ಗೃಹ ಸಚಿವರಾಗಿ ಬಸವರಾಜ ಬೊಮ್ಮಾಯಿ ಮಾಡಿದ ಮಹಾ ತಪ್ಪುಗಳು!
ಬೆಂಗಳೂರು, ಜು. 28: ಐಪಿಎಸ್ ಅಧಿಕಾರಿಗಳಿಗೆ ಒಂದು ದಿನವೂ ತಡವಾಗದಂತೆ ಬಡ್ತಿ ಮತ್ತು ಪೋಸ್ಟಿಂಗ್. ಅದೇ ಕರ್ನಾಟಕ ಪೊಲೀಸ್ ಸೇವೆಯಿಂದ ಆಯ್ಕೆಯಾದ ಪೊಲೀಸ್ ಅಧಿಕಾರಿಗಳು ಮೂರು ವರ್ಷದಿಂದ ಪರದಾಡಿದರೂ ಅವರಿಗೆ ಐಪಿಎಸ್ ದಯೆ ಪಾಲಿಸಲು ಬಸವರಾಜ್ ಬೊಮ್ಮಾಯಿ ಮನಸು ಮಾಡಲೇ ಇಲ್ಲ. ವರ್ಷಕ್ಕೆ ಎರಡು ಅಥವಾ ಮೂರು ವರ್ಗಾವಣೆ ಆದೇಶ ಹೊರ ಬೀಳುತ್ತಿತ್ತು. ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾದ ಬಳಿಕ ತಿಂಗಳಿಗೊಳಿಂದು ವರ್ಗಾವಣೆ ಆದೇಶ ಕಡ್ಡಾಯ ಹೊರ ಬರುತ್ತಿತ್ತು.
ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಎಂಬುದೇ ಕಣ್ಮರೆಯಾಗಿ "ಪೊಲೀಸ್ ಪೋಸ್ಟಿಂಗ್ ಬುಕ್ಕಿಂಗ್ ಎಂಬ ಆರೋಪಗಳು ಕೇಳಿ ಬಂದವು. ಹಿರಿಯ ಐಪಿಎಸ್ ಅಧಿಕಾರಿಗಳು ಮಾತಿನಂತೆ ಕುಣಿದ ಬಸವರಾಜ ಬೊಮ್ಮಾಯಿ ವ್ಯವಸ್ಥೆಯನ್ನು ಬದಲಿಸುವುದಾಗಲೀ ಗೃಹ ಇಲಾಖೆಯಲ್ಲಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡಲೇ ಇಲ್ಲ. ಈ ಕುರಿತ ಸಮಗ್ರ ವರದಿ ಇಲ್ಲಿದೆ.
ಕನ್ನಡಿಗ ಅಧಿಕಾರಿಗಳಿಗೆ ಸ್ಪಂದನೆ ಸಿಗಲಿಲ್ಲ: ಒಬ್ಬ ಗೃಹ ಸಚಿವರಾಗಿ ಮೊದಲು ಪೊಲೀಸ್ ಇಲಾಖೆಯ ಮೂಲ ಸಮಸ್ಯೆಯನ್ನು ಕೆಳಹಂತದ ಅಧಿಕಾರಿಗಳಿಂದ ತಿಳಿಯಬೇಕು. ಮೇಲಾಧಿಕಾರಿಗಳ ಮೇಲೆ ಹಿಡಿತ ಸಾಧಿಸಿ ದಕ್ಷ ಆಡಳಿತ ನೀಡಬೇಕು. ಬಸವರಾಜ ಬೊಮ್ಮಾಯಿ ಗೃಹ ಸಚಿವರಾದ ಬಳಿಕ ಪಿಎಸ್ಐ, ಪೊಲೀಸ್ ಇನ್ಸ್ಪೆಕ್ಟರ್, ಡಿವೈಎಸ್ಪಿ ದರ್ಜೆಯ ಪೊಲೀಸ್ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಂದು ಭೇಟಿಗೆ ಅವಕಾಶ ಮಾಡಿಕೊಡುವಂತೆ ಮನವಿ ನೀಡಲಾಗಿತ್ತು. ವಿಪರ್ಯಾಸವೆಂದರೆ ಎರಡು ವರ್ಷವಾದರೂ ಕರ್ನಾಟಕ ಸೇವೆಯ ಅಧಿಕಾರಿಗಳ ಒಂದು ಭೇಟಿಗೆ ಅವಕಾಶ ನೀಡಿಲ್ಲ. ಗೃಹ ಇಲಾಖೆಯ ಸಮಸ್ಯೆಗಳ ಬಗ್ಗೆ ಕಿವಿಕೊಟ್ಟು ಕೇಳಲೇ ಇಲ್ಲ. ಪೊಲೀಸ್ ಅಧಿಕಾರಿಗಳ ಸಂಘದಿಂದಲೇ ಮನವಿ ಮಾಡಿದರೂ ಅದರ ಪರಿಹಾರಕ್ಕೆ ಯತ್ನಿಸಲೇ ಇಲ್ಲ. ಹೀಗಾಗಿ ಸಮಸ್ಯೆ ಹೇಳಿಕೊಳ್ಳುವುದನ್ನೇ ಬಿಟ್ಟು ಬಿಟ್ಟೆವು ಎಂದು ಕರ್ನಾಟಕ ಪೊಲೀಸ್ ಸೇವೆಯ ಅಧಿಕಾರಿ ಹಾಲಿ ನೂತನ ಸಿಎಂ ಅವರ ಆಡಳಿತ ವೈಖರಿಯನ್ನು ವಿವರಿಸಿದರು. ಮುಂದೆ ಓದಿ...
ಮೂರು ವರ್ಷದಿಂದ ಐಪಿಎಸ್ ಗಾಗಿ ಪರದಾಟ
ಕರ್ನಾಟಕ ಪೊಲೀಸ್ ಸೇವೆ ಮೂಲಕ ಆಯ್ಕೆಯಾಗಿರುವ 28 ಪೊಲೀಸ್ ಅಧಿಕಾರಿಗಲು ಸೇವಾವಧಿ ಪೂರ್ಣಗೊಳಿಸಿ ಐಪಿಎಸ್ ಪಡೆಯಲು ಅರ್ಹತೆ ಪಡೆದಿದ್ದಾರೆ. ಅರ್ಹತೆ ಪಡೆದು ನಾಲ್ಕು ವರ್ಷವಾದರೂ ಡಿವೈಎಸ್ಪಿ ಹುದ್ದೆಯಿಂದಲೂ ನಾಡಿನ ಸೇವೆ ಮಾಡಿ ಇದೀಗ ಐಪಿಎಸ್ಗೆ ಬಡ್ತಿ ಹೊಂದಲು ಅರ್ಹತೆ ಪಡೆದಿದ್ದಾರೆ. ಸತತ ನಾಲ್ಕು ವರ್ಷದಿಂದ 28 ಕೆಎಸ್ಪಿಎಸ್ ಅಧಿಕಾರಿಗಳು ಪರದಾಡುತ್ತಲೇ ಇದ್ದಾರೆ. ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರಿಗೆ ಈ ಸಮಸ್ಯೆ ಬಗ್ಗೆ ಸ್ಪಷ್ಟ ಮಾಹಿತಿಯಿತ್ತು. ಕೇಂದ್ರ ಲೋಕ ಸೇವಾ ಆಯೋಗಕ್ಕೆ ಗೃಹ ಇಲಾಖೆಯಿಂದ ಶಿಫಾರಸು ಮಾಡಬೇಕಿತ್ತು. ಎರಡು ವರ್ಷಾವಾದರೂ ಹೋಗಲು ಆಸಕ್ತಿ ತೋರಲಿಲ್ಲ. ಯಾರಿಗೂ ಐಪಿಎಸ್ ಬಿಲ್ಲೆ ಕೂಡ ಬಂದಿಲ್ಲ. ಅದೇ ಕೇಂದ್ರ ಲೋಕ ಸೇವಾ ಆಯೋಗದಿಂದ ಐಪಿಎಸ್ ಸೇವೆ ಮೂಲಕ ರಾಜ್ಯಕ್ಕೆ ನೇಮಕವಾಗಿರುವ ಅಧಿಕಾರಿಗಳಿಗೆ ಇವತ್ತು ಬಡ್ತಿಗೆ ಅರ್ಹತೆ ಪಡೆದರೆ ಮರುದಿನವೇ ಬಡ್ತಿ ಜತೆಗೆ ವರ್ಗಾವಣೆ ಆದೇಶ ಹೊರಡಿಸಿದರು. ಒಂದು ಸಮಸ್ಯೆ ಅರ್ಥ ಮಾಡಿಕೊಂಡು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಸಮರ್ಥವಾದ ತೀರ್ಮಾನಗಳೇ ಬಸವರಾಜ ಬೊಮ್ಮಾಯಿ ತೆಗೆದುಕೊಂಡ ಉದಾಹರಣೆಗಳೇ ಇಲ್ಲ.
