ಸುಮಲತಾ ಅಂಬರೀಷ್ಗೆ ನಿಖಿಲ್ ಕುಮಾರಸ್ವಾಮಿ ಶುಭ ಹಾರೈಕೆ
Recommended Video
ಬೆಂಗಳೂರು, ಮೇ 31: ಮಂಡ್ಯ ಲೋಕಸಭೆ ಚುನಾವಣೆ ವೇಳೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದ ಜೆಡಿಎಸ್ನ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ನಡುವಿನ ವಾಕ್ಸಮರಗಳು ಫಲಿತಾಂಶದ ಬಳಿಕ ಅಂತ್ಯಗೊಂಡಂತೆ ಕಾಣಿಸುತ್ತಿದೆ.
ಮಂಡ್ಯದಿಂದ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿರುವ ಸುಮಲತಾ ಅವರಿಗೆ ನಿಖಿಲ್ ಶುಭ ಹಾರೈಸಿದ್ದಾರೆ. ಈ ಮೂಲಕ ಕ್ರೀಡಾಮನೋಭಾವ ಮೆರೆದಿದ್ದಾರೆ. ಗುರುವಾರ ಕೂಡ ನಿಖಿಲ್ ಅವರು ಇನ್ಸ್ಟಾಗ್ರಾಂನಲ್ಲಿ ಅಂಬರೀಷ್ ಅವರ ಮಗ ಅಭಿಷೇಕ್ ಜತೆಗೆ ಇರುವ ಫೋಟೊ ಹಾಕಿ ಅವರ 'ಅಮರ್' ಚಿತ್ರಕ್ಕೆ ಶುಭ ಹಾರೈಸಿದ್ದರು. ಅವರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಅಭಿಗೆ ವಿಶ್ ಮಾಡಿದ ನಿಖಿಲ್, ಇದೆ ಸರಿಯಾದ ಹಾದಿ ಎಂದ ಸುಮಲತಾ
ಅದೇ ರೀತಿ ನಿಖಿಲ್ ಶುಕ್ರವಾರ ತಮ್ಮ ಫೇಸ್ಬುಕ್ ಪುಟದಲ್ಲಿ ಸುಮಲತಾ ಅವರಿಗೆ ಅಭಿನಂದನೆ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಆಯ್ಕೆಯಾದ ರಾಜ್ಯದ ಸಂಸದರಿಗೆ ಕೂಡ ಅಭಿನಂದನೆ ಹೇಳಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಅಗತ್ಯ ನೆರವು ಮತ್ತು ಯೋಜನೆಗಳನ್ನು ತರುವಂತೆ ಅವರು ಮನವಿ ಮಾಡಿದ್ದಾರೆ. ಹಾಗೆಯೇ, ಮಂಡ್ಯದಲ್ಲಿ ತಮ್ಮ ಸೋಲಿಗೆ ತಾವೇ ಹೊಣೆಗಾರ ಎಂದು ಹೇಳಿಕೊಂಡಿದ್ದಾರೆ. ಚುನಾವಣೆಯಲ್ಲಿ ಸೋತಿದ್ದರೂ ಮಂಡ್ಯ ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಜನರ ಆಶೀರ್ವಾದ ಪಡೆಯಲು ಪ್ರಯತ್ನ ಮುಂದುವರಿಸುತ್ತೇನೆ ಎಂದಿದ್ದಾರೆ. ಅವರ ಫೇಸ್ಬುಕ್ ಪುಟದಲ್ಲಿರುವ ಬರಹದ ಪೂರ್ಣಪಠ್ಯ ಹೀಗಿದೆ...
