ಮಂಡ್ಯದಲ್ಲಿ ಜಮೀನಿಗಾಗಿ ಹುಡುಕಾಟ ನಡೆಸಿದ್ದಾರೆ ನಿಖಿಲ್ ಕುಮಾರಸ್ವಾಮಿ!
Recommended Video
ಬೆಂಗಳೂರು, ಜೂನ್ 03: ಮಂಡ್ಯ ಚುನಾವಣೆಯಲ್ಲಿ ಸೋತ ನಂತರ ನಿಖಿಲ್ ಕುಮಾರಸ್ವಾಮಿ ಮುಂದೇನು ಮಾಡುತ್ತಾರೆ? ಎಂಬ ಪ್ರಶ್ನೆ ಅವರ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರಿಗೆ ಕಾಡುತ್ತಿದೆ. ಇದಕ್ಕೆ ಸ್ವತಃ ಅವರೇ ಉತ್ತರ ನೀಡಿದ್ದಾರೆ.
ಮಂಡ್ಯ ಲೋಕಸಭೆ ಚುನಾವಣೆ ಸೋತ ಬಳಿಕ ಮೊದಲ ಬಾರಿಗೆ ನಿನ್ನೆ ಬಹಿರಂಗವಾಗಿ ಕಾಣಿಸಿಕೊಂಡ ನಿಖಿಲ್ ಕುಮಾರಸ್ವಾಮಿ, ದೇವನಹಳ್ಳಿ ತಾಲ್ಲೂಕು ವಿಜಯಪುರ ಬಳಿಯ ಬುಳ್ಳಹಳ್ಳಿಗೆ ಜೆಡಿಎಸ್ ಮುಖಂಡ ಸುನಿಲ್ ಅವರ ನಿವಾಸಕ್ಕೆ ಭೇಟಿ ನೀಡಿ ಕಾರ್ಯಕರ್ತರು, ಮುಖಂಡರೊಂದಿಗೆ ಮಾತುಕತೆ ನಡೆಸಿದರು.
ನಿಖಿಲ್ ಕುಮಾರಸ್ವಾಮಿಯನ್ನು ಹಾಡಿಹೊಗಳಿದ ಎಸ್ ಎಂ ಕೃಷ್ಣ
ಈ ಸಂದರ್ಭದಲ್ಲಿ ಮುಖಂಡರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ, ಪಕ್ಷ ಸಂಘಟನೆಯ ಬಗ್ಗೆ, ಚುನಾವಣೆ ಸೋಲಿನ ಬಗ್ಗೆ, ರಾಜ್ಯ ಪ್ರವಾಸದ ಬಗ್ಗೆ, ಮತದಾರರನ್ನು ತಲುಪುವ ಬಗ್ಗೆ ವಿಸ್ತೃತವಾಗಿ ಮಾತುಕತೆ ನಡೆಸಿದರು.
'ಈ ಲೋಕಸಭೆ ಚುನಾವಣೆ ನನಗೆ ಸಾಕಷ್ಟು ಕಲಿಸಿದೆ. ಮಂಡ್ಯದ ಜಿಲ್ಲೆಯ ಎಂಟೂ ತಾಲ್ಲೂಕುಗಳನ್ನು ಓಡಾಡಿದ ಮೇಲೆ ಸಾಕಷ್ಟು ಕಲಿತಿದ್ದೇನೆ, ಮುಂಚೆ ನಾನಿದ್ದ ಮನಸ್ಥಿತಿಗೂ ಈಗಿನದ್ದಕ್ಕೂ ಸಾಕಷ್ಟು ಪಕ್ವವಾಗಿದ್ದೇನೆ' ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
'ಮಂಡ್ಯದಲ್ಲಿ ಎರಡು ಎಕರೆ ತೋಟ ಮಾಡುತ್ತೇನೆ'