ದಕ್ಷ ಅಧಿಕಾರಿಗಳ ಮೂಲೆ ಗುಂಪು
ರಾಜ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿಗಳನ್ನು ಹುಡುಕಿ ಅವರಿಗೆ ಮಹತ್ವದ ಸ್ಥಾನ ಕೊಡುವ ಮೂಲಕ ಭ್ರಷ್ಟಾಚಾರ ರಹಿತ ಸೇವೆಗೆ ಅನುವು ಮಾಡಿಕೊಳ್ಳುವ ತೀರ್ಮಾನ ಗೃಹ ಸಚಿವರು ತೆಗೆದುಕೊಳ್ಳಬೇಕಿತ್ತು. ಕೇವಲ ಐಎಎಸ್ ಅಧಿಕಾರಿಗಳ ಜತೆಗಿನ ಮೀಟಿಂಗ್ಗೆ ಸೀಮಿತಗೊಳಿಸಿದ್ದ ಬಸವರಾಜ್ ಬೊಮ್ಮಾಯಿ ಯಾವತ್ತು ಕೆಳ ಹಂತದ ಅಧಿಕಾರಿಗಳ ನೋವಿಗೆ ಸ್ಪಂದಿಸಲಿಲ್ಲ. ಅದರಲ್ಲೂ ಹೊರ ರಾಜ್ಯದ ಐಪಿಎಸ್ ಅಧಿಕಾರಿಗಳ ಮಾತಿಗೆ ಮಣೆ ಹಾಕುತ್ತಿದ್ದರು. ರಾಜ್ಯದ ಅಧಿಕಾರಿಗಳನ್ನು ಮೂಲೆ ಗುಂಪು ಮಾಡಿದರು. ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ಗೆ ಕೇಂದ್ರ ಸರ್ಕಾರ 2 ಸಾವಿರ ಕೋಟಿ ಅನುದಾನ ನೀಡಿತ್ತು. ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ಗೆ ಡಿಜಿ ದರ್ಜೆಯ ಅಧಿಕಾರಿಯನ್ನು ನೇಮಿಸಬೇಕಿತ್ತು. ಕನ್ನಡಿಗ ದಕ್ಷ ಅಧಿಕಾರಿ ರವೀಂದ್ರನಾಥ್ ಹೌಸಿಂಗ್ ಕಾರ್ಪೋರೇಷನ್ಗೆ ಡಿಜಿಯಾಗಲು ಅರ್ಹತೆ ಹೊಂದಿದ್ದರು. ವಿಪರ್ಯಾಸವೆಂದರೆ ಕೆಲಸಕ್ಕೆ ಬರದ ವಿಭಾಗದ ಹುದ್ದೆಯನ್ನೇ ಅಪ್ಗ್ರೇಡ್ ಮಾಡಿ ಅಲ್ಲಿಗೆ ವರ್ಗಾವಣೆ ಮಾಡಿದ್ದರು. ಹೌಸಿಂಗ್ ಕಾರ್ಪೋರೇಷನ್ ಡಿಜಿ ಹುದ್ದೆಯನ್ನು ಹಾಲಿ ಡಿಜಿಪಿ ಅವರಿಗೆ ಹೆಚ್ಚುವರಿಯಾಗಿ ವಹಿಸಿ ಬೊಮ್ಮಾಯಿ ಕೈತೊಳೆದುಕೊಂಡಿದ್ದರು. ಇದು ಕೇವಲ ಒಂದು ಉದಾಹರಣೆ, ರಾಜ್ಯದಲ್ಲಿ ಸಾಕಷ್ಟು ಮಂದಿಗೆ ಈ ಅನುಭವ ಆಗಿದೆ. ದಕ್ಷ ಅಧಿಕಾರಿಗಳನ್ನು ಕನಿಷ್ಠ ಗುರುತಿಸಿ ದಕ್ಷ ಆಡಳಿತ ನೀಡುವ ನಿಟ್ಟಿನಲ್ಲಿ ಗೃಹ ಸಚಿವರಾಗಿ ಯಶಸ್ವಿಯಾಗಲಿಲ್ಲ ಬಸವರಾಜ ಬೊಮ್ಮಾಯಿ.
