ರಾಜ್ಯ ರಾಜಕೀಯದಲ್ಲಿ ಬಿರುಗಾಳಿ: ಸಿದ್ದರಾಮಯ್ಯ ಬೆಚ್ಚಿಬೀಳಿಸುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ?
Recommended Video
'ಕೂಸು ಹುಟ್ಟುವ ಮುನ್ನವೇ ಕುಲಾವಿ' ಎನ್ನುವ ಮಾತಿನಂತೆ, ಉಪಚುನಾವಣೆಗೆ ಬಹಿರಂಗ ಪ್ರಚಾರ ನಡೆಯುತ್ತಿರುವ ಹೊತ್ತಿನಲ್ಲೇ, ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸುವ ಸುದ್ದಿಯೊಂದು ಹರಿದಾಡಲಾರಂಭಿಸಿದೆ.
ಈಗ ಹರಿದಾಡುತ್ತಿರುವ ಸುದ್ದಿ, ಮುಂದಿನ ದಿನಗಳಲ್ಲಿ, ಯಾವ ಆಯಾಮವನ್ನು ಪಡೆದುಕೊಳ್ಳಲಿದೆಯೋ ಅಥವಾ ಸೈಲೆಂಟಾಗುತ್ತೋ, ಎನ್ನುವುದರ ಬಗ್ಗೆ ಸ್ಪಷ್ಟನೆಯಿಲ್ಲ. ಆದರೆ, ಈ ಸುದ್ದಿಯನ್ನು ನಿರಾಕರಿಸಲು, ಎರಡೂ ಪಕ್ಷಗಳು ತಯಾರಿಲ್ಲ.
ಶೋಭಾ ಹೇಳಿಕೆಗೆ ಡೋಂಟ್ ಕೇರ್: ಬಿಜೆಪಿಯ ಶಿಸ್ತಿನ ಸಿಪಾಯಿ ಎಂದು ಪ್ರೂವ್ ಮಾಡಿದ ಜಗ್ಗೇಶ್
ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಮತ್ತೊಂದು ಸುತ್ತಿನ ಮೈತ್ರಿ ಸರಕಾರದ ಬಗ್ಗೆ ಮಾತುಕತೆ ಆರಂಭ ಹಂತದಲ್ಲಿದೆ ಎನ್ನುವ ಮಾಹಿತಿಯಿದೆ. ಈ ಸುದ್ದಿಗೆ ಇಂಬು ನೀಡುವಂತೆ, ಕಾಂಗ್ರೆಸ್ಸಿನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಬಿ.ಕೆ.ಹರಿಪ್ರಸಾದ್ ನೀಡಿರುವ ಹೇಳಿಕೆ.
ಡಿಸೆಂಬರ್ 9ರ ನಂತರ ಗುಡ್ ನ್ಯೂಸ್: ಮಲ್ಲಿಕಾರ್ಜುನ್ ಖರ್ಗೆ
ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಒಂದಾಗಿ ಸರಕಾರ ರಚಿಸಿರುವುದರಿಂದ, ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಸರಕಾರದ ಮಾತುಕತೆ, ಉಪಚುನಾವಣೆಯ ಫಲಿತಾಂಶದ ನಂತರ ಗರಿಗೆದರುವ ಎಲ್ಲಾ ಸಾಧ್ಯತೆಗಳಿವೆ. ಆದರೆ, ಈ ಸುದ್ದಿ, ವಿರೋಧ ಪಕ್ಷದ ನಾಯಕ, ಸಿದ್ದರಾಮಯ್ಯ, ಬೆಚ್ಚಿಬೀಳಿಸುವಂತದ್ದು ಎಂದು ಹೇಳಲಾಗುತ್ತಿದೆ.
ಎಂಟು ಸ್ಥಾನವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಬಿಜೆಪಿ
ಈ ಎಲ್ಲಾ ಆರಂಭಿಕ ಹಂತದ ಮಾತುಕತೆಗಳು, ಉಪಚುನಾವಣೆಯ ಫಲಿತಾಂಶದ ನಂತರವಷ್ಟೇ ಗರಿಗೆದರಲಿದೆ. ಬಿಜೆಪಿ, ಸರಕಾರ ಉಳಿಸಿಕೊಳ್ಳಲು, ಎಂಟು ಸ್ಥಾನವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿ ಇದೆ. ಹಾಗಾಗಿ, ಅದಕ್ಕಿಂತ, ಕಮ್ಮಿ ಸ್ಥಾನ ಬಿಜೆಪಿ ಗೆದ್ದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ವಿಚಾರ ಮುಂದಿನ ಹಂತಕ್ಕೆ ಸಾಗಲಿದೆ.
