ಮೂರು ವರ್ಷಗಳ ನಂತರ ಬೆಳಗಾವಿಯತ್ತ ಸರ್ಕಾರ
ಹುಬ್ಬಳ್ಳಿ, ನ.3: ಈ ಬಾರಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
2018ರಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಲಾಗಿತ್ತು. ಪ್ರತಿ ವರ್ಷ ಇಲ್ಲಿ ಅಧಿವೇಶನ ನಡೆಸಬೇಕು ಎಂಬ ಒತ್ತಾಯ ಇದ್ದರೂ ಸಹ ನಾನಾ ಕಾರಣಗಳನ್ನು ನೀಡಿ ಬೆಳಗಾವಿಯಲ್ಲಿ ಅಧಿವೇಶ ನಡೆಸುವ ನಿರ್ಧಾರವನ್ನು ಮುಂದೂಡಲಾಗುತ್ತಿತ್ತು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಅಧಿವೇಶನ ನಡೆಸುವುದಾಗಿ ಹೇಳಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚಸಲು ಮತ್ತು ಇಲ್ಲಿನ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಈ ಭಾಗದಲ್ಲಿ ಅಧಿವೇಶ ನಡೆಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಹಿತ ಈ ಭಾಗದ ಎಲ್ಲಾ ನಾಯಕರುಗಳು ಪಕ್ಷಾತೀತವಾಗಿ ಸರಕಾರವನ್ನು ಒತ್ತಾಯಿಸುತ್ತಿದ್ದರು. ಆದರೆ, ಕೋವಿಡ್ ನೆಪದಿಂದ ಎರಡು ವರ್ಷ ಬೆಳಗಾವಿ ಆಧಿವೇಶನ ಮುಂದೂಡಲಾಗಿತ್ತು.
ಈ ಕುರಿತು ಹುಬ್ಬಳ್ಳಿಯಲ್ಲಿ ಬುಧವಾರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಳಗಾವಿಯಲ್ಲಿ ಈ ಬಾರಿ ಅಧಿವೇಶನ ನಡೆಸುವುದು ನಿಶ್ಚಿತ. ಆದರೆ, ಯಾವಾಗಿನಿಂದ ನಡೆಸಬೇಕು, ಎಷ್ಟು ದಿನ ನಡೆಸಬೇಕು ಎಂಬ ನಿರ್ಧಾರವನ್ನು ನ.8ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ಎಂ.ಎಸ್.ಪಿ ದರದಲ್ಲಿ ಭತ್ತ ಖರೀದಿಗೆ ತೀರ್ಮಾನ:
ಭತ್ತ ಬೆಳೆಯುವ ಜಿಲ್ಲೆಗಳಾದ ರಾಯಚೂರು, ಕೊಪ್ಪಳ, ಯಾದಗಿರಿ, ಬಾಗಲಕೋಟೆ ಕೃಷ್ಣ , ಕಾವೇರಿ ಮತ್ತು ಕರಾವಳಿ ಜಲಾನಯನ ಪ್ರದೇಶದ ರೈತರಿಂದ ಭತ್ತ ಖರೀದಿ ಮಾಡಬೇಕೆಂಬ ಬೇಡಿಕೆಯಿದ್ದು, ಸರ್ಕಾರ ಕನಿಷ್ಟ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ) ಖರೀದಿಗೆ ತೀರ್ಮಾನಿಸಲಾಗಿದೆ. ಭತ್ತ ಮಾರಾಟ ಮಾಡುವ ರೈತರ ನೋಂದಣಿಯನ್ನು ದೀಪಾವಳಿಯ ನಂತರ ಪ್ರಾರಂಭಿಸಲು ಹಾಗೂ ಎಂ.ಎಸ್.ಪಿ ದರ ಆಧರಿಸಿ ಭತ್ತ ಖರೀದಿಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗೋವಿನ ಜೋಳ ಖರೀದಿಯ ಬಗ್ಗೆ ಸಚಿವ ಸಂಪುಟ ಉಪ ಸಮಿತಿಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಸರ್ಕಾರಕ್ಕೆ ನೂರು ದಿನ:
