ಹೊಸ ಪಕ್ಷ ಸ್ಥಾಪಿಸಿದ ಉಪೇಂದ್ರ, ಅನುಪಮಾ ಶೆಣೈ ಹೀಗೆ ಮಾಡಿದರೆ ಹೇಗೆ?
ಎರಡು ದಿನಗಳ ಅವಧಿಯಲ್ಲಿ ಕರ್ನಾಟಕದಲ್ಲಿ ಎರಡು ಪಕ್ಷಗಳ ಉದಯವಾಗಿದೆ. ಉಪೇಂದ್ರ ಅವರದ್ದು 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಯಾದರೆ ಅನುಪಮಾ ಶೆಣೈಯವರದ್ದು 'ಭಾರತೀಯ ಜನಶಕ್ತಿ ಕಾಂಗ್ರೆಸ್'. ಇಬ್ಬರದ್ದೂ ಒಂದೇ ಉದ್ದೇಶ ಅದು ಪ್ರಜಾಪ್ರಭುತ್ವದ ರಕ್ಷಣೆ ಮತ್ತು ಪಾರದರ್ಶಕ ಆಡಳಿತ.
ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾದೇಶಿಕ ಪಕ್ಷ ಭದ್ರವಾಗಿ ತಳವೂರಿರುವ ಕರ್ನಾಟಕದ ರಾಜಕಾರಣದಲ್ಲಿ ಉಪ್ಪಿ ಮತ್ತು ಅನುಪಮಾ ಅವರಿಂದ ರಾಜ್ಯ ರಾಜಕೀಯದಲ್ಲಿ ಏನು ಬದಲಾವಣೆ ತರಲು ಸಾಧ್ಯವಾದೀತು ಎಂದು ಅನುಮಾನ ವ್ಯಕ್ತಪಡಿಸಿದರೆ, ಅದಕ್ಕೆ ಎರಡೂ ಹೊಸ ಪಕ್ಷಗಳ ಸಂಸ್ಥಾಪಕರು ಮತ್ತು ಅವರ ಅನುಯಾಯಿಗಳು 'ಇವನ್ಯಾವನಯ್ಯಾ ಸ್ಟಾರ್ಟಿಂಗೇ ಅಪಶಕುನ ನುಡೀತವ್ನೇ' ಅನ್ಕೋಬಾರ್ದು.
ಅನುಪಮಾ ಶೆಣೈ ಅವರ ಹೊಸ ಪಕ್ಷ 'ಭಾರತೀಯ ಜನಶಕ್ತಿ ಕಾಂಗ್ರೆಸ್'
ಇದಕ್ಕೆ ಕಾರಣ ಇಲ್ಲದಿಲ್ಲ, ಈ ಹಿಂದೆ ಧಾಂ..ಧೂಂ.. ಅಂತ ಸದ್ದು ಮಾಡಿ ಹೊಸ ಪಕ್ಷ ಸ್ಥಾಪಿಸಿದ್ದ ಬಂಗಾರಪ್ಪನವರ ಕರ್ನಾಟಕ ಕಾಂಗ್ರೆಸ್ ಪಾರ್ಟಿ ಮತ್ತು ಯಡಿಯೂರಪ್ಪನವರ ಕರ್ನಾಟಕ ಜನತಾ ಪಾರ್ಟಿ, ಸ್ಥಾಪನೆಗೊಂಡಷ್ಟೇ ವೇಗದಲ್ಲೇ ಮಠ ಸೇರಿಕೊಂಡಿತ್ತು. ಬಂಗಾರಪ್ಪ ಮತ್ತು ಬಿಎಸ್ವೈ ಅವರಂತಹ ರಾಜಕೀಯ ಪಂಟರುಗಳೇ ರಾಜ್ಯದ ಜನತೆಯ ನಾಡಿಮಿಡಿತ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿ, ಎಲ್ಲಿಂದ ಬಂದರೋ ಮತ್ತೆ ಅಲ್ಲಿಗೆ ವಾಪಸ್ ಹೋಗಿದ್ದರು.
ಎನ್ ಟಿ ರಾಮರಾವ್, ಎಂ ಜಿ ರಾಮಚಂದ್ರನ್, ಜಯಲಲಿತಾ ಮುಂತಾದ ಬಣ್ಣದಲೋಕದವರು ರಾಜಕೀಯಕ್ಕೆ ಬಂದು, ಸಿಎಂ ಆಗಲಿಲ್ಲವೇ ಎನ್ನುವ ವಾದ ಏನಾದರೂ ಇದ್ದರೆ ಪ್ರಸ್ತುತ ರಾಜಕೀಯ ಮೇಲಾಟದಲ್ಲಿ ಇಂತಹ ಘಟನೆಗಳು ಮರುಕಳಿಸಲು ಸಾಧ್ಯನಾ ಎನ್ನುವುದೇ ಇಲ್ಲಿ ಪ್ರಶ್ನೆ.
