ನೈಋತ್ಯ ರೈಲ್ವೆ ನಿರ್ಮಾಣ ವಿಭಾಗಕ್ಕೆ ನೂತನ ಮುಖ್ಯ ಆಡಳಿತಾಧಿಕಾರಿ ನೇಮಕ
ಬೆಂಗಳೂರು, ಏಪ್ರಿಲ್ 19: ಬೆಂಗಳೂರು ದಂಡು ಪ್ರದೇಶದಲ್ಲಿರುವ ನೈಋತ್ಯ ರೈಲ್ವೆ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿಯಾಗಿ ದೇಶ್ ರತನ್ ಗುಪ್ತಾ ಅವರು ಏ.16 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.
1986ನೇ ಸಾಲಿನ ಐಆರ್ಎಸ್ಇ (ಭಾರತೀಯ ರೈಲ್ವೆ ಎಂಜಿನಿಯರಿಂಗ್ ಸೇವೆ) ಅಧಿಕಾರಿಯಾದ ಇವರು ರೈಲ್ವೆ ಹಳಿಗಳು, ಸೇತುವೆಗಳು, ಕಟ್ಟಡಗಳು, ಯೋಜನೆ, ವಿನ್ಯಾಸ, ರಿಯಲ್ ಎಸ್ಟೇಟ್ ಮತ್ತು ನೀತಿ ತಯಾರಿಕೆ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಸುಮಾರು 33 ವರ್ಷಗಳ ವೈವಿಧ್ಯಮಯ ಅನುಭವವನ್ನು ಹೊಂದಿದ್ದಾರೆ.
ಡಿ.ಆರ್ ಗುಪ್ತಾ ಅವರು ದಕ್ಷಿಣ ರೈಲ್ವೆ ಮತ್ತು ಉತ್ತರ ರೈಲ್ವೆಯ ನಿರ್ಮಾಣ ವಿಭಾಗಗಳಲ್ಲಿ ಮುಖ್ಯ ಎಂಜಿನಿಯರ್ ಮತ್ತು ಉಪ ಮುಖ್ಯ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿ ರೈಲ್ವೆಯ ಜೋಡಿ ಹಳಿ ನಿರ್ಮಾಣ ಕಾಮಗಾರಿ, ಸೇತುವೆ ಕಾರ್ಯಗಳು ಮತ್ತು ಗೇಜ್ ಪರಿವರ್ತನೆ ಯೋಜನೆಗಳನ್ನು ಸಮಯ ಪರಿಮಿತಿಯಲ್ಲಿ ಪೂರ್ಣಗೊಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ದೇಶ್ ರತನ್ ಗುಪ್ತಾ ರೈಲ್ವೆ ಮಂಡಳಿಯ ಭೂ ಮತ್ತು ಪರಿಸರ ನಿರ್ದೇಶನಾಲಯದಲ್ಲಿ ನಿರ್ದೇಶಕರಾಗಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮತ್ತು ನಿಯೋಜನೆಯ ಮೇಲೆ ರೈಲ್ವೆ ಭೂ ಅಭಿವೃದ್ಧಿ ಪ್ರಾಧಿಕಾರದ ಪ್ರಧಾನ ವ್ಯಸ್ಥಾಪಕರಾಗಿ ಆಡಳಿತ ನಿರ್ವಹಿಸಿದ್ದಾರೆ,
ಅವರು ವಾಷಿಂಗ್ಟನ್, ಟೊರೊಂಟೊ (ಕೆನಡಾ), ಯುಕೆ, ಸಿಂಗಾಪುರ್ ಮತ್ತು ಮಲೇಷ್ಯಾಗಳಲ್ಲಿ ವಿವಿಧ ತಾಂತ್ರಿಕ ಮತ್ತು ಉನ್ನತ ನಿರ್ವಹಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
Recommended Video
ನೈಋತ್ಯ ರೈಲ್ವೆ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿಯಾಗಿ ನಿಯುಕ್ತರಾಗುವ ಮುನ್ನ ಅವರು ಪೂರ್ವ ಮಧ್ಯ ರೈಲ್ವೆ ಪಾಟ್ನಾದಲ್ಲಿ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿಯಾಗಿಯಾಗಿದ್ದರು.