ಮಾಧ್ಯಮಗಳ ಮೇಲೆ 'ನಿತ್ಯಾ' ಭಕ್ತರ ಪ್ರಹಾರ
ನಿತ್ಯಾನಂದ ಆಶ್ರಮದಲ್ಲಿ ಮಕ್ಕಳಿಗೆ ಸಂವಿಧಾನ ಬದ್ದವಾಗಿ ಶಿಕ್ಷಣ ನೀಡುತ್ತಿಲ್ಲ ಸುಮಾರು 47 ಮಕ್ಕಳು ಮೂಲ ಸೌಕರ್ಯ, ಹಕ್ಕುಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ನಿತ್ಯಾನಂದ ಆಶ್ರಮಕ್ಕೆ ಮಕ್ಕಳನ್ನು ಮತ್ತು ಪೋಷಕರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮುಂದೆ ಹಾಜರುಪಡಿಸುವಂತೆ ಇತ್ತೀಚೆಗೆ ನೋಟೀಸ್ ನೀಡಿದ್ದರು.
ಆದರೆ ಈ ನೋಟೀಸ್ ಗೆ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಅವರ ಕಡೆಯಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ. ನೋಟಿಸ್ ಗೆ ಮನ್ನಣೆ ನೀಡದ ನಿತ್ಯಾನಂದ ಆಶ್ರಮದ ಮೇಲೆ ಮಂಗಳವಾರ(ಅ.15) ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ಮಾಡಿ ಕರೆತರುವ ಸಂದರ್ಭದಲ್ಲಿ ಮಾಧ್ಯಮಗಳು ಪೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಆಶ್ರಮದ ಸಿಬ್ಬಂದಿಗಳು ಹಠಾತ್ ದಾಳಿ ನಡೆಸಿದ್ದಾರೆ.
ನಿಮ್ಮನ್ನು ಯಾರೂ ಕರೆದಿದ್ದರು. ಚಿತ್ರೀಕರಣ ಮಾಡಲು ಯಾರು ಅನುಮತಿ ನೀಡಿದರು ಎಂದು ಅಡ್ಡಪಡಿಸಿ ಮಾಧ್ಯಮಗಳ ಮೇಲೆ ಗಲಾಟೆ ಮತ್ತು ದಾಳಿ ಮಾಡಿದ್ದಾರೆ ಎಂದು ಟಿವಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಆಶ್ರಮದಲ್ಲಿ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ಅನಾಮಿಕ ವ್ಯಕ್ತಿಯೊಬ್ಬರಿಂದಕರ್ನಾಟಕ ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಸಮಿತಿ (KCPCR)ಗೆ ದೂರು ಬಂದ ಮೇಲೆ ಪರಿಶೀಲನೆ ನಡೆಸಲು ನಿತ್ಯಾನಂದ ಆಶ್ರಮಕ್ಕೆ ಸಮಿತಿ ಸದಸ್ಯರಾದ ಶಿವರಾಜೇಗೌಡ ಹಾಗೂ ಎಡ್ವರ್ಡ್ ಥಾಮಸ್ ಅವರ ತಂಡ ತೆರಳಿದೆ. ಅದರೆ, ಪರಿಶೀಲನೆ ನಡೆಸಲು ಅವಕಾಶ ನೀಡದಿದ್ದಾಗ ರಾಮನಗರ ಪೊಲೀಸ್ ಠಾಣೆಯಲ್ಲಿ ಸೆ.19ರಂದು ದೂರು ದಾಖಲಿಸಲಾಗಿದೆ.
ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಗುರ್ನೀರ್ ತೇಜ್ ಅವರು ಈ ಪ್ರಕರಣದ ಬಗ್ಗೆ ವಿವರಿಸಿ ರಾಮನಗರ ಉಪಾಯುಕ್ತರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಮಕ್ಕಳ ಹಕ್ಕು ಸಂರಕ್ಷಣಾ ಸಮಿತಿ ಸದಸ್ಯರು ಕರ್ತವ್ಯ ನಿರ್ವಹಿಸಲು ತೆರಳಿದಾಗ ಆಶ್ರಮದಲ್ಲಿದ್ದ ರಾಗಸುಧಾ(ನಿತ್ಯಾನಂದ ಪರ ವಕೀಲೆ ಎಂದು ಕರೆದುಕೊಂಡಿದ್ದಾರೆ) ಎಂಬುವರು ಅಡ್ಡಿಪಡಿಸಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಎಸ್ ಪಿ ಅನುಪಮ್ ಅಗರವಾಲ್ ಅವರಿಗೆ ಲಿಖಿತ ದೂರು ನೀಡಲಾಗಿದೆ ಎಂದು KCPCR ಸಮಿತಿಯ ಚೇರ್ಮನ್ ಉಮೇಶ್ ಆರಾಧ್ಯ ಹೇಳಿದ್ದಾರೆ.