ಪ್ರಮಾಣ ವಚನಕ್ಕೆ ಕಾರ್ಯಕ್ರಮಕ್ಕೆ ಸಿದ್ಧತೆ: ಯಾರಿಗೆ ಸಚಿವ ಸ್ಥಾನ?
ಬೆಂಗಳೂರು, ಫೆಬ್ರವರಿ 05: ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜಭವನದಲ್ಲಿ ಭರದ ಸಿದ್ಧತೆ ಆರಂಭವಾಗಿದೆ. 24 ಗಂಟೆ ಒಳಗೆ ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಸಚಿವರ ಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ.
ರಾಜಭವನದಲ್ಲಿ ಸಕಲ ಸಿದ್ಧತೆ ಭರದಿಂದ ಸಾಗಿದ್ದು, ನಾಳೆ ಪ್ರಮಾಣ ವಚನ ಸ್ವೀಕರಿಸಲಿರುವ ಆಯ್ದ ಶಾಸಕರಿಗೆ ಯಡಿಯೂರಪ್ಪ ಅವರೇ ಖುದ್ದಾಗಿ ಕರೆ ಮಾಡಿ ಪ್ರಮಾಣ ವಚನಕ್ಕೆ ಆಹ್ವಾನಿಸಿದ್ದಾರೆ. ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಸಹ ಬರೆದುಕೊಂಡಿದ್ದಾರೆ.
ಆರಿದ್ರಾ ಲಗ್ನದಲ್ಲಿ ಸಂಪುಟ ವಿಸ್ತರಣೆ, ಯಾರಿಗೆ ಯಾವ ಖಾತೆ?
ಮೂಲಗಳ ಪ್ರಕಾರ ಹನ್ನೆರಡು ಮಂದಿ ಮಾತ್ರವೇ ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹತ್ತು ಮಂದಿಯಲ್ಲಿ ಕೆಲವರಿಗೆ ಮಾಜಿ ಅನರ್ಹರು ಹಾಗೂ ಮೂಲ ಬಿಜೆಪಿಯ ಕೆಲವರು, ಚುನಾವಣೆ ಸೋತ ಒಬ್ಬಿಬ್ಬರು ಸೇರಿದ್ದಾರೆ.
ಬಿ.ಸಿ.ಪಾಟೀಲ್ ಟ್ವಿಟ್ಟರ್ ಪೋಸ್ಟ್
ಯಡಿಯೂರಪ್ಪ ಅವರು ತಮಗೆ ಕರೆ ಮಾಡಿ ಪ್ರಮಾಣ ವಚನಕ್ಕೆ ಸಿದ್ಧರಾಗಿರುವಂತೆ ಹೇಳಿರುವ ಬಗ್ಗೆ ಬಿ.ಸಿ.ಪಾಟೀಲ್ ಅವರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದಾರೆ. ಇನ್ನು ಎಸ್.ಟಿ.ಸೋಮಶೇಖರ್, ಗೋಪಾಲಯ್ಯ ಅವರುಗಳು ಭರ್ಜರಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಸಚಿವ ಸ್ಥಾನ ಪಕ್ಕಾ ಆಗಿರುವವರ ಪಟ್ಟಿ
ರಮೇಶ್ ಜಾರಕಿಹೊಳಿ, ಗೋಪಾಲಯ್ಯ, ಸೋಮಶೇಖರ್, ನಾರಾಯಣಗೌಡ, ಶಿವರಾಂ ಹೆಬ್ಬಾರ್, ಆನಂದ್ ಸಿಂಗ್, ಕೆ.ಸುಧಾಕರ್, ಬೈರತಿ ಬಸವರಾಜು, ಬಿ.ಸಿ.ಪಾಟೀಲ್, ಮಹೇಶ್ ಕುಮಟಳ್ಳಿ ಅವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ. ಈ ಪಟ್ಟಿಯಲ್ಲಿ ಅರವಿಂದ ಲಿಂಬಾವಳಿ ಹಾಗೂ ಯೋಗೇಶ್ವರ್ ಹೆಸರೂ ಸಹ ಇದೆ.
ಹಲವು ಹಿರಿಯರ ಹೆಸರು ಪಟ್ಟಿಯಲ್ಲಿಲ್ಲ
ಶ್ರೀಮಂತ ಪಾಟೀಲ್, ಆರ್.ಶಂಕರ್ ಸೇರಿದಂತೆ ಸೋತ ಅನರ್ಹರ ಹೆಸರು ಪಟ್ಟಿಯಲ್ಲಿ ಇಲ್ಲವೆನ್ನಲಾಗುತ್ತಿದೆ. ಜೊತೆಗೆ ಹಿರಿಯರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಉಮೇಶ್ ಕತ್ತಿ, ಮುರಗೇಶ ನಿರಾಣಿ, ಎಸ್.ಅಂಗಾರ ಸೇರಿ ಹಲವರಿಗೆ ನಿರಾಸೆ ಕಾದಿದೆ.
ನಾಳೆ ಬೆಳಿಗ್ಗೆ ನೂತನ ಸಚಿವರ ಪ್ರಮಾಣ ವಚನ
ನಾಳೆ ಬೆಳಿಗ್ಗೆ ಹೊಸ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ರಾಜಭವನದಲ್ಲಿ ನಡೆಯಲಿದ್ದು, ಎಲ್ಲ ಶಾಸಕರು ಹಾಜರಿರಬೇಕೆಂದು ಯಡಿಯೂರಪ್ಪ ಸೂಚಿಸಿದ್ದಾರೆ. ಆದರೆ ಅತೃಪ್ತರು ಆಗಮಿಸುತ್ತಾರೆಯೋ ಇಲ್ಲವೋ ಎಂಬ ಅನುಮಾನ ಇದೆ.