ಭಾನುವಾರ ಗಮನಿಸಬೇಕಾದ ಪ್ರಮುಖ ಸುದ್ದಿಗಳು
ಬೆಂಗಳೂರು, ಡಿಸೆಂಬರ್ 29: ಪೇಜಾವರ ಶ್ರೀಗಳ ಆರೋಗ್ಯ ವರದಿ ಭಾನುವಾರ ಗಮನಿಸಬೇಕಾದ ಪ್ರಮುಖ ಸುದ್ದಿಗಳಲ್ಲಿ ಪ್ರಮುಖವಾದದ್ದಾಗಿದೆ.
-ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಆರೋಗ್ಯ ಗಂಭೀರವಾಗಿ ಕ್ಷೀಣಿಸಿದ್ದು, ಚೇತರಿಕೆ ಕಷ್ಟವೆಂದು ವೈದ್ಯರು ಹೇಳಿದ್ದಾರೆ. ಹಾಗಾಗಿ ಅವರನ್ನು ಜೀವರಕ್ಷಕಸಾಧನಗಳೊಂದಿಗೆ ಮಠಕ್ಕೆ ಕರೆದುಕೊಂಡು ಹೋಗಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಭಕ್ತಾದಿಗಳಲ್ಲಿ ತೀವ್ರ ಆತಂಕ ಉಂಟು ಮಾಡಿದೆ.
- ಜಾರ್ಖಂಡ್ ಸಿಎಂ ಆಗಿ ಹೇಮಂತ್ ಸೊರೆನ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವ ಸಾಧ್ಯತೆ ಇದೆ.
- ಸ್ವಯಂಘೋಷಿತ ದೇವಮಾನವ ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಲು ಕೇಂದ್ರವು ರಾಜ್ಯ ಕ್ಕೆ ಸೂಚಿಸಿದ್ದು, ಇಂದು ಜಾಮೀನು ರಹಿತ ವಾರೆಂಟ್ ಹೊರಡಿಸುವ ಸಾಧ್ಯತೆ ಇದೆ.
- ರಾಮನಗರದ ಕಪಾಲಬೆಟ್ಟದಲ್ಲಿ ಬೃಹತ್ ಏಸು ಪ್ರತಿಮೆ ನಿರ್ಮಾಣದ ಸುತ್ತಾ ಎದ್ದಿರುವ ವಿವಾದ ಮತ್ತೊಂದು ಹಂತಕ್ಕೆ ಹೋಗುವ ಸಾಧ್ಯತೆ ಇದ್ದು, ನಿನ್ನೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಏಸು ಪ್ರತಿಮೆ ಸುತ್ತಲ ರಾಜಕೀಯ ಮತ್ತೊಂದು ಮಜಲು ತೆಗೆದುಕೊಂಡು ಭೂ ವಿವಾದವಾಗುವ ಸಾಧ್ಯತೆ ಇದೆ.
- ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡ ಧ್ವಜಕ್ಕೆ ಬೆಂಕಿ ಇಟ್ಟು ಪುಂಡಾಟಿಕೆ ಮೆರೆದಿದ್ದು, ಇದರ ವಿರುದ್ಧ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೆಳಗಾವಿ-ಮಹಾರಾಷ್ಟ್ರ ಗಡಿಯಲ್ಲಿ ಆತಂಕ ಮನೆ ಮಾಡಿದೆ.
- ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 2 ರಂದು ರಾಜ್ಯಕ್ಕೆ ಆಗಮಿಸುತ್ತಿದ್ದು, ನಿಗದಿತ ಕಾರ್ಯಕ್ರಮದ ನಡುವೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಕೊಡುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.