ಮಂಡ್ಯದಲ್ಲೇ ವಾಸವಿರಲಿದ್ದೇನೆ ಎಂದ ನಿಖಿಲ್ ಕುಮಾರಸ್ವಾಮಿ, ಮಂಡ್ಯದಲ್ಲಿ ಈಗಾಗಲೇ ಎರಡು ಎಕರೆ ನೀರಾವರಿ ಇರುವ ತೋಟಕ್ಕಾಗಿ ಹುಡುಕಾಟ ನಡೆಸಿದ್ದೇನೆ, ಅಲ್ಲಿಯೇ ಶೆಡ್ ಹಾಕಿಕೊಂಡು ಇರುತ್ತೇನೆ, ಕೃಷಿ ಮಾಡುತ್ತಾ ಜನರೊಂದಿಗೆ ಬೆರೆಯುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
'ಮಂಡ್ಯದಲ್ಲಿ ಜನರ ನಾಡಿ ಮಿಡಿತ ಅರಿತಿದ್ದೇನೆ'
ಮಂಡ್ಯದ ಜಿಲ್ಲೆಯಲ್ಲಿ ತಿರುಗಾಟ ಮಾಡಿ ಜನರ ನಾಡಿಮಿಡಿತ ಅರಿತಿದ್ದೇನೆ, ಇನ್ನು ರಾಜ್ಯದ ಜನರ ನಾಡಿಮಿಡಿತ ಅರಿಯಬೇಕಿದೆ. ಜನರೊಂದಿಗೆ ಬೆರೆತರಷ್ಟೆ ಸ್ಥಿತಿ-ಗತಿಗಳು ಗೊತ್ತಾಗುವುದು ಇನ್ನು ಮುಂದೆ ಜನರೊಂದಿಗೆ ಇರಲಿದ್ದೇನೆ ಎಂದು ನಿಖಿಲ್ ಹೇಳಿದರು.
ಸುಮಲತಾ ಅಂಬರೀಷ್ಗೆ ನಿಖಿಲ್ ಕುಮಾರಸ್ವಾಮಿ ಶುಭ ಹಾರೈಕೆ
ಸೋಲಿಸಿದ್ದಕ್ಕೆ ಜನರಿಗೂ ಬೇಸರವಾಗಿದೆ: ನಿಖಿಲ್
ಮಂಡ್ಯದಲ್ಲಿ ಎರಡು ಎಕರೆ ನೀರಾವರಿ ತೋಟ ನೋಡುತ್ತಿದ್ದೇನೆ, ಮಂಡ್ಯದಲ್ಲೇ ನೆಲೆಸುತ್ತೇನೆ, ಮನೆ ನಿರ್ಮಾಣವರೆಗೂ ಕಾಯುವುದಿಲ್ಲ, ಶೆಡ್ ಹಾಕಿ ಅದರಲ್ಲೇ ವಾಸ ಮಾಡುತ್ತೇನೆ. ಚುನಾವಣೆ ಸೋತಿರುವುದು ನಿಜ, ಜನರಿಗೂ ಎಲ್ಲೋ ಒಂದು ಕಡೆ ಬೇಸರ ಇದೆ, ಆದರೆ ಸೋತ ಮಾತ್ರಕ್ಕೆ ಸುಮ್ಮನೆ ಕೂರುವುದಿಲ್ಲ, ಹೋರಾಟ ಮುಂದುವರೆಸುತ್ತೇನೆ ಎಂದು ನಿಖಿಲ್ ಕಾರ್ಯಕರ್ತರು ಮುಖಂಡರ ಸಭೆಯಲ್ಲಿ ಹೇಳಿದರು.
ಹಲವು ಮುಖಂಡರೊಂದಿಗೆ ಚರ್ಚೆ
ಜೆಡಿಎಸ್ ಮುಖಂಡ ಸುನಿಲ್ , ಶಿಡ್ಲಘಟ್ಟ ಜೆಡಿಎಸ್ ಮುಖಂಡ ಮೇಲೂರು ರವಿಕುಮಾರ್, ಜೆಡಿಎಸ್ ಮುಖಂಡರಾದ ತಾದೂರು ರಘು, ಶಿಡ್ಲಘಟ್ಟ ಜೆಡಿಎಸ್ ಯುವ ಮುಖಂಡ ಕಿಶೋರ್, ದೇವನಹಳ್ಳಿ ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಹರ್ಷ ಇನ್ನೂ ಹಲವು ಮುಖಂಡರೊಡನೆ ನಿಖಿಲ್ ಕುಮಾರಸ್ವಾಮಿ ಅವರು ಚರ್ಚೆ ನಡೆಸಿದರು.