ಲಿಂಗಾಯತ ಧರ್ಮದ ಹೋರಾಟಕ್ಕೆ ಹೊಸ ಶಕ್ತಿ 'ಬಸವ ಸೇನೆ'
ಬೆಂಗಳೂರು, ಸೆಪ್ಟೆಂಬರ್ 25: ಸಚಿವ ವಿನಯ್ ಕುಲಕರ್ಣಿ ಅವರನ್ನು ರಾಷ್ಟ್ರೀಯ ಬಸವ ಸೇನೆಯ ರಾಷ್ಟ್ರಾಧ್ಯಕ್ಷರನ್ನಾಗಿ ಭಾನುವಾರ ಆಯ್ಕೆ ಮಾಡಲಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂದು ಆಗ್ರಹಿಸಲು ಹೊಸದಾಗಿ ರಚನೆಯಾದ ಸಂಘಟನೆಯಿದು.
ಇನ್ನು ಭಾನುವಾರ ಕಲಬುರ್ಗಿಯಲ್ಲಿ ನಡೆದ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದ ಆಯೋಜಕರು, ಮೂರು ಲಕ್ಷ ಮಂದಿ ಸೇರಿದ್ದರು. ಹಲವು ಮಠಗಳು ಪೀಠಾಧ್ಯಕ್ಷರು, ರಾಜ್ಯದ ಹಿರಿಯ ಸಚಿವರು, ಅಧಿಕಾರಿಗಳು, ರಾಜ್ಯದ ಹಾಗೂ ಹೊರ ರಾಜ್ಯದ ನಾನಾ ಭಾಗಗಳಿಂದ ಬಂದಿದ್ದ ಜನರು ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.
ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ, ಕಲಬುರಗಿಯಲ್ಲಿ ಬೃಹತ್ ಸಮಾವೇಶ
ಈ ಹೋರಾಟದ ಭಾಗವಾಗಿ ವಿನಯ್ ಕುಲಕರ್ಣಿಯವರು ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ನಿವೃತ್ತ ಅಧಿಕಾರಿ ಹಾಗೂ ಲಿಂಗಾಯತ ಸಮನ್ವಯ ಸಮಿತಿಯ ಪ್ರಮುಖರಾದ ಎಸ್ಸೆಂ ಜಾಮದಾರ್ ಮಾತನಾಡಿ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟವು ಇತರ ನಗರಗಳಲ್ಲೂ ಬೆಳೆಯಬೇಕು ಎಂದು ಹೇಳಿದ್ದಾರೆ.
ರಾಜ್ಯ ಸರಕಾರದ 'ಲಿಂಗಾಯತ ರಾಜಕೀಯ'ಕ್ಕೆ ಭಾರೀ ಹಿನ್ನಡೆ
ಲಿಂಗಾಯತ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಬೇಕು ಹಾಗೂ ವೀರಶೈವದಿಂದ ಲಿಂಗಾಯತವನ್ನು ಪ್ರತ್ಯೇಕ ಮಾಡಬೇಕು ಎಂಬ ಬೇಡಿಕೆ ಶತಮಾನಗಳಷ್ಟು ಹಳೆಯದು. ಇನ್ನು ಕಳೆದ ನಾಲ್ಕು ದಶಗಳಿಂದ ಬೇಡಿಕೆ ಮತ್ತೂ ತೀವ್ರವಾಗಿದೆ. ಈಗ ಮತ್ತೆ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕಾವು ಪಡೆದುಕೊಂಡಿದೆ
ಮುಂಚೂಣಿಯಲ್ಲಿ ಎಂ.ಬಿ.ಪಾಟೀಲ
ಹಾಗೆ ನೋಡಿದರೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಈ ವಿಚಾರದಲ್ಲಿ ಅಧಿಕೃತವಾಗಿ ತಲೆ ಹಾಕಿಲ್ಲ. ಆದರೆ ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಎಂ.ಬಿ.ಪಾಟೀಲರು ಮುಂಚೂಣಿಯಲ್ಲಿದ್ದಾರೆ. ಬಿಜೆಪಿಯನ್ನು ಗುರಿ ಮಾಡಿಕೊಂಡು ದಾಳಿ ನಡೆಸುತ್ತಿದ್ದಾರೆ.
