ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬಂಪರ್ ಕೊಡುಗೆ
ಬೆಂಗಳೂರು, ಆಗಸ್ಟ್ 19 : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ, ಸಾಮಾಜಿಕ ಪರಿವರ್ತನೆಯ ತುಡಿತದ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ವರ್ಷದ ಸಮಾರೋಪದ ಸವಿ ನೆನಪಿಗಾಗಿ ರಾಜ್ಯ ಸರ್ಕಾರ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಬಂಪರ್ ಕೊಡುಗೆಗಳನ್ನು ನೀಡಿದೆ.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರಗಳನ್ನು ನೀಡಿದರು. ರಾಜ್ಯದ ಎಲ್ಲಾ 2408 ಹಿಂದುಳಿದ ವರ್ಗದ ವಿದ್ಯಾರ್ಥಿನಿಲಯಗಳನ್ನು ಡಿ. ದೇವರಾಜ ಅರಸು ವಿದ್ಯಾರ್ಥಿನಿಲಯ ಎಂದು ನಾಮಕರಣ ಮಾಡಿ ಆದೇಶ ಹೊರಡಿಸಲಾಗಿದೆ.[ಚಿತ್ರಗಳು : ಕಲಬುರಗಿಯಲ್ಲಿ ದೇವರಾಜ ಅರಸು ರಥಯಾತ್ರೆ]
ಹಿಂದುಳಿದ ವರ್ಗದ ಆಯ್ದ 600 ಪಿಎಚ್ಡಿ ವಿದ್ಯಾರ್ಥಿಗಳಿಗಾಗಿ ಮಾಸಿಕ 500 ರೂ. ಶಿಷ್ಯವೇತನ ನೀಡುವ ಮೂಲಕ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಉದ್ದೇಶಿಸಲಾಗಿದೆ. ಪ್ರತಿಭಾವಂತ ಹಿಂದುಳಿದ ವರ್ಗದ ಪದವಿ/ಸ್ನಾತಕೋತ್ತರ 2500 ವಿದ್ಯಾರ್ಥಿಗಳಿಗೆ ಡಿ. ದೇವರಾಜ ಅರಸು ಪ್ರತಿಭಾ ಪುರಸ್ಕಾರ ಅಡಿಯಲ್ಲಿ 10 ಸಾವಿರ ರೂ. ದಿಂದ 25 ಸಾವಿರ ರೂ.ವರೆಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.
ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ ಆರಂಭಿಸಿದ್ದು ಪ್ರಸಕ್ತ ಸಾಲಿನಲ್ಲಿ 99 ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ತಲಾ ಗರಿಷ್ಠ 10 ಲಕ್ಷ ರೂ. ನೀಡಲಾಗಿದೆ.[ಅರಸು ಹುಟ್ಟೂರನ್ನು ದತ್ತು ಪಡೆದ ಸರ್ಕಾರ]
ದೇವರಾಜ ಅರಸು ಪ್ರಶಸ್ತಿ : ಕರ್ನಾಟಕ ಸರ್ಕಾರ ನೀಡುವ ಡಿ. ದೇವರಾಜ ಅರಸು 2016ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿಗಾಗಿ ಮಂಗಳೂರಿನ ಮಾಜಿ ಸಚಿವ ಬಿ.ಎ ಮೋಹಿದ್ದೀನ್ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ಮೊಹಿದ್ದೀನ್ ಅವರು ಬಿಎಸ್ಸಿ ಮತ್ತು ಡಿಪ್ಲೋಮ ಪದವೀಧರರಾಗಿದ್ದು, ಗೋವಿಂದೇಗೌಡರೊಂದಿಗೆ ಸೇರಿ ಭೂ ರಹಿತರಿಗೆ ಭೂಮಿ ಒದಗಿಸುವ ಕಾರ್ಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.
1978ರ ಚುನಾವಣೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿ ಮೊದಲ ಭಾರಿಗೆ ಆಯ್ಕೆಯಾಗಿದ್ದ ಇವರು 1996 ರಲ್ಲಿ ಜೆ.ಎಚ್.ಪಟೇಲ್ ಮಂತ್ರಿ ಮಂಡಲದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಎರಡೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.