ಪಾರದರ್ಶಕ ಆಡಳಿತ ನೀಡುವುದೇ ಕೆಪಿಜೆಪಿ ಸಿದ್ಧಾಂತ
ಡಾ. ರಾಜ್ ಅವರಂಥಹ ಮೇರು ವ್ಯಕ್ತಿತ್ವವೇ ರಾಜಕೀಯದ ಸಹವಾಸವೇ ಬೇಡವೆಂದು ದೂರವಿದ್ದಾಗ, ಯಾವುದಾದರೂ ಒಂದು ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡು ಸ್ಪರ್ಧಿಸಿದರೆ ಓಕೆ, ಅದು ಬಿಟ್ಟು ಹೊಸ ಪಕ್ಷ ಸ್ಥಾಪಿಸಿ ಬದಲಾವಣೆ ತರುತ್ತೇವೆ ಎನ್ನುವ ಸಾಹಸ ಯಾಕೆ ಎನ್ನುವ ಪ್ರಶ್ನೆ ಪ್ರಜ್ಞಾವಂತರ ಮಧ್ಯದಿಂದಲೇ ಕೇಳಿಬರುತ್ತಿದೆ. ಮುಂದೆ ಓದಿ
ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನು ಬೇಕಾದರೂ ಸಾಧ್ಯ ಎನ್ನುವುದು ಹೌದಾದರೂ, ಹೊಸದಾಗಿ ಅಸ್ತಿತ್ವಕ್ಕೆ ಬಂದ ಎರಡೂ ಪಕ್ಷಗಳು ಮೊದಲು ಬೇರು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡುವುದು ಉತ್ತಮ. ಅಂದರೆ ನೇರವಾಗಿ ಅಸೆಂಬ್ಲಿ ಚುನಾವಣೆಗೆ ಧುಮುಕುವ ಮುನ್ನ, ತಾಲೂಕು/ಜಿಲ್ಲಾ ಪಂಚಾಯತಿಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಿ, ನಂತರ ಪ್ರಮುಖ ಆಖಾಡಕ್ಕೆ ಇಳಿದರೆ ಮತದಾರರಿಗೆ ಇನ್ನೂ ಹತ್ತಿರವಾಗಬಹುದು, ಕ್ಷೇತ್ರದ ಮತ್ತು ಜನರ ಸಮಸ್ಯೆ ಏನು ಎನ್ನುವುದನ್ನೂ ಅರ್ಥ ಮಾಡಿಕೊಳ್ಳಬಹುದು.
ಜನಾನುರಾಗಿಯಾಗಿ ಕೆಲಸ ಮಾಡುವ ಜನಪ್ರತಿನಿಧಿಗಳು
ರಾಜ್ಯದ ಎಲ್ಲಾ 225 ಶಾಸಕರು ಪಾರದರ್ಶಕವಾಗಿ ಕೆಲಸ ಮಾಡುತ್ತಿಲ್ಲ ಎನ್ನಲು ಸಾಧ್ಯವೇ? ಖಂಡಿತವಿಲ್ಲ. ಜನಾನುರಾಗಿಯಾಗಿ ಕೆಲಸ ಮಾಡುವ ಜನಪ್ರತಿನಿಧಿಗಳು ನಮ್ಮ ನಡುವೆ ಇನ್ನೂ ಇದ್ದಾರೆ. ಪ್ರತೀ ಅಸೆಂಬ್ಲಿ ಕ್ಷೇತ್ರದಲ್ಲಿ ನಿಮ್ಮ ತಂಡವನ್ನು ಕಟ್ಟಿ ಉತ್ತಮವಾಗಿ ಕೆಲಸ ಮಾಡುವ ಶಾಸಕರ ಪಟ್ಟಿ ಮಾಡುವ ಕೆಲಸ ನಿಮ್ಮ ಹೊಸ ಪಕ್ಷಗಳಿಂದ ಆಗಬೇಕು.
ನಿಮ್ಮ ಪಕ್ಷದ ಉದ್ದೇಶವನ್ನೇ ಪ್ರಶ್ನಿಸುವಂತಾಗಬಾರದು
ನಿಮ್ಮ ಕಾರ್ಯಕರ್ತರು ಕೊಡುವ ಮಾಹಿತಿಯ ಆಧಾರದ ಮೇಲೆ, ಆಯಾಯ ಕ್ಷೇತ್ರಗಳಲ್ಲಿ ನಿಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಬೇಕೋ ಬೇಡವೋ ಎನ್ನುವ ನಿರ್ಧಾರಕ್ಕೆ ಬಂದರೆ ಒಳ್ಳೆಯದು. ಉತ್ತಮವಾಗಿ ಕೆಲಸ ನಿರ್ವಹಿಸುತ್ತಿರುವ ಶಾಸಕ ಕಣದಲ್ಲಿದ್ದು, ನೀವೂ ನಿಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ನಿಮ್ಮ ಪಕ್ಷದ ಅಭ್ಯರ್ಥಿಗಳಿಂದ ಮತವಿಭಜನೆಯಾಗಿ, ನೀವೂ ಗೆಲ್ಲದೆ, ಉತ್ತಮ ಅಭ್ಯರ್ಥಿಯೂ ಸೋತರೆ, ನಿಮ್ಮ ಪಕ್ಷದ ಉದ್ದೇಶವನ್ನೇ ಪ್ರಶ್ನಿಸುವಂತಾಗಬಾರದು.
ಹೊಂದಾಣಿಕೆ ಮಾಡುವ ಕೆಲಸ ಮಾಡಿದರೆ, ಪ್ರಜಾಪ್ರಭುತ್ವದ ರಕ್ಷಣೆ
ಚುನಾವಣೆಯ ವೇಳೆ ಮತದಾರರ ಮುಂದೆ ಬಂದು, ಗೆದ್ದಮೇಲೆ ಕ್ಷೇತ್ರದ ಕಡೆ ತಲೆಹಾಕದ ಎಷ್ಟೋ ಶಾಸಕರಿದ್ದಾರೆ. ಇಂತಹ ಶಾಸಕರನ್ನು ಪಟ್ಟಿಮಾಡಿ ಅವರ ಮುಂದೆ ನಿಮ್ಮ ಅಭ್ಯರ್ಥಿಯು ಕಣಕ್ಕಿಳಿಸುವುದೋ ಅಥವಾ ಅವರ ನೇರ ಪ್ರತಿಸ್ಪರ್ಧಿಯ ಜೊತೆ (ಯಾವುದೇ ಪಕ್ಷವಿರಲಿ) ಹೊಂದಾಣಿಕೆ ಮಾಡುವ ಕೆಲಸ ಮಾಡಿದರೆ, ಪ್ರಜಾಪ್ರಭುತ್ವದ ರಕ್ಷಣೆ ಎನ್ನುವ ನಿಮ್ಮ ಉದ್ದೇಶವೇನಿದೆಯೋ ಅದಕ್ಕೆ ಸಾರ್ಥಕತೆ ಬರುತ್ತದೆ.
ಯಾವ ಪಕ್ಷದ ಕಡೆ ನಿಮಗೆ ಸಾಫ್ಟ್ ಕಾರ್ನರ್
ಒಂದು ವೇಳೆ, ಉಪೇಂದ್ರ ಮತ್ತು ಅನುಪಮಾ ಶೆಣೈಯವರ ಹೊಸ ಪಕ್ಷ ಎಲ್ಲಾ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಅಧಿಕಾರ ರಚಿಸಲು 'ಕಿಂಗ್ ಮೇಕರ್' ಹಂತಕ್ಕೆ ಬಂದು ನಿಂತರೆ, ಮೂರು ಪಕ್ಷಗಳಲ್ಲಿ ನಿಮ್ಮ ಪಕ್ಷಗಳ ಒಲವು ಯಾವ ಪಕ್ಷದತ್ತ? ಯಾವ ಪಕ್ಷದ ಕಡೆ ನಿಮಗೆ ಸಾಫ್ಟ್ ಕಾರ್ನರ್ ಇದೆ ಎನ್ನುವುದನ್ನು ಇದೇ ಸಂದರ್ಭದಲ್ಲಿ ಸ್ಪಷ್ಟ ಪಡಿಸಿದರೆ ಉತ್ತಮ.
ಬೇರೆ ಪಕ್ಷದ ರೀತಿಯಲ್ಲಿ ಆಗದಿರಲಿ
ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷದಂತೆ, ಎಷ್ಟೋ ಪಕ್ಷಗಳು ಅಸ್ತಿತ್ವಕ್ಕೆ ಬಂದಿವೆ, ಬಹುತೇಕ ಪಕ್ಷಗಳು ಇನ್ನೂ ಕಣ್ಣು ಬಿಡುವುದಕ್ಕೆ ಒದ್ದಾಡುತ್ತಿರುವ ಹೊತ್ತಿನಲ್ಲಿ ಉಪೇಂದ್ರ ಮತ್ತು ಮಹಿಳೆಯೊಬ್ಬರು ಒಂದು ಪಕ್ಷವನ್ನು ಸ್ಥಾಪಿಸಿದರು ಎನ್ನುವ ಗೌರವದೊಂದಿಗೆ ಅನುಪಮಾ ಶೆಣೈಯವರ ಪಕ್ಷಗಳೂ ಅದೇ ಸಾಲಿನಲ್ಲಿ ಸೇರದಿರಲಿ.