ಮಿತಿ ಮೀರಿದ ವರ್ಗಾವಣೆ ದಂಧೆ
ರಾಜ್ಯದಲ್ಲಿ ಪೊಲೀಸ್ ಹುದ್ದೆಗಳು ಬಿಕರಿಯಾದರೆ ಅದರ ಪರಿಣಾಮ ಸಮಾಜದ ಮೇಲೆ ಬೀರುತ್ತದೆ. ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ಅಷ್ಟೂ ಅವಧಿಯಲ್ಲಿ ವರ್ಗಾವಣೆ ಆದೇಶಗಳಿಗೆ ಕಡಿವಾಣವೇ ಇರಲಿಲ್ಲ. ತಿಂಗಳಿಗೆ ಒಂದೆರಡು ವರ್ಗಾವಣೆ ಆದೇಶ ಹೊರ ಬೀಳುತ್ತಿದ್ದರು. ಪೊಲೀಸ್ ಹುದ್ದೆಗಳು ಬಿಕರಿಯಾಗುತ್ತಿವೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದವು. ವರ್ಗಾವಣೆಗೊಂಡ ಅಧಿಕಾರಿ ಮೂರು ತಿಂಗಳು ವರದಿ ಮಾಡಿಕೊಳ್ಳದಿದ್ದರೂ ಕೇಳುವರು ಯಾರು ಇರುತ್ತಿರಲಿಲ್ಲ. ಮತ್ತೆ ಎರಡನೇ ವರ್ಗಾವಣೆ ಆದೇಶದಲ್ಲಿ ಬೇಕಾದ ಕಡೆ ಪೋಸ್ಟಿಂಗ್ ಕೊಡುತ್ತಿದ್ದರು. ದಕ್ಷ ಅಧಿಕಾರಿಗಳು ಅಗತ್ಯ ಇರುವ ಜಾಗಗಳಿಗೂ ಯಾರ್ಯಾರೋ ಬಂದು ಕೂತರು. ಹೀಗಾಗಿ ಪೊಲೀಸ್ ವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣ ಹದಗೆಟ್ಟಿತ್ತು. ಹಣ, ಅಧಿಕಾರ, ಪ್ರಭಾವ ಬೀರದವರನ್ನು ಕೇಳುವರು ಯಾರೂ ಇರುತ್ತಿರಲಿಲ್ಲ ಎಂಬ ಆರೋಪಗಳು ಹೆಚ್ಚಾದವು. ಒಬ್ಬ ದಕ್ಷ ಗೃಹ ಮಂತ್ರಿಯಾಗಿ ಗುರುತಿಸಿಕೊಳ್ಳುವ ಸಾಕಷ್ಟು ಅವಕಾಶವಿತ್ತು. ಆದರೆ, ಬೊಮ್ಮಾಯಿ ಕೇವಲ ಹಿರಿಯ ಐಪಿಎಸ್ ಅಧಿಕಾರಿಗಳ ಕೈಗೊಂಬೆಯಾಗಿ ಕುಣಿದು ಗೃಹ ಇಲಾಖೆ ಸಮರ್ಥ ಸಚಿವರಾಗಿ ನಿಭಾಯಿಸುವಲ್ಲಿ ವಿಫಲರಾದರು ಎಂಬ ಮಾತುಗಳು ಪೊಲೀಸ್ ವಲಯದಲ್ಲಿಯೇ ಕೇಳಿ ಬರುತ್ತಿವೆ.
