48 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆ ಇನ್ನೂ ಹೆಚ್ಚಾಗುತ್ತೆ
ಬೆಂಗಳೂರು, ಜುಲೈ 22: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದ ಕರಾವಳಿ, ಮಲೆನಾಡಿನ ಭಾಗಗಳಲ್ಲಿ ಮಳೆ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದಲ್ಲೂ ಮಳೆಯಾಗಲಿದೆ, ಕೊಡಗಿನಲ್ಲಿ ಕಳೆದ ವರ್ಷದ ಸುರಿದ ಮಳೆಯಿಂದ ನಲುಗಿತ್ತು. ಆದರೆ ಈ ಬಾರಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದ್ದು, ಮಳೆ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ದವಾಗಿದೆ.
ಜೋಡುಪಾಲದಲ್ಲಿ ಬರೆ ಕುಸಿತ; ಜನರಲ್ಲಿ ಹೆಚ್ಚಿದೆ ಆತಂಕ
ಮಳೆ ಅಧಿಕಗೊಂಡು ಯಾವುದೇ ಸಮಸ್ಯೆ ಉದ್ಭವಿಸಿದ್ದಲ್ಲಿ ಇದರ ನಿವಾರಣೆಗೆ ಎನ್ಡಿಆರ್ಎಫ್, ಅಗ್ನಿಶಾಮಕ, ಪೊಲೀಸ್ ಸಿಬ್ಬಂದಿ ತಯಾರಾಗಿದ್ದಾರೆ. ಯಾವುದೇ ಇಲಾಖೆ ಗಂಟೆಗೊಮ್ಮೆ ವರದಿ ಪಡೆಯಲಾಗುತ್ತಿದೆ. ಸದ್ಯ ಮಳೆ ಸಂಬಂಧಿಸಿದಂತೆ ಸಮಸ್ಯೆಗಳ ವರದಿಯಾಗಿಲ್ಲ. ಜಿಲ್ಲೆಯ ಜನತೆ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಬೆಂಗಳೂರಲ್ಲಿ ಮೋಡ ಕವಿದ ವಾತಾವರಣವಿದ್ದು ಎರಡು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದೆ. ಬೆಂಗಳೂರು ಕೇಂದ್ರಭಾಗದಲ್ಲಿ ಗರಿಷ್ಠ 27.6 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ ಗರಿಷ್ಠ 28.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.4 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಗರಿಷ್ಠ 29 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20.1ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ದಕ್ಷಿಣಕನ್ನಡದ, ಸುರತ್ಕಲ್, ಪಣಂಬೂರ್, ಕಟೀಲು ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಬುಧವಾರದಿಂದ ಇಲ್ಲಿಯವರೆಗೆ 79.4ಮಿ.ಮೀ ಮಳೆಯಾಗಿದ್ದು, ಭಾರೀ ಮಳೆಗೆ ಜಿಲ್ಲೆಯ ಜನರು ನಲುಗಿದ್ದಾರೆ.
ಸಮದ್ರಕ್ಕೆ ಇಳಿಯದಂತೆ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದ್ದು, ಯಾವುದೇ ಮಳೆ ಸಂಬಂಧಿಸಿದ ಸಮಸ್ಯೆಗಳಿಗೆ 1077 ಉಚಿತ ತುರ್ತು ಸೇವೆ ಸಂಖ್ಯೆಗೆ ಕರೆ ಮಾಡುವಂತೆ ಸೂಚಿಸಿದ್ದಾರೆ. ವಾಟ್ಸಾಪ್ ಸಂಖ್ಯೆ 9483908000 ನಂಬರಿಗೂ ಸಮಸ್ಯೆಗಳನ್ನು ತಿಳಿಸಬಹುದಾಗಿದೆ.
ಕೊಲ್ಲೂರಿನಲ್ಲಿ 15 ಸೆಂಮೀ, ಕಾರ್ಕಳ, ಆಗುಂಬೆಯಲ್ಲಿ 12 ಸೆಂಮೀ ಮಳೆಯಾಗಿದೆ. ಸಿದ್ದಾಪುರದಲ್ಲಿ 11 ಸೆಂಮೀ,ಕೊಟ್ಟಿಗೇಹಾರ, ಹೊಸನಗರದಲ್ಲಿ ತಲಾ 10 ಸೆಂ,ಮೀ, ಮೂಡಬಿದಿರೆ, ಕುಂದಾಪುರ, ಗೇರುಸೊಪ್ಪ, ಕುಮಟಾ, ಗೋಕರ್ಣ, ಮಂಗಳೂರು, ಶೃಂಗೇರಿ, ಕಾರವಾರ, ವಿರಾಜಪೇಟೆಯಲ್ಲಿ ಮಳೆಯಾಗಿದೆ. ಮುಂದಿನ 48 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.