ಪೇಜಾವರ ಶ್ರೀಗಳ ಆರೋಗ್ಯ ಮತ್ತು ಗಮನಿಸಬೇಕಾದ ಪ್ರಮುಖ ಸುದ್ದಿಗಳು
ಬೆಂಗಳೂರು, ಡಿಸೆಂಬರ್ 28: ಶನಿವಾರದಂದು ಗಮನಿಸಬೇಕಾದ ಪ್ರಮುಖ ಸುದ್ದಿಗುಚ್ಛದಲ್ಲಿ ಪ್ರಮುಖದ್ದು ಪೇಜಾವರ ಶ್ರೀಗಳ ಆರೋಗ್ಯ.
ಪೇಜಾವರ ಶ್ರೀಗಳ ಆರೋಗ್ಯ ದಿನೇ-ದಿನೇ ಕ್ಷೀಣಿಸುತ್ತಿದ್ದು ನಿನ್ನೆ ರಾತ್ರಿ ಬಿಡುಗಡೆ ಮಾಡಿರುವ ಶ್ರೀಗಳ ಆರೋಗ್ಯ ಮಾಹಿತಿ ಆತಂಕವನ್ನು ಹೆಚ್ಚು ಮಾಡಿದೆ.
- ಡಿ.ಕೆ.ಶಿವಕುಮಾರ್ ಅವರು ಏಸು ಪ್ರತಿಮೆಗೆ ಶಿಲಾನ್ಯಾಸ ಮಾಡಿದ ವಿಚಾರವನ್ನು ರಾಜ್ಯ ಬಿಜೆಪಿಯು ವಿವಾದವನ್ನಾಗಿಸುವ ಸರ್ವ ಪ್ರಯತ್ನ ಮಾಡುತ್ತಿದ್ದು, ಏಸು ಪ್ರತಿಮೆಗೆ ನೀಡಿದ ಜಾಗವನ್ನು ಹಿಂಪಡೆಯಬೇಕೆಂದು ನಿನ್ನೆ ಸಿಎಂ ಗೆ ಪತ್ರ ಬರೆಯಲಾಗಿದೆ. ಇಂದೂ ಸಹ ಈ ಪ್ರಹಸನ ಮುಂದುವರೆಯಲಿದೆ.
- ಆಂಧ್ರಪ್ರದೇಶದಲ್ಲಿ ರೈತರು-ವಿಪಕ್ಷ ಒಂದಾಗಿ ಜಗನ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ರಾಜ್ಯಕ್ಕೆ ಅಪರಾವತಿ ಹೊರತುಪಡಿಸಿ ಮೂರು ರಾಜಧಾನಿಯನ್ನು ಪ್ರಕಟಿಸಲು ಹೊರಟಿರುವುದು ಬಹುತೇಕರಲ್ಲಿ ಅಸಮಾಧಾನ ಉಂಟುಮಾಡಿದ್ದು, ಅಲ್ಲಿ ಪ್ರತಿಭಟನೆಗಳು ಜೋರಾಗಿವೆ. 'ಜನಪ್ರಿಯ' ಸರ್ಕಾರವಾದ ಜಗನ್ ಸರ್ಕಾರ ಪ್ರತಿಭಟನೆ ಹತ್ತಿಕ್ಕಲು ಏನು ಮಾಡುತ್ತದೆ ಎಂಬುದು ಕುತೂಹಲ. ಇಂದು ಮಹತ್ವದ ಸಂಪುಟ ಸಭೆ ನಡೆಯಲಿದ್ದು, ಪ್ರಕಟಣೆ ಹೊರಬೀಳಲಿದೆ.
- ಸಿಎಂ ಯಡಿಯೂರಪ್ಪ ಅವರು ಇಂದು ಶಿವಮೊಗ್ಗಕ್ಕೆ ತೆರಳಿ ಎರಡು ದಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕಿತ್ತು. ಆದರೆ ಅದು ಏಕಾ-ಏಕಿ ರದ್ದಾಗಿದೆ. ಅವರು ಡಲ್ಲಾಸ್ ಗೆ ತೆರಳುತ್ತಾರೆ ಎಂಬ ಸುದ್ದಿಯೂ ಇದೆ. ಆದರೆ ಖಚಿತವಾಗಿಲ್ಲ. ಸಿಎಂ ಕಾರ್ಯಕ್ರಮಗಳು ಏಕಾ-ಏಕಿ ರದ್ದಾಗಿರುವುದು ಅನುಮಾನ ಮೂಡಿಸುತ್ತಿದ್ದು, ಕಾರಣವೇನೆಂಬ ಕುತೂಹಲ ಇದೆ.
-ಒಲಿಂಪಿಕ್ ಅರ್ಹತೆಗಾಗಿ ಬಾಕ್ಸರ್ ಮೇರಿಕೋಮ್ ಮತ್ತು ನಿಖತ್ ಹಣಾಹಣಿ ನಡೆಸಲಿದ್ದಾರೆ. ಗೆದ್ದವರು ಒಲಿಂಪಿಂಕ್ ಅರ್ಹತೆ ಗಳಿಸಲಿದ್ದಾರೆ.