ಸಂಪುಟ ವಿಸ್ತರಣೆಗೆ ಸಿಗದ ಒಪ್ಪಿಗೆ: ಬಿಎಸ್ವೈ ಆಸೆಗೆ ತಣ್ಣೀರು, ಬರಿಗೈಲಿ ವಾಪಸ್
ಬೆಂಗಳೂರು, ನವೆಂಬರ್ 19: ರಾಜ್ಯದಲ್ಲಿ ಸಂಪುಟ ವಿಸ್ತರಣೆ ಮಾಡುವ ಹುಮ್ಮಸ್ಸಿನೊಂದಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿರಾಶೆ ಅನುಭವಿಸಿದ್ದಾರೆ. ಯಡಿಯೂರಪ್ಪ ಅವರ ಉತ್ಸಾಹಕ್ಕೆ ಬಿಜೆಪಿಗೆ ಹೈಕಮಾಂಡ್ ತಣ್ಣೀರೆರಚಿದೆ. ಹೀಗಾಗಿ ಅವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬರಿಗೈಲಿ ರಾಜ್ಯಕ್ಕೆ ವಾಪಸಾಗಿದ್ದಾರೆ ಎನ್ನಲಾಗಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಬುಧವಾರ ಸಂಜೆ ಅವರ ನಿವಾಸದಲ್ಲಿ ಭೇಟಿ ಮಾಡಿ ಸುಮಾರು 15 ನಿಮಿಷಗಳ ಕಾಲ ಚರ್ಚಿಸಿದರು. ಸಂಪುಟ ವಿಸ್ತರಣೆಗೆ ಅನುಮತಿ ಕೋರಿದ ಅವರು, ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯನ್ನು ಸಲ್ಲಿಸಿದ್ದರು. ಆದರೆ ನಡ್ಡಾ ಅವರು ತಕ್ಷಣಕ್ಕೆ ಯಾವುದೇ ತೀರ್ಮಾನ ತಿಳಿಸಲಿಲ್ಲ. ನಾಲ್ಕೈದು ದಿನಗಳ ಬಳಿಕ ನಿರ್ಧಾರ ತಿಳಿಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಸಿಗುತ್ತಾ ಸಚಿವ ಸ್ಥಾನ?
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿ ಚುನಾವಣೆಯಲ್ಲಿ ಗೆದ್ದಿರುವ ನಾಲ್ವರು ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದು ಮತ್ತು ಅಷ್ಟೇನೂ ಕ್ರಿಯಾಶೀಲರಾಗಿಲ್ಲದ ಐವರು ಶಾಸಕರನ್ನು ಕೈಬಿಟ್ಟು ಪಕ್ಷದ ಮೂಲದವರಿಗೆ ಮನ್ನಣೆ ನೀಡಬೇಕು ಎಂದು ಯಡಿಯೂರಪ್ಪ ಪ್ರಸ್ತಾಪಿಸಿದ್ದಾರೆ ಎಂದು ಹೇಳಲಾಗಿದೆ. ಮುಂದೆ ಓದಿ.
ಒಂದೆರಡು ದಿನದಲ್ಲಿ ನಿರ್ಧಾರ
'ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡಿ ತಿಳಿಸುವುದಾಗಿ ಹೇಳಿದ್ದಾರೆ. ಸಂಪುಟ ವಿಸ್ತರಣೆಯೋ ಅಥವಾ ಪುನಾರಚನೆಯೋ ಎಂಬುದನ್ನು ಹೈಕಮಾಂಡ್ ಒಂದೆರಡು ದಿನಗಳಲ್ಲಿ ನಿರ್ಧರಿಸಲಿದೆ. ಈ ಬಗ್ಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ. ಅಮಿತ್ ಶಾ ಅವರನ್ನು ಭೇಟಿ ಮಾಡುತ್ತಿಲ್ಲ. ಈಗ ನೇರವಾಗಿ ಬೆಂಗಳೂರಿಗೆ ತೆರಳುತ್ತಿದ್ದೇನೆ' ಎಂದು ಯಡಿಯೂರಪ್ಪ ಅವರು ಜೆ.ಪಿ. ನಡ್ಡಾ ಅವರೊಂದಿಗಿನ ಭೇಟಿಯ ಬಳಿಕ ತಿಳಿಸಿದರು.
Recommended Video
15 ನಿಮಿಷವಷ್ಟೇ ಸಮಯ
ಉಪ ಮುಖ್ಯಮಂತ್ರಿ ಗೊವಿಂದ ಕಾರಜೋಳ ಅವರೊಂದಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದ ಯಡಿಯೂರಪ್ಪ ಅವರಿಗೆ ಕೇವಲ 15 ನಿಮಿಷಗಳ ಸಮಯಾವಕಾಶ ನೀಡಿದ್ದರು. ಅದರಲ್ಲಿ ಯಡಿಯೂರಪ್ಪ ಅವರಿಗೆ ಬೇರೆ ಯಾವ ವಿಷಯಗಳನ್ನೂ ಚರ್ಚಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರ ಯೋಜನೆ ಫಲಪ್ರದವಾಗದೆ ಬರಿಗೈಲಿ ಮರಳಿದ್ದಾರೆ.
ಸಂಪುಟ ವಿಸ್ತರಣೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!
ಅರುಣ್ ಸಿಂಗ್ ಭೇಟಿ
ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ರಾಜ್ಯ ಹಾಗೂ ರಾಷ್ಟ್ರಮಟ್ಟದ ಇತರೆ ನಾಯಕರೊಂದಿಗೆ ಚರ್ಚಿಸಬೇಕಿದೆ ಎಂದಷ್ಟೇ ನಡ್ಡಾ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ರಾಜ್ಯಕ್ಕೆ ಇತ್ತೀಚೆಗಷ್ಟೇ ನೇಮಕವಾಗಿರುವ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರ ಜತೆಗೆ ಚರ್ಚಿಸಲಿದ್ದಾರೆ. ಬಳಿಕವೇ ಸಂಪುಟ ವಿಸ್ತರಣೆಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.
ಜೆಪಿ ನಡ್ಡಾ ಪ್ರವಾಸ
ಇನ್ನು ಕೆಲವು ದಿನಗಳ ಬಳಿಕ ಜೆಪಿ ನಡ್ಡಾ ಅವರು ನೂರು ದಿನಗಳವರೆಗೆ ವಿವಿಧ ರಾಜ್ಯಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಇದರ ಭಾಗವಾಗಿ ಮುಂದಿನ ತಿಂಗಳು ಕರ್ನಾಟಕಕ್ಕೆ ಕೂಡ ಬರಲಿದ್ದಾರೆ. ಅಲ್ಲಿಯವರೆಗೂ ಸಂಪುಟ ವಿಸ್ತರಣೆ ಅಥವಾ ಪುನರಾಚನೆ ನಡೆಯುವುದು ಅನುಮಾನ ಎಂದು ಹೇಳಲಾಗಿದೆ.