ಮಂಡ್ಯ ಚುನಾವಣೆ ಸೋತ ನಿಖಿಲ್ಗೆ ಕುಮಾರಸ್ವಾಮಿಯಿಂದ ಉಡುಗೊರೆ!
Recommended Video
ಬೆಂಗಳೂರು, ಜೂನ್ 03: ಮಗನೂ ತನ್ನಂತೆ ರಾಜಕೀಯದಲ್ಲಿ ಉನ್ನತ ಭವಿಷ್ಯ ಕಲ್ಪಿಸಿಕೊಳ್ಳಬೇಕೆಂಬ ಮಹದಾಸೆಯಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಮಂಡ್ಯ ಚುನಾವಣೆಗೆ ನಿಲ್ಲಿಸಿದ್ದ ಕುಮಾರಸ್ವಾಮಿ ಅವರಿಗೆ ಭಾರಿ ನಿರಾಸೆಯೇ ಆಗಿದೆ.
ನಿಖಿಲ್ ಕುಮಾರಸ್ವಾಮಿ ಲೋಕಸಭೆ ಪ್ರವೇಶದ ಮೂಲಕ ರಾಜಕೀಯಕ್ಕೆ ಪ್ರವೇಶ ಪಡೆಯಬೇಕು ಎಂಬುದು ಕುಮಾರಸ್ವಾಮಿ ಆಸೆಯಾಗಿತ್ತು. ಆದರೆ ನಿಖಿಲ್ ಅವರ ದಾಯಾದಿ ಸಹೋದರ ಪ್ರಜ್ವಲ್ ರೇವಣ್ಣ ಲೋಕಸಭೆಗೆ ಹೋಗುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ರಾಜಕೀಯ ಪ್ರವೇಶ ಮಾಡಬೇಕು ಎಂಬುದು ಕುಮಾರಸ್ವಾಮಿ ಆಸೆಯಾಗಿತ್ತು, ಅದಕ್ಕೆಂದೇ ವಿಧಾನಸಭೆ ಚುನಾವಣೆ ಸಮಯದಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನಿರಾಕರಿಸಲಾಗಿತ್ತು. ಆದರೆ ಎಚ್ಡಿಕೆ ಲೆಕ್ಕಾಚಾರ ಈಗ ಬದಲಾಗಿದೆ.
ಜೆಡಿಎಸ್ ಶಾಸಕರ ಮಹತ್ವದ ಸಭೆ, ರಾಜ್ಯಾಧ್ಯಕ್ಷರ ಬದಲಾವಣೆ ಸಾಧ್ಯತೆ
ಚುನಾವಣೆ ಸೋತಕೂಡಲೇ ಇರುವೊಬ್ಬ ಮಗನ ಭವಿಷ್ಯ ಮುಳುಗಿ ಹೋಯಿತೆಂದು ಕೈಕಟ್ಟಿ ಕೂರುವ ಅಪ್ಪ ಕುಮಾರಸ್ವಾಮಿ ಅಲ್ಲ. ಚುನಾವಣೆ ಸೋತರೇನಂತೆ ಜೆಡಿಎಸ್ ಪಕ್ಷದಲ್ಲಿ ಅತ್ಯಂತ ಪ್ರಭಾವಿ ಹುದ್ದೆಯನ್ನು ನಿಖಿಲ್ಗೆ ಕೊಡಲು ಸಿದ್ಧತೆ ನಡೆಸಿದ್ದಾರೆ ಕುಮಾರಸ್ವಾಮಿ.
ರಾಜ್ಯಾಧ್ಯಕ್ಷ ಸ್ಥಾನ ನಿಖಿಲ್ ಕುಮಾರಸ್ವಾಮಿಗೆ?
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನೇ ನಿಖಿಲ್ ಕುಮಾರಸ್ವಾಮಿ ಅವರಿಗೆ ಕೊಡುವ ಯೋಚನೆ ಕುಮಾರಸ್ವಾಮಿ ಅವರಿಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಜೆಡಿಎಸ್ನಲ್ಲಿ ಒಮ್ಮತ ಮೂಡುವ ಅನುಮಾನ ಇದೆ. ಆದರೆ ಕುಮಾರಸ್ವಾಮಿ ಈ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿಸಿದ್ದಾರೆ ಎಂಬ ಸುದ್ದಿ ಇದೆ.
ಪ್ರಜ್ವಲ್ ಸ್ಥಾನ ನಿಖಿಲ್ ಕುಮಾರಸ್ವಾಮಿಗೆ?
ಲೋಕಸಭೆಗೆ ಆಯ್ಕೆ ಆಗಿರುವ ಪ್ರಜ್ವಲ್ ರೇವಣ್ಣ ಅವರು ಜೆಡಿಎಸ್ ಕಾರ್ಯದರ್ಶಿ ಆಗಿ ದುಡಿದಿದ್ದರು. ಈಗ ಅದೇ ಸ್ಥಾನವನ್ನು ಅಥವಾ ಅದಕ್ಕಿಂತಲೂ ಉನ್ನತವಾದ ಹುದ್ದೆಯನ್ನು ನಿಖಿಲ್ ಕುಮಾರಸ್ವಾಮಿ ಅವರಿಗೆ ನೀಡುವ ಬಗ್ಗೆಯೂ ಚರ್ಚೆ ಆರಂಭವಾಗಿದೆ.
ಬುಧವಾರ ಸಂಪುಟ ವಿಸ್ತರಣೆ : ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ?
ಜೆಡಿಎಸ್ ಶಾಸಕರ ಸಭೆ ಕರೆದಿರುವ ಎಚ್ಡಿಕೆ
ನಾಳೆ ಎಲ್ಲಾ ಜೆಡಿಎಸ್ ಶಾಸಕರ ಸಭೆಯನ್ನು ಕುಮಾರಸ್ವಾಮಿ ಕರೆದಿದ್ದು, ಸಭೆಯು ತಮ್ಮ ನಿವಾಸದಲ್ಲಿಯೇ ನಡೆಯಲಿದೆ. ಈ ಸಭೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದಲ್ಲಿ ಹುದ್ದೆ ನೀಡುವ ಬಗ್ಗೆ ಘೋಷಿಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ ಎನ್ನಲಾಗಿದೆ.
ಪಕ್ಷ ಸಂಘಟನೆ ಮಾಡುತ್ತೇನೆ: ನಿಖಿಲ್
ಇದಕ್ಕೆ ತಕ್ಕಂತೆ ನಿಖಿಲ್ ಕುಮಾರಸ್ವಾಮಿ ಅವರು ಸಹ ಮಾಧ್ಯಮಗಳೊಂದಿಗೆ ಮಾತನಾಡಿ, ಸೋತೆನೆಂದು ಸುಮ್ಮನೆ ಕೂರುವುದಿಲ್ಲ, ಪಕ್ಷ ಸಂಘಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ.