ನಾಳೆಯೆ ಸಂಪುಟ ವಿಸ್ತರಣೆ: ಕಳಪೆ ಸಾಧನೆ ಮಾಡಿರುವ ಮಂತ್ರಿಗಳಿಗೆ ಕೋಕ್?
ಬೆಂಗಳೂರು, ಜ.30: ಹೈಕಮಾಂಡ್ ಭೇಟಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಗೆ ತೆರಳುತ್ತಿದ್ದಂತೆಯೆ ರಾಜ್ಯ ಬಿಜೆಪಿಯಲ್ಲಿ ಸಚಿವ ಸಂಪುಟದ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ. ಯಾರನ್ನು ಸಂಪುಟದಲ್ಲಿ ಉಳಿಸಿಕೊಳ್ಳುತ್ತಾರೆ? ಯಾರನ್ನು ಸಂಪುಟದಿಂದ ಕೈಬಿಡುತ್ತಾರೆ, ಯಾರನ್ನು ಸೇರಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಯಾರಿಗೂ ಇಲ್ಲವೆಂದು ಹೇಳಲಾಗುತ್ತಿದೆ. ಹೈಕಮಾಂಡ್ ತನ್ನದೇ ಆದ ಸೂತ್ರವನ್ನು ಸಿದ್ಧಪಡಿಸಿಕೊಂಡಿದ್ದು, ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ ಬಳಿಕ ಅಂತಿಮ ನಿರ್ಧಾರವಾಗಲಿದೆ.
ಇದರೊಂದಿಗೆ ಹಲವು ಸಚಿವಸ್ಥಾನ ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಹೈಕಮಾಂಡ್ ಮೇಲೆ ಪ್ರಭಾವ ಬೀರಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ಹಲವು ಆಕಾಂಕ್ಷಿಗಳು ದೆಹಲಿಯಲ್ಲಿ ಭೇಟಿ ಮಾಡಿದ್ದಾರೆ.
ತೃಪ್ತಿ ತರದ ಸಚಿವರ ಕಳೆದ ಆರು ತಿಂಗಳ ಸಾಧನೆ
ಕಳೆದ ಆರು ತಿಂಗಳಲ್ಲಿ ಮಂತ್ರಿಗಳ ಸಾಧನೆ ಬಿಜೆಪಿ ಹೈಕಮಾಂಡ್ಗೆ ತೃಪ್ತಿ ತಂದಿಲ್ಲ ಎನ್ನಲಾಗಿದೆ. ಎಲ್ಲ ಇಲಾಖೆಗಳ ಕಾರ್ಯವೈಖರಿ ವರದಿಯನ್ನು ಬಿಜೆಪಿ ಹೈಕಮಾಂಡ್ ಪಡೆದುಕೊಂಡಿದೆ. ಮಂತ್ರಿಗಳ ಸಾಧನೆ ಆಧಾರದ ಮೇಲೆ ಸಂಪುಟ ವಿಸ್ತರಣೆ ಆಗಲಿದೆ. ಒಂದಿಬ್ಬರು ಮಂತ್ರಿಗಳನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಗಳು ಇದ್ದು, ಬೇರೆಯವರಿಗೆ ಅವಕಾಶ ಕೊಡುವ ಸಾಧ್ಯತೆಗಳಿವೆ.
ಸಂಪುಟ ಸಂಕಷ್ಟ: ದೆಹಲಿಗೆ ತೆರಳಿದ ಸಿಎಂ ಯಡಿಯೂರಪ್ಪ
ರಾಜೀನಾಮೆ ಕೊಟ್ಟು ಬಿಜೆಪಿಯಿಂದ ಆಯ್ಕೆಯಾಗಿರುವ ಎಲ್ಲ ಶಾಸಕರನ್ನು ಮಂತ್ರಿ ಮಾಡುವ ಸಾಧ್ಯತೆಗಳಿಲ್ಲ. ಬೆಳಗಾವಿ ಜಿಲ್ಲೆಗೆ ಈಗಾಗಲೇ ಆಧ್ಯತೆ ಹೆಚ್ಚಾಗಿದೆ. ಹಾಗಾಗಿ ಶಾಶಕರಾದ ಮಹೇಶ್ ಕುಮಟಳ್ಳಿ ಹಾಗೂ ಶ್ರೀಮಂತ್ ಪಾಟೀಲ್ ಅವರನ್ನು ಸಿಎಂ ಸಮಾಧಾನ ಮಾಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿಯೆ ಸಿಎಂ ದೆಹಲಿಗೆ ತೆರಳಿದ ಬಳಿಕ ವಿಧಾನಸೌಧದಲ್ಲಿ ಮಾತನಾಡಿರುವ ಮಹೇಶ್ ಕುಮಟಳ್ಳಿ, ಸಚಿವನಾಗಲು ನನಗೆ ಗಡಿಬಿಡಿ ಇಲ್ಲ. ಸಚಿವಸ್ಥಾನ ಸಿಕ್ಕರೆ ಮಂತ್ರಿಯಾಗಿ ಕೆಲಸ ಮಾಡುತ್ತೇನೆ, ಸಿಗದೇ ಇದ್ದರೆ ಶಾಸಕನಾಗಿ ಕೆಲಸ ಮಾಡುತ್ತೇನೆ. ಸಿಎಂ ಯಡಿಯೂರಪ್ಪ ಅವರ ಮೇಲೆ ಅಸಮಾಧಾನವಿಲ್ಲ ಎಂದಿದ್ದಾರೆ.
ಸೋತವರ ಬಗ್ಗೆ ವರಿಷ್ಠರು ತೀರ್ಮಾನ ಮಾಡುತ್ತಾರೆ
ಇರುವ ಡಿಸಿಎಂಗಳನ್ನು ಮುಂದುವರೆಸುವ ಬಗ್ಗೆ, ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುತ್ತಾರೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಿದ್ದೇನೆ ಎಂದು ಡಿಸಿಎಂ ಗೋವಿಂದ ಕಾರಜೋಳ ವಿಧಾನಸೌಧದಲ್ಲಿ ಹೇಳಿದ್ದಾರೆ. ಆದರೆ ಮುಖ್ಯಂತ್ರಿ ಯಡಿಯೂರಪ್ಪ ಅವರು ಹೇಳಿದಂತೆ ಇನ್ನೆರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗಲಿದೆ ಎಂದಿದ್ದಾರೆ.
ಉಪ ಚುನಾವಣೆಯಲ್ಲಿ ಸೋತಿರುವವರನ್ನು ಸಧ್ಯ ಸಂಪುಟಕ್ಕೆ ಸೇರಿಸಿ ಕೊಳ್ಳುವುದಿಲ್ಲ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಗೆದ್ದಿರುವವರಲ್ಲಿ 9 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಜೊತೆಗೆ ಮಾಜಿ ಸಚಿವ ಉಮೇಶ್ ಕತ್ತಿ ಸೇರಿದಂತೆ ಮೂಲ ಬಿಜೆಪಿಯ ಮತ್ತೊಬ್ಬರಿಗೆ ಮಂತ್ರಿಸ್ಥಾನ ಸಿಗುವ ಸಾಧ್ಯೆತೆಗಳಿವೆ.
3 ಮಂತ್ರಿಸ್ಥಾನ ಖಾಲಿ ಇಟ್ಟುಕೊಳ್ಳಲು ತೀರ್ಮಾನ
ರಾಜೀನಾಮೆ ಕೊಟ್ಟಿದ್ದ 17 ಕ್ಷೇತ್ರಗಳ ಪೈಕಿ ಇನ್ನೂ 2 ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆ. ಹಾಗಾಗಿ 3 ಮಂತ್ರಿಸ್ಥಾನಗಳನ್ನು ತುಂಬದೆ ಖಾಲಿ ಇಟ್ಟುಕೊಳ್ಳಲು ಸಿಎಂ ಬಿ.ಎಸ್. ಉಡಿಯೂರಪ್ಪ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ದೆಹಲಿಗೆ ಯಡಿಯೂರಪ್ಪ; ಸಂಪುಟ ವಿಸ್ತರಣೆ ಲೆಕ್ಕಾಚಾರಗಳು
ಸಂಪುಟ ವಿಸ್ತರಣೆ ಬಳಿಕ ಭಿನ್ನಾಭಿಪ್ರಾಯ ತೀವ್ರವಾದಲ್ಲಿ ಅದನ್ನ ಶಮನ ಮಾಡಲು ಅನುಕೂಲವಾಗುವಂತೆ ಒಂದು ಸ್ಥಾನವನ್ನು ಖಾಲಿ ಇಟ್ಟುಕೊಳ್ಳಲು ತೀರ್ಮಾನ ಮಾಡಲಾಗಿದೆ. ಉಳಿದಿರುವ ಮೂರು ವರ್ಷಗಳ ಅವಧಿಯಲ್ಲಿ ಮತ್ತೊಮ್ಮೆ ಸಂಪುಟ ಪುನರ್ ರಚನೆ ಮಾಡುವ ಭರವಸೆಯನ್ನು ಯಡಿಯೂರಪ್ಪ ಆಪ್ತರಿಗೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಬೆಳೆಯುತ್ತಲೇ ಇದೆ ಮೂಲ ಬಿಜೆಪಿ ಆಕಾಂಕ್ಷಿಗಳ ಪಟ್ಟಿ
ಸಚಿವಸ್ಥಾನದ ಆಕಾಂಕ್ಷಿಗಳಾಗಿರುವವರ ಪಟ್ಟಿ ಬೆಳೆಯುತ್ತಲೇ ಇದೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೆ.ಜೆ. ಬೋಪಯ್ಯ ಅವರು ಸಿಎಂಗೂ ಮೊದಲೆ ದೆಹಲಿಗೆ ತೆರಳಿ ಲಾಭಿ ನಡೆಸಿದ್ದಾರೆ. ಇನ್ನು ಮಾಜಿ ಸಚಿವ ಸಿ.ಪಿ. ಯೋಗೀಶ್ವರ್ ಅವರೂ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಜೊತೆಗೆ ಮಾಜಿ ಸಚಿವ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಎ. ರಾಮದಾಸ್, ರಾಜುಗೌಡ ನಾಯಕ್, ಶಿವನಗೌಡ ನಾಯಕ್, ಎಸ್. ಅಂಗಾರ, ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ, ಎಸ್.ಎ. ರವೀಂದ್ರನಾಥ್, ರೇಣುಕಾಚಾರ್ಯ ಅವರು ಸಚಿವ ಸ್ಥಾನ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಹೈಕಮಾಂಡ್ ಬುಲಾವ್, ಯಡಿಯೂರಪ್ಪ ದಿಢೀರ್ ದೆಹಲಿ ಪ್ರವಾಸ
ಇದೆಲ್ಲವನ್ನು ಬಿಜೆಪಿ ಹೈಕಮಾಂಡ್ ಹೇಗೆ ನಿಭಾಯಿಸಲಿದೆ ಎಂಬುದು ನಾಳೆ ಶುಕ್ರವಾರ ಸಂಪುಟ ವಿಸ್ತರಣೆ ಬಳಿಕ ತಿಳಿಯಲಿದೆ.