ಸ್ಪೋಟ ಪ್ರಕರಣ: ಪರಿಷತ್ನಲ್ಲಿ ಗಂಭೀರ ಚರ್ಚೆ; ಸರ್ಕಾರದ ಖಡಕ್ ಆದೇಶ!
ಬೆಂಗಳೂರು, ಫೆ. 03: ಶಿವಮೊಗ್ಗದ ಹುಣಸೋಡಿನ ಕಲ್ಲು ಕ್ವಾರಿ ಬಳಿ ಸಂಭವಿಸಿದ ಘಟನೆಯನ್ನು ಕಂದಾಯ ಇಲಾಖೆಯ ಆಯುಕ್ತರಿಂದ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಿದ್ದೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ವಿಧಾನಪರಿಷತ್ನಲ್ಲಿ ಹೇಳಿಕೆ ನೀಡಿದ್ದಾರೆ.
ನಿಯಮ 68ರಡಿ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಈ ಸಂಬಂಧ ಸ್ಟೋನ್ ಕ್ರಷರ್ ಮಾಲೀಕ ಡಿ.ವಿ. ಸುಧಾಕರ್ ಮತ್ತು ಜಮೀನು ಮಾಲೀಕ ಕುಲಕರ್ಣಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಕ್ರಷರ್ ಘಟಕದ ಲೈಸೆನ್ಸ್ ರದ್ದುಪಡಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.
ಘಟನೆಗೆ ಕಾರಣವಾದ 65 ಸಾವಿರ ಡಿಟೋನೇಟರ್ಸ್, 1,275 ಕೆಜಿ ಜಿಲೆಟಿನ್, 17500 ಮೀಟರ್ ಸೇಫ್ಟಿ ಫ್ಯೂಸ್ ವಶಪಡಿಸಿಕೊಳ್ಳಲಾಗಿದೆ. ಹೊಸದಾಗಿ ಕ್ರಷರ್ ಘಟಕಗಳಿಗೆ ಲೈಸೆನ್ಸ್ ಮಂಜೂರು ಮತ್ತು ನವೀಕರಣ ಮಾಡದಂತೆ ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮೃತರಿಗೆ ಸರ್ಕಾರದಿಂದ ಪರಿಹಾರ
ಘಟನೆ ನಡೆದ ಪ್ರದೇಶದಲ್ಲಿ ಮಂಜೂರಾಗಿರುವ ಜಮೀನುಗಳ ಗ್ರಾಂಟ್ಗಳನ್ನು ರದ್ದುಪಡಿಸಲಾಗಿದ್ದು, ಸೋಟದಲ್ಲಿ ಮೃತಪಟ್ಟ 6 ಜನರಿಗೆ ತಲಾ 5 ಲಕ್ಷ ಪರಿಹಾರವನ್ನು ನೀಡಲಾಗಿದೆ. ನಾಲ್ಕು ಮೃತರ ಗುರುತು ಪತ್ತೆ ತಡವಾಗಿದ್ದರಿಂದ ಪರಿಹಾರ ನೀಡಲು ವಿಳಂಬವಾಗಿದ್ದು, ಶೀಘ್ರ ಪರಿಹಾರ ಕೊಡುತ್ತೇವೆ ಎಂದು ಸಚಿವ ನಿರಾಣಿ ಅವರು ಸದನಕ್ಕೆ ಭರವಸೆ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಅನಕೃತ ಗಣಿಗಾರಿಕೆ ಮತ್ತು ಸಾಗಾಣಿಕೆ ಸಂಬಂಧ ಒಟ್ಟು 137 ಮೊಕದಮ್ಮೆಗಳನ್ನು ದಾಖಲಿಸಲಾಗಿರುತ್ತದೆ. ಮತ್ತು ಒಟ್ಟು 66 ಪ್ರಕರಣಗಳಲ್ಲಿ ರೂ. 67.95 ಲಕ್ಷಗಳ ದಂಡವನ್ನು ವಸೂಲು ಮಾಡಲಾಗಿರುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ವಿವರಿಸಿದರು.