ವೀರಶೈವರೂ ಪ್ರಯತ್ನಿಸಲಿ
"ವೀರಶೈವ ಪ್ರತ್ಯೇಕ ಧರ್ಮ ಆಗಬೇಕು ಎಂದು ಅವರು ಪ್ರಯತ್ನ ಮಾಡುವುದಾದರೆ ನಮ್ಮದೇನೂ ಸಮಸ್ಯೆಯಿಲ್ಲ. ಅವರು ಪ್ರಯತ್ನಿಸಲಿ. ಆದರೆ ಲಿಂಗಾಯತದ ಜತೆಗೆ ಸೇರಿಸಿಕೊಂಡು ವೀರಶೈವ ಲಿಂಗಾಯತ ಎಂದು ಘೋಷಣೆ ಮಾಡಲು ಬೇಡಿಕೆಯಿಟ್ಟಿದ್ದಾರೆ. ಅದಕ್ಕೆ ನಾವು ವಿರೋಧಿಸುತ್ತಿದ್ದೇವೆ. ಅವರು ಲಿಂಗಾಯತವನ್ನು ಸೇರಿಸಿಕೊಳ್ಳಬಾರದು" ಎಂದು ಪಾಟೀಲರು ಮಾಧ್ಯಮವೊಂದಕ್ಕೆ ಭಾನುವಾರ ತಿಳಿಸಿದ್ದಾರೆ.
ಚುನಾವಣೆಗೆ ಮುಂಚೆ ಬೇಡಿಕೆ ಈಡೇರುತ್ತಾ?
ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ ಹದಿನೇಳರಷ್ಟು ಲಿಂಗಾಯತರಿದ್ದಾರೆ ಎಂಬುದು ಒಂದು ಲೆಕ್ಕಾಚಾರ. ಮುಂದಿನ ವರ್ಷದ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಲಿಂಗಾಯತ ಪ್ರತ್ಯೇಕ ಧರ್ಮ ಬೇಡಿಕೆ ಈಡೇರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಯಾವ ಜಾತಿಯ ಬೆಂಬಲ ಇದೆ ಎಂಬ ನಂಬಿಕೆ ಇದೆಯೋ ಅದನ್ನು ಕುಟ್ಟಿ ಪುಡಿ ಮಾಡುವ ಉದ್ದೇಶ ಕೂಡ ಇದರಲ್ಲಿದೆ.
ಮೌನವಾಗಿದ್ದು ಲಿಂಗಾಯತ ಸ್ವತಂತ್ರ ಧರ್ಮದ ಯುದ್ಧ ಗೆದ್ದರೆ ಬಿಎಸ್ ವೈ?
ಸಮುದಾಯದ ಒಡಕು ಬೇಡ
ಯಡಿಯೂರಪ್ಪ ಅವರಿಗೆ ಲಿಂಗಾಯತ ಸಮುದಾಯದ ಒಡಕು ಬೇಡ. ಏಕೆಂದರೆ ಈಗಾಗಲೇ ಇರುವ ಲಿಂಗಾಯತರ ಬೆಂಬಲದ ಜತೆಗೆ ಒಕ್ಕಲಿಗರು ಮತ್ತು ಹಿಂದುಳಿದ ವರ್ಗಗಳ ಬೆಂಬಲದ ಮೇಲೆ ಬಿಜೆಪಿ ಕಣ್ಣಿರಿಸಿದೆ.
ಇತರ ನಗರಗಳಲ್ಳೂ ಹೋರಾಟ
ವಿಜಯಪುರ, ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ಕೂಡ ಹೋರಾಟ ನಡೆಸಲಾಗುವುದು. ಈ ಹೋರಾಟವನ್ನು ದೆಹಲಿವರೆಗೆ ಕೊಂಡೊಯ್ಯುವ ಬಗ್ಗೆ ಸಂಘಟನೆ ಇನ್ನೂ ಚಿಂತನೆ ನಡೆಸಿಲ್ಲ ಎಂದ ಜಾಮದಾರ್ ಹೇಳಿದ್ದಾರೆ.