ಸಮುದ್ರದಲ್ಲಿ ಸುಳಿಗಾಳಿ: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಎರಡು ದಿನ ಸಾಧಾರಣ ಮಳೆ ಸಾಧ್ಯತೆ
ಬೆಂಗಳೂರು, ಸೆಪ್ಟಂಬರ್ 26: ಹವಾಮಾನದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ರಾಜ್ಯದಲ್ಲಿ ತಣ್ಣಗಾಗಿದ್ದ ವರುಣ ಮತ್ತೆ ಅಬ್ಬರಿಸಲು ಪ್ರಾರಂಭಿಸಿದ್ದಾನೆ. ಮುಂದಿನ ಎರಡು ದಿನ ಉತ್ತರ ಒಳನಾಡು ಸೇರಿದಂತೆ ವಿವಿಧೆಡೆ ಸಾಧಾರಣವಾಗಿ ಮಳೆ ಬೀಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ರಾಜ್ಯಾದ್ಯಂತ ಬಹುತೇಕ ಎಲ್ಲ ಕಡೆಗಳಲ್ಲಿ ಕಳೆದ ಎರಡು ವಾರದಿಂದ ಮಳೆ ಸಂಪೂರ್ಣವಾಗಿ ಕ್ಷೀಣಿಸಿತ್ತು. ಇದೀಗ ಶನಿವಾರದಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಮಧ್ಯಾಹ್ನದ ನಂತರ ಮಳೆ ಆಗುತ್ತಿದೆ. ಪಶ್ಚಿಮ ಬಂಗಾಳಕೊಲ್ಲಿ ಸಮುದ್ರದಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿಯ ಪರಿಣಾಮ ರಾಜ್ಯದಲ್ಲಿ ಮಳೆ, ಚಳಿ ವಾತಾವರಣ ಕಂಡು ಬರುತ್ತಿದೆ. ಈ ಗುಳಿಗಾಳಿಯು ಓಡಿಶಾ ಕರಾವಳಿ ಮಾರ್ಗವಾಗಿ ಸಾಗಲಿದೆ. ಹೀಗಾಗಿ ಮುಂದಿನ ಎರಡು ದಿನ ಮಳೆ ಪರಿಸ್ಥಿತಿ ಹೀಗೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞ ಪ್ರಸಾದ್ ತಿಳಿಸಿದರು.
ಉತ್ತರ ಒಳನಾಡಿಗೆ ಮಂಗಳವಾರ ಸಹ ಮಳೆ
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಆಗಿದೆ. ಈ ಪ್ರದೇಶಗಳಲ್ಲಿ ಬುಧವಾರದ ವೇಳೆಗೆ ಮಳೆ ಕಡಿಮೆ ಆಗಲಿದೆ. ಆದರೆ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಂಗಳವಾರವು ಸಹ ಮಳೆ ಸುರಿಯಲಿದೆ.
ಬೆಳಗಾವಿ, ಹಾವೇರಿ, ಬಾಗಲಕೋಟೆ, ಹಾವೇರಿ, ಗದಗ, ಯಾದಗಿರಿ, ಕೊಪ್ಪಳ ಭಾಗದಲ್ಲಿ ಸಾಧಾರಣವಾಗಿ ಕೆಲವೊಮ್ಮೆ ಗುಡುಗು ಸಹಿತಿ ಜೋರು ಮಳೆ ಬರುವ ಸಾಧ್ಯತೆ ಇದೆ. ಅದೇ ರೀತಿ ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಸಹ ತುಂತುರು ಮಳೆ ಆಗಬಹುದು. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಂಭೀರ ಸ್ವರೂಪದ ಬದಲಾವಣೆಗಳು ಇಲ್ಲ ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮಳೆ ಈ ತಿಂಗಳಾಂತ್ಯಕ್ಕೆ ಕೊನೆಯಾಗುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ಹಿಂಗಾರು ಮಾರುಗಳ ಆಗಮನ ಅಕ್ಟೋಬರ್ ಎರಡನೇ ವಾರ ಎಂದು ಅಂದಾಜಿಸಲಾಗಿದೆ. ಅಲ್ಲಿಯವರೆಗೆ ಮುಂಗಾರು ಮಾರುತಗಳು ಆಗಾಗ ಮಳೆ ಸುರಿಸಲಿವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.