ಬೂಟಾಟಿಕೆಗೆ ಹೊಸ ಅರ್ಥ ಸಿಕ್ಕಿದೆ: ಸಿ.ಟಿ. ರವಿ ವ್ಯಂಗ್ಯ
ಬೆಂಗಳೂರು, ನವೆಂಬರ್ 25: ಮಹಾರಾಷ್ಟ್ರದಲ್ಲಿ ಎನ್ಸಿಪಿ ಬೆಂಬಲದೊಂದಿಗೆ ದೇವೇಂದ್ರ ಫಡ್ನವಿಸ್ ಎರಡನೆಯ ಅವಧಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದನ್ನು ರಾಜ್ಯದ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಜತೆಗೆ ಬಿಜೆಪಿ ನಾಯಕರು ಚುನಾವಣೆಯ ಸಮಯದಲ್ಲಿ ವಿರೋಧಿಸಿಕೊಂಡು ಬಂದಿದ್ದ ಎನ್ಸಿಪಿ ಜತೆಗೆ ಕೈಜೋಡಿಸಿದ ನಡೆಯನ್ನೂ ಸಮರ್ಥಿಸಿಕೊಂಡಿದ್ದಾರೆ.
ಬಿಜೆಪಿ-ಎನ್ಸಿಪಿ ಸರ್ಕಾರವನ್ನು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಾಂಗ್ರೆಸ್ ಖಂಡಿಸಿತ್ತು. ಇದನ್ನು ಸಚಿವ ಸಿ.ಟಿ. ರವಿ ವ್ಯಂಗ್ಯವಾಡಿದ್ದಾರೆ.
ಅಧಿಕಾರದ ಆಸೆಗೆ ಬಿದ್ದು ಏಕಾಂಗಿಯಾದರೇ ಅಜಿತ್ ಪವಾರ್?
'ಶಿವಸೇನಾ ಮತ್ತು ಎನ್ಸಿಪಿ ಜತೆ ಕಾಂಗ್ರೆಸ್ ಕೈಜೋಡಿಸಿದರೆ ಅದು ಪ್ರಜಾಪ್ರಭುತ್ವದ ಸಂಭ್ರಮಾಚರಣೆ. ಆದರೆ ಬಿಜೆಪಿಯು ಎನ್ಸಿಪಿ ಜತೆ ಸೇರಿ ಸರ್ಕಾರ ರಚಿಸಿದರೆ ಅದು ಪ್ರಜಾಪ್ರಭುತ್ವದ ಕಗ್ಗೊಲೆ. ಬೂಟಾಟಿಕೆ ಎನ್ನುವುದು ಹೊಸ ಅರ್ಥ ಪಡೆದುಕೊಂಡಿದೆ' ಎಂದು ಸಿ.ಟಿ. ರವಿ ಟ್ವಿಟ್ಟರ್ನಲ್ಲಿ ವ್ಯಂಗ್ಯವಾಡಿದ್ದಾರೆ.
'ವಿಸ್ವಾಸಘಾತುಕತನ ಮತ್ತು ವಂಚನೆ ಬಗ್ಗೆ ಯಾರು ಮಾತನಾಡುತ್ತಿದ್ದಾರೆ ನೋಡಿ. ಇಂದು ಬೆಳಿಗ್ಗೆವರೆಗೂ ಸರ್ಕಾರ ರಚಿಸುವ ಆಸೆ ಹೊಂದಿದ್ದ ಕಾಂಗ್ರೆಸ್, ಶಿವಸೇನಾಗೆ ಜಾತ್ಯತೀತ ಮತ್ತು ಎನ್ಸಿಪಿ ಪ್ರಾಮಾಣಿಕತೆಯ ಪ್ರಮಾಣಪತ್ರಗಳನ್ನು ನೀಡುತ್ತಿತ್ತು. ಇದಕ್ಕಿದ್ದಂತೆ ಎನ್ಸಿಪಿ ಭ್ರಷ್ಟಾಚಾರಿಯಾಗಿಬಿಟ್ಟಿತು ಮತ್ತು ಕಾಂಗ್ರೆಸ್ ತಾನು ಪವಿತ್ರ ಗೋವು ಎಂಬಂತೆ ನಟಿಸುತ್ತಿದೆ' ಎಂದು ಬಿಜೆಪಿ ರಾಜ್ಯ ಘಟಕ ಟ್ವೀಟ್ ಮಾಡಿತ್ತು.