ಸಿದ್ದರಾಮಯ್ಯ ಹೊರತಾಗಿದ್ದರೆ ಮಾತ್ರ ಮೈತ್ರಿ
ಸದ್ಯದ ಸುದ್ದಿಯ ಪ್ರಕಾರ, ಜೆಡಿಎಸ್ ಮತ್ತೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಉತ್ಸುಕವಾಗಿದೆ. ಆದರೆ, ಕಾಂಗ್ರೆಸ್ ವಲಯದಲ್ಲಿ ಬೆಚ್ಚಿಬೀಳಿಸುವ ಸುದ್ದಿ ಏನಂದರೆ, ಮೈತ್ರಿಯಾದರೆ, ಅದು ಸಿದ್ದರಾಮಯ್ಯ ಹೊರತಾಗಿದ್ದರೆ ಮಾತ್ರ ಎನ್ನುವ ಇಂಗಿತವನ್ನು ಜೆಡಿಎಸ್ ವ್ಯಕ್ತ ಪಡಿಸಿದೆ ಎಂದು ಹೇಳಲಾಗುತ್ತಿದೆ.
ಸಿದ್ದು ಮೇಲೆ ದೇವೇಗೌಡ ಮತ್ತು ಎಚ್ಡಿಕೆಗೆ ಸಿಟ್ಟು
ಕುಮಾರಸ್ವಾಮಿ ಸರಕಾರ ಅಧಿಕಾರದಲ್ಲಿದ್ದಾಗ ಮತ್ತು ಸರಕಾರ ಪತನಗೊಂಡ ನಂತರ, ಜೆಡಿಎಸ್ ವರಿಷ್ಠರಿಗೆ ಮತ್ತು ಎಚ್ಡಿಕೆಗೆ, ಕಾಂಗ್ರೆಸ್ಸಿನಲ್ಲಿ ನೇರ ಸಿಟ್ಟು ಇದ್ದದ್ದು ಸಿದ್ದರಾಮಯ್ಯನವರ ಮೇಲೆ. ಸರಕಾರ ಪತನಗೊಳ್ಳಲು ಅವರೇ ಕಾರಣ ಎಂದು ನೇರವಾಗಿ ಹಲವು ಬಾರಿ ಹೇಳಿದ್ದರು. ಈಗ, ಉಪಚುನಾವಣೆಯ ಪ್ರಚಾರದ ವೇಳೆ, ಮಲ್ಲಿಕಾರ್ಜುನ ಖರ್ಗೆ ಮತ್ತು ಹರಿಪ್ರಸಾದ್ ನೀಡಿರುವ ಹೇಳಿಕೆ, ಈ ಎಲ್ಲಾ ಬೆಳವಣಿಗೆಗಳಿಗೆ ಇಂಬು ನೀಡುವಂತಿದೆ.
ಬಿಜೆಪಿ ಸರಕಾರ ಪೂರ್ಣಾವಧಿ ಮುಗಿಸಲಿದೆ, ದೇವೇಗೌಡ
ರಾಜ್ಯಕ್ಕೆ ಸದ್ಯ ಇನ್ನೊಂದು ಚುನಾವಣೆ ಸದ್ಯಕ್ಕೆ ಬೇಕಾಗಿಲ್ಲ. ಹಾಗಾಗಿ, ಬಿಜೆಪಿ ಸರಕಾರ ಪೂರ್ಣಾವಧಿ ಮುಗಿಸಲಿದೆ ಎಂದು ದೇವೇಗೌಡ್ರು ಮತ್ತು ಕುಮಾರಸ್ವಾಮಿ ಹೇಳಿದ್ದರು. ಆದರೆ, ದೋಸೆ ಮಗುಚಿ ಹಾಕಿದಂತೆ, ನಮ್ಮ ಬೆಂಬಲವಿರುತ್ತದೆ, ಆದರೆ, ಯಾವ ಪಕ್ಷಕ್ಕೆ ಎಂದು ಹೇಳಿಲ್ಲ ಎಂದು ಕುಮಾರಸ್ವಾಮಿ ರಿವರ್ಸ್ ಆಗಿದ್ದರು.
ರಾಜ್ಯದ ಜನತೆಗೆ ಶುಭ ಸುದ್ದಿ ನೀಡಲಿದ್ದೇವೆ, ಮಲ್ಲಿಕಾರ್ಜುನ ಖರ್ಗೆ
ಹುಬ್ಬಳ್ಳಿಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ, ಬಿ.ಕೆ.ಹರಿಪ್ರಸಾದ್, "ದೇವೇಗೌಡರು ಒಪ್ಪಿದರೆ, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಸರಕಾರ ರಚನೆಯಾಗಲಿದೆ" ಎಂದು ಹೇಳಿದ್ದಾರೆ. ಇನ್ನು, "ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಸೋಲಲಿದ್ದಾರೆ. ಡಿಸೆಂಬರ್ 09 ರ ನಂತರ ರಾಜ್ಯದ ಜನತೆಗೆ ಶುಭ ಸುದ್ದಿ ನೀಡಲಿದ್ದೇವೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಒಟ್ಟಿಗೆ, ಉಪಚುನಾವಣೆಯ ಫಲಿತಾಂಶ, ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನು ಬರೆಯಲಿದೆ.