ಪೊಲೀಸ್ ಠಾಣೆಗೆ ಮಾಹಿತಿ ಖಡ್ಡಾಯ
ಕಲ್ಲುಗಣಿಗುತ್ತಿಗೆ ಪ್ರದೇಶಗಳಲ್ಲಿ ಪ್ರತಿ ಬಾರಿ ಸ್ಪೋಟಕ ಉಪಯೋಗಿಸುವ ಮೊದಲು ಸಂಬಂಧಿಸಿದ ಪೋಲಿಸ್ ಠಾಣೆಗಳಿಗೆ ಕಡ್ಡಾಯವಾಗಿ ಮಾಹಿತಿ ಒದಗಿಸುವಂತೆ ಕಲ್ಲುಗಣಿಗುತ್ತಿಗೆದಾರರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗುತ್ತದೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ರಾಜ್ಯದಲ್ಲಿ ಅಭಿವೃದ್ದಿ ಮತ್ತು ನಿರ್ಮಾಣ ಕಾಮಗಾರಿಗಳಿಗೆ ಕಟ್ಟಡ ಕಲ್ಲು ಮತ್ತು ಕಟ್ಟಡ ಕಲ್ಲಿನ ಸಂಸ್ಕರಿಸಿದ ಉತ್ಪನ್ನಗಳಾದ ವಿವಿಧ ನಮೂನೆ ಜಲ್ಲಿ, ಎಂ-ಸ್ಯಾಂಡ್ ಮತ್ತು ಮರಳು ಅತಿ ಅವಶ್ಯವಾಗಿರುತ್ತದೆ ಎಂರು.
ಬೇಡಿಕೆಗೆ ಅನುಗುಣವಾಗಿ ಲೈಸನ್ಸ್
ರಾಜ್ಯದ ಬೇಡಿಕೆಗೆ ಅನುಗುಣವಾಗಿ ಜಲ್ಲಿ, ಎಂ-ಸ್ಯಾಂಡ್ ಇತ್ಯಾದಿ ಕಟ್ಟಡ ಸಾಮಾಗ್ರಿಗಳ ನಿಯಮಿತ ಪೂರೈಕೆಗಾಗಿ ಕಟ್ಟಡ ಕಲ್ಲು ಗಣಿಗಾರಿಕೆಗಾಗಿ ಕಲ್ಲುಗುತ್ತಿಗೆ ಮಂಜುರಾತಿ ಮತ್ತು ಕ್ರಷರ್ ಲೈಸೆನ್ಸ್ ನೀಡುವುದು ಅನಿವಾರ್ಯವಾಗಿದೆ ಎಂದು ಸಚಿವ ಮುರುಗೇಶ್ ನಿರಾಣಿ ಸದನಕ್ಕೆ ತಿಳಿಸಿದರು. ಸದ್ಯ ರಾಜ್ಯದಲ್ಲಿ ಒಟ್ಟು 2,493 ಕಲ್ಲುಗಣಿ ಗುತ್ತಿಗೆಗಳನ್ನು ಮತ್ತು 1,682 ಕ್ರಷರ್ ಘಟಕಗಳಿಗೆ ಲೈಸೆನ್ಸ್ ಮಂಜೂರು ಮಾಡಲಾಗಿದೆ.
ಒಟ್ಟು 289 ಎಂ-ಸ್ಯಾಂಡ್ ಘಟಕಗಳು ಕೆಲಸ ಮಾಡುತ್ತಿವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯು ರಾಜಸ್ವ ಸಂಗ್ರಹಿಸುವ ಇಲಾಖೆಯಾಗಿದ್ದು, 2019-20ನೇ ಸಾಲಿನಲ್ಲಿ ಒಟ್ಟು 3,629 ಕೋಟಿ ರೂ. ರಾಜಸ್ವ ಮತ್ತು 2020-21ನೇ ಸಾಲಿನಲ್ಲಿ 2318 ಕೋಟಿ ರೂ. ರಾಜಸ್ವ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನಿಡಿದ್ದಾರೆ.
Recommended Video
250 ದಶಲಕ್ಷ ಮೆಟ್ರಿಕ್ ಟನ್ ಬೇಡಿಕೆ
ರಾಜ್ಯದಲ್ಲಿ ಸರಾಸರಿ ಒಟ್ಟು 250 ದಶಲಕ್ಷ ಮೆಟ್ರಿಕ್ ಟನ್ ಪ್ರಮಾಣದ ಕಟ್ಟಡ ಕಲ್ಲು ಖನಿಜದ ಬೇಡಿಕೆ ಇರುತ್ತದೆ. 2019-20ನೇ ಸಾಲಿನಲ್ಲಿ ಕಟ್ಟಡ ಕಲ್ಲುಗಣಿಗಾರಿಕೆಯಿಂದ 1,486 ಕೋಟಿ ರೂ. ಮತ್ತು 2020-21ನೇ ಸಾಲಿನಲ್ಲಿ 735.53 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ, 2020-21ನೇ ಸಾಲಿನಲ್ಲಿ( ಜನವರಿ 21 ರ ಅಂತ್ಯದವರೆಗೆ) ಅನಕೃತ ಗಣಿಗಾರಿಕೆ ಮತ್ತು ಸಾಗಾಣಿಕೆ ಸಂಬಂಧ ಒಟ್ಟು 58 ಮೊಕದಮ್ಮೆಗಳನ್ನು ದಾಖಲಿಸಲಾಗಿದ್ದು 97 ಪ್ರಕರಣಗಳಲ್ಲಿ ರೂ.57.24 ಲಕ್ಷಗಳ ದಂಡ ವಸೂಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.