೆಗಲ ಮೇಲಿರುವವರ ಕೈ ಇನ್ನೊಬ್ಬರ ಭುಜ ಅಮುಕುತಿರುತ್ತದೆ. ಇದು ಸಿಎಂ ರೇಸ್ ಹಿಂದಿನ ಸತ್ಯ. ಅಮುಕೋದನ್ನು ಕಲಿತರೆ ಮಾತ್ರ ಅಸ್ತಿತ್ವ ಉಳಿಸಲು ಸಾಧ್ಯ ಅಂತ ಒಂದು ತಣ್ಣನೆಯ ಸ್ಮೈಲ್ ಕೊಟ್ಟು ಸದನ ಪ್ರವೇಶಿಸಿದ್ರು ಸದಾನಂದ ಗೌಡ.