'ನಿವಾರ್' ಚಂಡಮಾರುತ: ಬೆಂಗಳೂರಲ್ಲಿ 'ಯೆಲ್ಲೋ ಅಲರ್ಟ್' ಘೋಷಣೆ
ಬೆಂಗಳೂರು, ನವೆಂಬರ್ 24: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರೂಪುಗೊಂಡಿರುವ ನಿವಾರ್ ಚಂಡಮಾರುತ ದಕ್ಷಿಣ ಭಾರತದ ಅನೇಕ ಕಡೆ ಅಬ್ಬರಿಸುವ ಸೂಚನೆ ನೀಡಿದೆ. ಬೆಂಗಳೂರು, ಚೆನ್ನೈ ಸೇರಿದಂತೆ ಅನೇಕ ಪ್ರಮುಖ ನಗರಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ಚಳಿ ವಾತಾವರಣ ನಿರ್ಮಾಣವಾಗಿದ್ದು, ಭಾರಿ ಮಳೆಯ ಮುನ್ಸೂಚನೆ ನೀಡಿದೆ. ಈ ವಾತಾವರಣ ಇನ್ನೂ ಎರಡು ಮೂರು ದಿನ ಮುಂದುವರಿಯಲಿದ್ದು, ಗುಡುಗು ಮತ್ತು ಭಾರಿ ಗಾಳಿ ಸಹಿತ ಮಳೆಯಾಗಲಿದೆ.
'ಬಂಗಾಳ ಉಪಸಾಗರದ ನೈಋತ್ಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ತಮಿಳುನಾಡು ಕರಾವಳಿಗೆ 'ನಿವಾರ್' ಚಂಡಮಾರುತ ಅಪ್ಪಳಿಸಲಿದೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಬೆಂಗಳೂರು ಸೇರಿದಂತೆ ಅನೇಕ ಭಾಗಗಳಲ್ಲಿ ನ. 25 ರಿಂದ 27ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ' ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್ ಪಾಟೀಲ ತಿಳಿಸಿದ್ದಾರೆ.
ನ.23ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಪುದುಚೆರಿ ಮತ್ತು ತಮಿಳುನಾಡಿನ ಕರಾವಳಿ ತೀರದ ಭಾಗಗಳಲ್ಲಿ ನಿವಾರ್ ಚಂಡಮಾರುತದ ಪರಿಣಾಮ ತೀವ್ರವಾಗಿರಲಿದೆ. ಇದರಿಂದ ಕರಾವಳಿ ಭಾಗದ ಜನರು ತೊಂದರೆಗೆ ಸಿಲುಕುವ ಅಪಾಯವಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದೆ ಓದಿ.
ದಕ್ಷಿಣ ಒಳನಾಡಿನಲ್ಲಿ ಮಳೆ
ಕರ್ನಾಟಕದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ 'ನಿವಾರ್' ಚಂಡಮಾರುತದ ಅಬ್ಬರ ಪ್ರಭಾವ ಬೀರುವ ಸಾಧ್ಯತೆ ಇದೆ. ನ. 25ರಂದು ಪುದುಚೆರಿ ಹಾಗೂ ತಮಿಳುನಾಡು ಕರಾವಳಿಗಳಿಗೆ ಚಂಡಮಾರುತ ಅಪ್ಪಳಿಸುವುದರಿಂದ ರಾಜ್ಯದಲ್ಲಿಯೂ ಅನೇಕ ಕಡೆ ಮಳೆಯಾಗಲಿದೆ ಎಂದು ಸಿ.ಎಸ್. ಪಾಟೀಲ ಹೇಳಿದ್ದಾರೆ.
ಯೆಲ್ಲೋ ಅಲರ್ಟ್ ಘೋಷಣೆ
ಮಂಗಳವಾರ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗಬಹುದು. ಬುಧವಾರದಿಂದ ಎರಡು ದಿನ ರಾಜ್ಯದ ಎಲ್ಲ ಭಾಗಗಳಲ್ಲಿಯೂ ಮಳೆ ಸುರಿಯಲಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಎರಡು ದಿನ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಈ ಭಾಗಗಳಲ್ಲಿ ಎರಡೂ ದಿನ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರಿ ಮಳೆ ಸುರಿಸಲಿದೆ 'ನಿವಾರ್' ಚಂಡಮಾರುತ
ಚಳಿ ಹೆಚ್ಚಾಗಲಿದೆ
ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡು ಭಾಗಗಳಲ್ಲಿ ಒಣಹವೆ ಮುಂದುವರಿಯಲಿದೆ. ನ. 25 ರಿಂದ 27ರವರೆಗೆ ಕರಾವಳಿಯ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮುಂದಿನ ವಾರದಲ್ಲಿ ಚಳಿ ಹೆಚ್ಚಲಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಚೆದುರಿದಂತೆ ಮಳೆ ಸುರಿಯಬಹುದು.
ಇರಾನ್ನಿಂದ ಬಂದ 'ನಿವಾರ್'
'ನಿವಾರ್' ಎಂಬ ಹೆಸರು ಇರಾನ್ನಿಂದ ಬಂದಿದೆ. ಈ ಚಂಡಮಾರುತ ತಮಿಳುನಾಡಿನ ಕಾರೈಕಲ್ ಮತ್ತು ಮಾಮಲ್ಲಪುರಂ ನಡುವೆ ವಾಯವ್ಯ ದಿಕ್ಕಿನಲ್ಲಿ ಸಾಗಲಿದೆ. ಬಳಿಕ ತಮಿಳುನಾಡು ಮತ್ತು ಪುದುಚೆರಿ ಕರಾವಳಿಗಳನ್ನು ಕ್ರಮಿಸುವ ನಿರೀಕ್ಷೆಯಿದೆ. ಬಳಿಕ ಭಾರತದ ಪೂರ್ವ ಕರಾವಳಿಯನ್ನು ತಲುಪುವುದರಿಂದ ಆಂಧ್ರಪ್ರದೇಶ, ತಮಿಳುನಾಡು ಮತ್ತು ಈಶಾನ್ಯ ಶ್ರೀಲಂಕಾಗಳಲ್ಲಿ ವಾಯುಭಾರ ಕುಸಿತದಿಂದ ಮಳೆಯಾಗಲಿದೆ.
Recommended Video
ತಮಿಳುನಾಡು, ಪುದುಚೆರಿಯಲ್ಲಿ ಅಬ್ಬರ
ತಮಿಳುನಾಡು, ಪುದುಚೆರಿಯ ಬಹುತೇಕ ಭಾಗಗಳಲ್ಲಿ ನ. 25ರಂದು ವರುಣನ ಆರ್ಭಟ ತೀವ್ರವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಯಲಸೀಮಾ, ತೆಲಂಗಾಣ, ದಕ್ಷಿಣ ಒಳನಾಡು ಮತ್ತು ಕರಾವಳಿ ಆಂಧ್ರಪ್ರದೇಶಗಳ ಹಲವೆಡೆ ಯೆಲ್ಲೋ ಮತ್ತು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಪ್ರಸ್ತುತ ಚಂಡಮಾರುತವು ಬಂಗಾಳಕೊಲ್ಲಿಯೆಡೆಗೆ ಗಂಟೆಗೆ 18 ಕಿಮೀ ವೇಗದಲ್ಲಿ ಸಾಗುತ್ತಿದ್ದು, ತಮಿಳುನಾಡು ಕರಾವಳಿಯನ್ನು ಸಮೀಪಿಸಿದೆ.