ಸಂಸದರಿಗೆ ಅಭಿನಂದನೆ
ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿರುವ ರಾಜ್ಯದ ಸಂಸತ್ ಸದಸ್ಯರಿಗೆ ನನ್ನ ಅಭಿನಂದನೆಗಳು. ರಾಜ್ಯದ ಹಿತವನ್ನು ಕಾಪಾಡುವ ಜೊತೆಗೆ, ವಿಶೇಷವಾಗಿ ನಮ್ಮ ರೈತರ ಹಾಗು ಬಡವರ ಪರವಾಗಿ, ಅವರ ಏಳಿಗೆಗಾಗಿ, ನಿಮ್ಮ ಪ್ರಯತ್ನಗಳು ಇರಲಿವೆ ಎಂದು ಎಲ್ಲ ಕನ್ನಡಿಗರಂತೆ, ನಾನೂ ಕೂಡ ನಿರೀಕ್ಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ರೈತರ ಸಮಸ್ಯೆಗೆ ನೆರವಾಗುವ ನಿರೀಕ್ಷೆ
ಹಾಗೆಯೇ, ಮಂಡ್ಯದಿಂದ ಆಯ್ಕೆಯಾಗಿರುವ ಸಂಸತ್ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಷ್ ಅವರಿಗೆ ನನ್ನ ಅಭಿನಂದನೆಗಳು. ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ, ನೆರವು ಸಿಗದೆ ನಮ್ಮ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ವಿಶೇಷ ನೆರವಿಗಾಗಿ ಬೇಡಿಕೆ ಹೊತ್ತು ರಾಜ್ಯಸರ್ಕಾರ ಕೇಂದ್ರಕ್ಕೆ ನಿಯೋಗಗಳನ್ನು ಕರೆದೊಯ್ದು, ಬರಿಗೈಯಲ್ಲಿ ಮರಳುತ್ತಿರುವುದನ್ನು ಕೂಡ ರಾಜ್ಯದ ಜನ ನೋಡುತ್ತಲೇ ಬಂದಿದ್ದಾರೆ. ಈಗ ಕೇಂದ್ರದಲ್ಲಿ ಆಳುವ ಪಕ್ಷದ ಬೆಂಬಲದೊಂದಿಗೆ ಇಲ್ಲಿ ನೀವು ಗೆದ್ದಿರುವುದರಿಂದ, ನಮ್ಮ ರೈತರಿಗೆ ಅರ್ಹ ನೆರವು, ಯೋಜನೆಗಳನ್ನು ತರುವಲ್ಲಿ ತಾವು ಯಶಸ್ವಿಯಾಗುವಿರಿ ಎನ್ನುವುದು ಮಂಡ್ಯದ ಜನರ ಹಾಗು ರೈತರ ನಿರೀಕ್ಷೆಯಾಗಿದೆ ಎಂದಿದ್ದಾರೆ.
ಮಂಡ್ಯದಲ್ಲಿ ಫಲಿತಾಂಶದ ನಂತರವೂ ಚರ್ಚೆ ನಿಂತಿಲ್ಲ...
ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ
ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮಂಡ್ಯದಲ್ಲಿ ಗೆಲುವು ಸಾಧಿಸದೆ ಇರುವುದಕ್ಕೆ, ಪಕ್ಷದ ಅಭ್ಯರ್ಥಿಯಾಗಿ ನಾನೇ ಹೊಣೆ. ಇದಕ್ಕಾಗಿ ಯಾರನ್ನೂ ದೂಷಿಸುವುದಿಲ್ಲ. ಹಿನ್ನಡೆಗೆ ಕಾರಣಗಳನ್ನು ನೀಡುವ ಬದಲು ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ನಾನು ಮಂಡ್ಯ ಬಿಟ್ಟು ಎಲ್ಲೂ ಹೋಗುವುದಿಲ್ಲ, ಇಲ್ಲೆ ಇರುತ್ತೇನೆ, ಈ ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿದ 5.77 ಲಕ್ಷ ಜನರ ನಿರೀಕ್ಷೆಗಳಿಗೆ ನಾನು ಉತ್ತರದಾಯಿಯಾಗಿದ್ದೇನೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಜನರ ಆಶೀರ್ವಾದ ಪಡೆಯುವ ನಿಟ್ಟಿನಲ್ಲಿ ನನ್ನ ಪ್ರಯತ್ನ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ.
ದೊಡ್ಡ ಜವಾಬ್ದಾರಿ ನನ್ನ ಮೇಲಿದೆ
ಪಕ್ಷದ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತರ ಪರಿಶ್ರಮ, ನಮ್ಮನ್ನು ಬೆಂಬಲಿಸಿದ ಜನರ ಪ್ರೀತಿ-ಅಭಿಮಾನಗಳ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ನಮ್ಮ ಜೆಡಿಎಸ್ ಪಕ್ಷದ ಸಾವಿರಾರು ನಿಷ್ಠಾವಂತ ಕಾರ್ಯಕರ್ತರ ಜೊತೆಗೆ ಪಕ್ಷ ಸಂಘಟನೆಯ ಕಾರ್ಯದಲ್ಲಿ ನಾನು ತೊಡಗಿಕೊಳ್ಳುತ್ತೇನೆ. ಜೆಡಿಎಸ್ ಪಕ್ಷದ ಬಲವರ್ಧನೆಗಾಗಿ ನನ್ನ ಪ್ರಯತ್ನ ಮುಂದುವರಿಯಲಿದೆ. ನನ್ನನ್ನು ಬೆಂಬಲಿಸಿ, ಆಶೀರ್ವದಿಸಿದ ಎಲ್ಲ ನನ್ನ ಮಂಡ್ಯದ ಬಂಧುಗಳಿಗೆ, ಹಿರಿಯರಿಗೆ. ತಾಯಂದಿರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಬರೆದಿದ್ದಾರೆ.