"ತಾವು ಅಧಿಕಾರ ವಹಿಸಿಕೊಂಡ ನಂತರದಲ್ಲಿ ಸರ್ಕಾರಕ್ಕೆ 100 ದಿನಗಳಾಗುತ್ತಿರುವುದು ಮಹತ್ವದ ವಿಚಾರವಲ್ಲ. ಆದರೆ ಪ್ರಾರಂಭಿಕ ಇಟ್ಟಿರುವ ಹೊಸ ಹೆಜ್ಜೆ, ನಿರ್ಧಾರ ಸವಾಲುಗಳನ್ನು ನಿಭಾಯಿಸಿದ ಬಗೆಯನ್ನು ವಿವರಿಸುವ ಕೆಲವನ್ನು ನಾಳೆ ಮಾಡಲಾಗುವುದು. ನಮ್ಮ ಕೆಲಸದ ಬಗ್ಗೆ ನಿರಂತರ ಮೌಲ್ಯಮಾಪನ ಮಾಡಿಕೊಳ್ಳಲಾಗುತ್ತಿದೆ" ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಉಪಚುನಾವಣೆ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಆಗುವುದಿಲ್ಲ. ಸಿಂಧಗಿಯಲ್ಲಿ 31 ಸಾವಿರ ಅಂತರದಿಂದ ಗೆಲುವು ಸಾಧಿಸಿದ್ದೇವೆ. ನಮ್ಮ ಆಡಳಿತಕ್ಕೆ ಒಪ್ಪಿಗೆಯ ಮುದ್ರೆ ಹಾಕಿದ್ದಾರೆ. ಆದರೆ, ಹಾನಗಲ್ನಲ್ಲಿ ಸಾಮೂಹಿಕವಾಗಿ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದು, ಅವರಿವರೆನ್ನದೆ ನಾವೆಲ್ಲರೂ ಅದರ ಹೊಣೆ ಹೊತ್ತಿದ್ದೇವೆ. ಅಲ್ಪ ಅಂತರದಲ್ಲಿ ಸೋತಿದ್ದೇವೆ. ಹಾನಗಲ್ ಸದಾ ಪೈಪೋಟಿಯ ಕ್ಷೇತ್ರ. ಒಮ್ಮೆ ಬಿಜೆಪಿ ಮತ್ತೊಮ್ಮೆ ಕಾಂಗ್ರೆಸ್ ಆಯ್ಕೆಯಾಗುತ್ತಿತ್ತು. ಕಾಂಗ್ರೆಸ್ ಅಭ್ಯರ್ಥಿ ಕೋವಿಡ್ ಸಂದರ್ಭದಲ್ಲಿ ಮಾಡಿದ ಕೆಲಸದಿಂದ ಜನ ಅವರಿಗೆ ಮತ ನೀಡಿದ್ದಾರೆ. ಲೋಪಗಳನ್ನು ಎಲ್ಲಿ ಸರಿಪಡಿಸಿಕೊಳ್ಳಬೇಕೋ ಅಲ್ಲಿ ಸರಿಪಡಿಸಲಾಗುವುದು ಎಂದರು.
ಬಿಟ್ ಕಾಯಿನ್
ಬಿಟ್ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಪಷ್ಟೀಕರಣ ನೀಡಲಾಗಿದೆ. ಪ್ರಕರಣದ ಮುಂದಿನ ತನಿಖೆಯನ್ನ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಪ್ರಕರಣವನ್ನು ಹಸ್ತಾಂತರಿಸಲಾಗಿದೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಗೃಹ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇಲ್ಲ. ಕಳೆದ 2 ವರ್ಷದಲ್ಲಿ ಅತಿ ಹೆಚ್ಚು ಪೊಲೀಸ್ ನೇಮಕಾತಿಯನ್ನು ಮಾಡಲಾಗಿದೆ ಎಂದು ಹೇಳಿದರು.