ನಿಪಾಹ್ ವೈರಸ್ ಭೀತಿ: ಕರ್ನಾಟಕದಲ್ಲಿ ಹೈ ಅಲರ್ಟ್
ಬೆಂಗಳೂರು, ಮೇ 22: ನಿಪಾಹ್ ವೈರಸ್ ದಾಳಿಗೆ ಕೇರಳ ತತ್ತರಿಸಿದೆ. ಈ ವೈರಸ್ ದಿನನಿತ್ಯ ಮಂದಿಯನ್ನು ಬಲಿತೆಗೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ರಾಜ್ಯ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವೈರಸ್ ಹರಡಲು ಕಾರಣವೇನು, ಪತ್ತೆ ಹೆಚ್ಚುವುದು ಹೇಗೆ, ರೋಗ ಲಕ್ಷಣಗಳು ಕಂಡುಬಂದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಏನು ಎಂಬುದರ ಬಗ್ಗೆ ಇಲಾಖೆ ಈಗಾಗಲೇ ವೈದ್ಯರಿಗೆ ಮಾಹಿತಿ ರವಾನಿಸಿದೆ.
ಮಾರಣಾಂತಿಕ ನಿಪಾಹ್ ವೈರಸ್ ಹೇಗೆ ಹರಡುತ್ತೆ ? ಮುನ್ನೆಚ್ಚರಿಕೆ ಏನು?
ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದೆ. ಕೇರಳದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಕ್ರಮ ವಹಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಬಾವಲಿ ಸೇರಿದಂತೆ ಪಕ್ಷಿಗಳು ಕಚ್ಚಿ ಬಿಟ್ಟಿರುವ ಹಣ್ಣುಗಳನ್ನು ಹಾಗೂ ಮರದ ಕೆಳಗೆ ಉದುರಿ ಬಿದ್ದರಿರುವ ಹಣ್ಣುಗಳನ್ನು ತಿನ್ನಬಾರದು, ಕೇರಳ ಗಡಿಭಾಗದಲ್ಲಿ ಜ್ವರ ಕಂಡು ಬಂದರೆ ಹೆಚ್ಚಿನ ಜಾಗೃತಿ ತುರ್ತು ತಪಾಸಣೆ ಅಗತ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಈ ವೈರಾಣು ಸೋಂಕು ಮೆದುಳಿಗೆ ಸೇರಿದಾಗ ರೋಗಿ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಅಂತಹ ಸಂದರ್ಭದಲ್ಲಿ ಅವರನ್ನು ಬದುಕಿಸುವುದು ತುಂಬಾ ಕಷ್ಟ. ಆದರೆ ರೋಗ ಲಕ್ಷ ಆಧರಿಸಿ ಕೂಡಲೇ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚನೆ ನೀಡಲಾಗಿದೆ. ರೋಗಿಯನ್ನು ಕೂಡಲೇ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ಪ್ರಾರಂಭಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಸುನಂದಾ ತಿಳಿಸಿದ್ದಾರೆ.