ಕನ್ನಡದವರೇ ಆಯುಕ್ತರಾಗುವ ಅವಕಾಶವಿತ್ತು
ರಾಜ್ಯ ಪೊಲೀಸ್ ಇಲಾಖೆಗೆ ತಮ್ಮನ್ನು ಅರ್ಪಿಸಿಕೊಂಡು ಸೇವೆ ಮಾಡಿರುವ ಅಧಿಕಾರಿಗಳ ಪೈಕಿ ಎಂ.ಎ. ಸಲೀಂ ಹಾಗೂ ಬಿ. ದಯಾನಂದ್ ಕೂಡ ಹೌದು. ಸದ್ಯ ಗುಪ್ತಚರ ಇಲಾಖೆಯಲ್ಲಿ ಎಡಿಜಿಪಿಯಾಗಿ ದಯಾನಂದ್ ಕೆಲಸ ನಿರ್ವಹಿಸುತ್ತಿದ್ದು, ಪೊಲೀಸ್ ಪ್ರಧಾನ ಕಚೇರಿಯಲ್ಲಿ ಎಡಿಜಿಪಿಯಾಗಿ ಎಂ.ಎ. ಸಲೀಂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಲು ಇಬ್ಬರು ಕನ್ನಡಿಗರು ಅರ್ಹತೆ ಹೊಂದಿದ್ದರೂ ಯಾರನ್ನೂ ಪರಿಗಣಿಸಲೇ ಇಲ್ಲ. ಕನ್ನಡಿಗರನ್ನು ನೇಮಕ ಮಾಡಬೇಕು ಎಂಬ ನಿಯಮ ಇಲ್ಲ ನಿಜ. ಆದರೆ ಕಾನೂನು ಸುವ್ಯವಸ್ಥೆ, ದಕ್ಷತೆ ಮಾನದಂಡಗಳನ್ನಾದರೂ ಪರಿಗಣಿಸಿದರೂ ಇಬ್ಬರಲ್ಲಿ ಒಬ್ಬರು ಬೆಂಗಳೂರು ಪೊಲೀಸ್ ಆಯುಕ್ತರಾಗುತ್ತಿದ್ದರು. ಆದರೆ ಇದ್ಯಾವುದರ ಬಗ್ಗೆ ಬೊಮ್ಮಾಯಿ ತಲೆ ಕಡಿಸಿಕೊಳ್ಳಲೇ ಇಲ್ಲ. ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿ ಮಾಡಿದ್ದು ಬಿಡಲಿ, ನೂತನ ಮುಖ್ಯಮಂತ್ರಿಯಾಗಿದ್ದಾರೆ. ಈಗಲಾದರೂ ಇಡೀ ಆಡಳಿತದ ಹಿಡಿತ ತನ್ನ ಕೈಗೆ ತೆಗೆದುಕೊಂಡರೆ ಮುಖ್ಯಮಂತ್ರಿಯಾಗಿ ಯಶಸ್ಸು ಕಾಣಬಹುದು. ಸ್ವಲ್ಪ ಯಾಮಾರಿದರೂ ಪ್ರಮಾದಗಳಿಗೆ ಒಳಗಾಗುತ್ತಾರೆ ಎಂದೆನಿಸುತ್ತದೆ ಗೃಹ ಸಚಿವರಾಗಿ ಅವರು ಇಟ್ಟಿರುವ ಹೆಜ್ಜೆಗಳು.
Recommended Video