'ನಿಸರ್ಗ' ಪರಿಣಾಮ; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ
ಬೆಂಗಳೂರು, ಜೂನ್ 04 : ಮುಂಬೈ ನಗರಕ್ಕೆ ಭೀತಿ ಹುಟ್ಟಿಸಿದ್ದ 'ನಿಸರ್ಗ' ಚಂಡಮಾರುತ ತೀವ್ರತೆ ಕಳೆದುಕೊಂಡಿದೆ. ಚಂಡಮಾರುತದ ದಿಕ್ಕು ಬಲಿಸಿದ ಕಾರಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.
ಬುಧವಾರ ಮಧ್ಯಾಹ್ನ ಅಲಿಬಾಗ್ ಪ್ರದೇಶದಕ್ಕೆ 'ನಿಸರ್ಗ' ಚಂಡಮಾರುತ ಅಪ್ಪಳಿಸಿತು. ಆಗ ಗಾಳಿಯ ವೇಗ 120 ಕಿ. ಮೀ. ನಷ್ಟು ಇತ್ತು. ಕೆಲವೇ ಗಂಟೆಗಳಲ್ಲಿ ಅದು 80 ಕಿ. ಮೀ.ಗೆ ತಗ್ಗಿತು. ಆದ್ದರಿಂದ ಮುಂಬೈನಲ್ಲಿ ನಿರೀಕ್ಷೆ ಮಾಡಿದಷ್ಟು ಮಳೆಯಾಗಲಿಲಿಲ್ಲ.
ಅಪ್ಪಳಿಸಿದ 'ನಿಸರ್ಗ' ಚಂಡಮಾರುತ ; ಮುಂಬೈ ವಿಮಾನ ನಿಲ್ದಾಣ ಬಂದ್
'ನಿಸರ್ಗ' ಚಂಡಮಾರುತದ ಪ್ರಭಾವದಿಂದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚಂಡಮಾರುತ ಉತ್ತರ ಭಾಗಕ್ಕೆ ದಿಕ್ಕು ಬದಲಿಸಿದ್ದರಿಂದ ಕಾರವಾರ, ಕೊಡಗಿನಲ್ಲಿ ಮಳೆ ಸುರಿಯಿತು.
ನಿಸರ್ಗ ಚಂಡ ಮಾರುತದ ಎಫೆಕ್ಟ್: ಚಿಕ್ಕಮಗಳೂರಿನಲ್ಲಿ ಗಾಳಿ, ಮಳೆ
ಗುರುವಾರ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಆಗಾಗ ಜೋರಾಗಿ ಗಾಳಿ ಬೀಸಲಿದ್ದು, ಅಲ್ಲಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಿಸರ್ಗ ಚಂಡಮಾರುತ ಎಫೆಕ್ಟ್; ಉಡುಪಿಯಲ್ಲಿ ಶುರುವಾದ ಮಳೆ
ಕಾರವಾರದಲ್ಲಿ ಮಳೆ
ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಚಂಡಮಾರುತದ ಪ್ರಭಾವದಿಂದ ಭಾರಿ ಮಳೆ ಸುರಿಯಿತು. ಬೆಳಗ್ಗೆ 9ಕ್ಕೆ ಆರಂಭವಾದ ಮಳೆ ಸುಮಾರು ಮೂರು ತಾಸು ಸುರಿಯಿತು. ಸಮುದ್ರದಲ್ಲಿ ಅಲೆಗಳ ಉಬ್ಬರ ಹೆಚ್ಚಾಗಿದ್ದರಿಂದ ಅಂಕೋಲಾದಲ್ಲಿ ಕಡಲ ಕೊರೆತದ ಆತಂಕ ಉಂಟಾಯಿತು.
ಚಿಕ್ಕಮಗಳೂರು, ಶಿವಮೊಗ್ಗ
ಮತ್ತೊಂದು ಕಡೆ ಮಲೆನಾಡ ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿಯೂ ಮಳೆ ಸುರಿಯಿತು. ಸಾಗರ, ಹೊಸನಗರ, ಆನಂದಪುರದಲ್ಲಿ ಮಳೆ ಆಯಿತು. ಗುರುವಾರ ಸಹ ಜಿಲ್ಲೆಯಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಜನರಿಗೆ ನೋಟಿಸ್
ಕೊಡಗು ಜಿಲ್ಲೆಯ ಮಡಿಕೇರಿ, ನಾಪೋಕ್ಲು, ಗಾಳಿಬೀಡು ಮತ್ತು ತಲಕಾವೇರಿಯಲ್ಲಿ ಮಳೆಯಾಗಿದೆ. ಅಪಾಯಕಾರಿ ಪ್ರದೇಶದಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೋಟಿಸ್ ನೀಡಲು ಮುಂದಾಗಿದೆ.
ಮುಂಬೈನಲ್ಲಿ ಅಪಾರ ಹಾನಿ
ಮುಂಬೈ ಮಹಾನಗರದಲ್ಲಿ ಮಳೆ ಕಡಿಮೆ ಆಗಿದೆ. ಆದರೆ ಗಾಳಿಯ ಪರಿಣಾಮ ಅಪಾರ ನಷ್ಟವಾಗಿದೆ. ಮರಗಳು ಧರೆಗುರುಳಿದ್ದು, ಹಲವು ಕಡೆ ವಿದ್ಯುತ್ ಕಂಬಗಳು ಬಿದ್ದು ಹೋಗಿವೆ.