ಬಿಎಸ್ವೈಗೆ ಉಭಯ ಸಂಕಟ: ಗಡುವು ನೀಡಿದ ಶಾಸಕರು
Recommended Video
ಬೆಂಗಳೂರು, ಜನವರಿ 13: ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ 11 'ಮಾಜಿ ಅನರ್ಹ' ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉಭಯ ಸಂಕಟಕ್ಕೆ ಸಿಲುಕಿದ್ದಾರೆ.
ಅತ್ತ ಹೈಕಮಾಂಡ್ ಯಡಿಯೂರಪ್ಪ ಅವರ ಭೇಟಿಗೆ ಸಮಯ ನೀಡುತ್ತಿಲ್ಲ. ಜತೆಗೆ ಉಪ ಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡುವ ಪ್ರಸ್ತಾಪಕ್ಕೆ ಒಪ್ಪುತ್ತಿಲ್ಲ. ಇತ್ತ ಕೊಟ್ಟ ಮಾತು ಉಳಿಸಿಕೊಳ್ಳಿ, ಚುನಾವಣೆ ಮುಗಿದು ಒಂದು ತಿಂಗಳು ಮುಗಿದರೂ ಸಂಪುಟ ವಿಸ್ತರಣೆಯ ಸೂಚನೆ ಕಂಡುಬಾರದ ಹಿನ್ನೆಲೆಯಲ್ಲಿ, ಬಂಡಾಯದ ಹಾದಿಯ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದ ಮಾಜಿ ಅನರ್ಹರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುತ್ತಿದ್ದು, ಹೊಸ ಗಡುವು ನೀಡಿದ್ದಾರೆ ಎನ್ನಲಾಗಿದೆ.
ಮಾಜಿ ಅನರ್ಹರಿಗೆ ಸಚಿವ ಸ್ಥಾನ: ಉಲ್ಟಾ ಹೊಡೆದ ಉಪ ಮುಖ್ಯಮಂತ್ರಿ
ಚುನಾವಣಾ ಫಲಿತಾಂಶ ಬಂದ ಕೂಡಲೇ ಮಂತ್ರಿಗಿರಿ ನೀಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿಯೂ ಅಭ್ಯರ್ಥಿ ಪರ ಪ್ರಚಾರ ಮಾಡುವ ವೇಳೆ ಭರವಸೆ ನೀಡಿದ್ದರು. ಆದರೆ ಒಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆಯ ಯಾವ ಪ್ರಯತ್ನವೂ ನಡೆದಿಲ್ಲ ಎನ್ನುವುದು ನೂತನವಾಗಿ ಆಯ್ಕೆಯಾದ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ.
ಹೊಸ ಗಡುವು ನೀಡಿದ ಶಾಸಕರು
ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಚುನಾವಣೆ ಫಲಿತಾಂಶ ಬಂದ ಸಂದರ್ಭದಿಂದಲೂ ಸಂಪುಟ ವಿಸ್ತರಣೆಗೆ ಹೊಸ ದಿನಾಂಕವನ್ನು ನೀಡುತ್ತಲೇ ಇದ್ದಾರೆ. ಸಂಕ್ರಾಂತಿ ಹಬ್ಬದ ಬಳಿಕ ಒಂದೆರಡು ದಿನಗಳಲ್ಲಿಯೇ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ. ಆದರೆ ಅದರ ಯಾವ ತಯಾರಿಯೂ ಕಂಡುಬರುತ್ತಿಲ್ಲ ಎನ್ನುವುದು ನೂತನ ಶಾಸಕರ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ಈ ತಿಂಗಳ 18 ರಿಂದ 20ರೊಳಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಮುಗಿಸಬೇಕೆಂದು ಗಡುವು ನೀಡಿದ್ದಾರೆ ಎಂದು ಹೇಳಲಾಗಿದೆ.
ಸರ್ಕಾರದ ವಿರುದ್ಧ ಶಾಸಕರ ಅಸಮಾಧಾನ
ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ನೂತನ ಶಾಸಕರು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಹಲವು ಬಾರಿ ಸಭೆ ನಡೆಸಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾಗಲು ಕಾರಣವಾಗಿದ್ದೇ ನಮ್ಮ ತ್ಯಾಗವೇ ಕಾರಣ. ಅದನ್ನು ಬಿಜೆಪಿ ಕೂಡ ಹಲವು ಬಾರಿ ಪ್ರಸ್ತಾಪಿಸಿದೆ. ಹಾಗೆಯೇ ಸಚಿವ ಸ್ಥಾನ ನೀಡುವುದಾಗಿ ಮಾತು ನೀಡಿದೆ. ಆದರೂ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ ಎಂದು ಸಭೆಯಲ್ಲಿ ಚರ್ಚೆ ನಡೆದಿದೆ.
ಯಡಿಯೂರಪ್ಪ ಅವರ ನಂಬಿದ್ದ 'ಮಾಜಿ ಅನರ್ಹ'ರಿಗೆ ಆಘಾತ: ಕೆಲವರಿಗಷ್ಟೆ ಸಚಿವ ಸ್ಥಾನ?
ಅಮಿತ್ ಶಾ ಬಂದಾಗಲೇ ಚರ್ಚೆ
ಜ. 11-12ರಂದು ದೆಹಲಿಗೆ ತೆರಳಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಇತರೆ ಸಚಿವರನ್ನು ಭೇಟಿ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಅಮಿತ್ ಶಾ ಸಮಯ ನೀಡಿದರೆ ದೆಹಲಿಗೆ ಹೋಗುವುದಾಗ ತಿಳಿಸಿದ್ದರು. ಆದರೆ ಅಮಿತ್ ಶಾ ಅವರಿಂದ ಭೇಟಿಗೆ ಸಮಯ ಸಿಕ್ಕಿದಂತಿಲ್ಲ. ಹೀಗಾಗಿ ಯಡಿಯೂರಪ್ಪ ದೆಹಲಿಗೆ ಪ್ರಯಾಣಿಸಿಲ್ಲ. ಈ ನಡುವೆ ಅಮಿತ್ ಶಾ ಅವರೇ ಜ.18ರಂದು ಹುಬ್ಬಳ್ಳಿ ಮತ್ತು ಬೆಂಗಳೂರಿಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿಯೇ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ. ನೂತನ ಶಾಸಕರು ಕೂಡ ಈ ವೇಳೆ ಅಮಿತ್ ಶಾ ಜತೆ ಚರ್ಚೆ ನಡೆಸಿ ಒಪ್ಪಿಗೆ ಪಡೆಯುವಂತೆ ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಲು ನಿರ್ಧರಿಸಿದ್ದಾರೆ.
ದಾವೋಸ್ಗೆ ತೆರಳಲೇಬೇಕು
ಸ್ವಿಟ್ಜರ್ಲೆಂಡ್ನ ದಾವೋಸ್ನಲ್ಲಿ ಜ.20ರಿಂದ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದು ಕಷ್ಟ. ಅಲ್ಲಿಗೆ ತೆರಳುವುದು ಅನುಮಾನ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದರು. ಆದರೆ ಸಮ್ಮೇಳನದಲ್ಲಿ ಕಡ್ಡಾಯವಾಗಿ ಭಾಗವಹಿಸಲೇಬೇಕು ಎಂದು ಪ್ರಧಾನಿ ಮೋದಿ ಮತ್ತೊಮ್ಮೆ ಸೂಚನೆ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ದಾವೋಸ್ಗೆ ತೆರಳಲಿದ್ದಾರೆ ಎನ್ನಲಾಗಿದೆ.