ಇಷ್ಟು ಭೀಕರ ಪ್ರವಾಹ ನಾನು ಕಂಡಿದ್ದೇ ಇಲ್ಲ: ಸಿದ್ದರಾಮಯ್ಯ ಕಳವಳ
ಬೆಂಗಳೂರು, ಆಗಸ್ಟ್ 10: ತಮ್ಮ ವಿಧಾನಸಭೆ ಕ್ಷೇತ್ರವಾದ ಬಾದಾಮಿ ಸೇರಿದಂತೆ ರಾಜ್ಯದ ಅನೇಕ ಕಡೆ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಿಂದ ಜನರು ತತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಜನರ ಜತೆಗೆ ಇದ್ದು ಅವರ ಕಷ್ಟ ನಷ್ಟಗಳಿಗೆ ಸ್ಪಂದಿಸಬೇಕಿತ್ತು. ಆದರೆ, ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದರಿಂದ ಅಲ್ಲಿಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದರು.
ತಮ್ಮ ಪ್ರತಿನಿಧಿಯಾಗಿ ಮಗ, ಶಾಸಕ ಯತೀಂದ್ರ ಅವರನ್ನು ಸಿದ್ದರಾಮಯ್ಯ ಅವರು ಬಾದಾಮಿಗೆ ಕಳುಹಿಸಿದ್ದರು. ಈ ನಡುವೆ ಅವರು ನಿರಂತರ ಟ್ವೀಟ್ಗಳ ಮೂಲಕ ಪ್ರವಾಹದ ಪರಿಸ್ಥಿತಿಯಲ್ಲಿ ಸ್ಪಂದಿಸುತ್ತಿರುವ ಮಾಹಿತಿ ನೀಡುತ್ತಿದ್ದಾರೆ.
16 ಜಿಲ್ಲೆಗಳು ಪ್ರವಾಹಪೀಡಿತವಾಗಿವೆ. ತಮ್ಮ ರಾಜಕೀಯ ಜೀವನದಲ್ಲಿ ಇಷ್ಟು ಭೀಕರ ಪ್ರವಾಹವನ್ನು ನೋಡಿಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದ 16 ಜಿಲ್ಲೆಗಳು ಪ್ರವಾಹ ಪೀಡಿತವಾಗಿವೆ. 20ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳು ಸಾವನ್ನಪ್ಪಿವೆ. ಹಲವಾರು ಮನೆಗಳು ಕೊಚ್ಚಿಹೋಗಿವೆ. ಲಕ್ಷಾಂತರ ಎಕರೆ ಬೆಳೆ ನಷ್ಟವಾಗಿದೆ. ಹೀಗೆ ಇನ್ನು ಅನೇಕ ದುರಂತ ಸಂಭವಿಸಿದೆ. ಇಷ್ಟು ಭೀಕರ ಪ್ರವಾಹ ನಾನು ನನ್ನ ರಾಜಕೀಯ ಜೀವನದಲ್ಲೇ ಕಂಡಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ಘೋಷಿಸಿ
ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗ ಮಳೆಯಿಂದಾಗಿ ತತ್ತರಿಸಿಹೋಗಿದ್ದು, ಅಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೇಂದ್ರ ಸರ್ಕಾರ ಇದನ್ನು ಈ ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ರಕ್ಷಣಾ ಕಾರ್ಯಕ್ಕೆ ನೀಡುವ ಅನುದಾನದ ಜೊತೆಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಹೆಚ್ಚುವರಿ ಅನುದಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಅಪ್ಪನಿಗೆ ಅನಾರೋಗ್ಯ ಬಾದಾಮಿ ನೆರವಿಗೆ ಯತೀಂದ್ರ ಸಿದ್ದರಾಮಯ್ಯ ಹಾಜರ್
27 ಗ್ರಾಮಗಳು ಜಲಾವೃತ
ನವಿಲುತೀರ್ಥ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಲಾದ ಹಿನ್ನೆಲೆಯಲ್ಲಿ ಬಾದಾಮಿಯ 27 ಗ್ರಾಮಗಳು ಜಲಾವೃತಗೊಂಡಿವೆ. ತಾಲೂಕಿನಲ್ಲಿ ಹಲವು ಕಡೆ ಗಂಜಿಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪರಿಹಾರ ಕಾರ್ಯಗಳ ಉಸ್ತುವಾರಿ ವಹಿಸಿಕೊಳ್ಳುವಂತೆ ನನ್ನ ಮಗ ಯತೀಂದ್ರ ಅವರನ್ನು ಕಳುಹಿಸಿದ್ದೇನೆ.
ಸರ್ಕಾರ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಿ ಜನ ಜಾನುವಾರುಗಳ ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಹಾಗೂ ಸಂತ್ರಸ್ತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಸಾಧ್ಯವಾದಷ್ಟು ಶೀಘ್ರದಲ್ಲಿಯೇ ಕಲ್ಪಿಸಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.
ಮಳೆ, ಪ್ರವಾಹದಲ್ಲಿ ಜನ ತತ್ತರ, ಇತ್ತ ಜನಪ್ರತಿನಿಧಿಗಳಿಗೆ ಜ್ವರ!
ವೈದ್ಯರ ಸೂಚನೆ ಪಾಲಿಸಲೇಬೇಕು
ಬಾದಾಮಿಯ ಶಾಸಕನಾಗಿರುವುದರಿಂದ ಕ್ಷೇತ್ರದ ಜನರು ನನ್ನ ಉಪಸ್ಥಿತಿ ಬಯಸುವುದು ಸಾಮಾನ್ಯ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನವೇ ಇಂತಹ ದುರ್ಘಟನೆ ಸಂಭವಿಸಿದ್ದರೆ ಖಂಡಿತಾ ಶಸ್ತ್ರಚಿಕಿತ್ಸೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡುತ್ತಿದ್ದೆ.
ಬಾದಾಮಿ ಒಂದೇ ಅಲ್ಲ, ಶಾಸಕಾಂಗ ಪಕ್ಷದ ನಾಯಕನಾಗಿ ರಾಜ್ಯದ ಎಲ್ಲ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಡಬೇಕಿತ್ತು. ಆದರೆ ವೈದ್ಯರು ನೀಡಿರುವ ಕೆಲ ಸೂಚನೆಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ.
ಇನ್ನಷ್ಟು ಹೆಲಿಕಾಪ್ಟರ್ಗಳು ಬೇಕು
ಹೆಲಿಕಾಪ್ಟರ್ಗಳ ಕೊರತೆಯಿಂದಾಗಿ ರಕ್ಷಣಾ ಕಾರ್ಯದಲ್ಲಿ ವಿಳಂಬವಾಗುತ್ತಿದೆ. ಹೀಗಾಗಿ ಸೇನೆಯ ಇನ್ನಷ್ಟು ಹೆಲಿಕಾಪ್ಟರ್ಗಳನ್ನು ತರಿಸಿಕೊಂಡು ಸಂಕಷ್ಟದಲ್ಲಿ ಇರುವವರಿಗೆ ನೆರವಾಗಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ನಿನ್ನೆ ಪಟ್ಟದಕಲ್ಲು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿ ರಕ್ಷಣೆಗಾಗಿ ದೇವಾಲಯವೇರಿ ಕುಳಿತಿದ್ದ 17 ಮಂದಿಯನ್ನು ಬೋಟ್ಗಳ ಮೂಲಕ ಸುರಕ್ಷಿತ ತಾಣಕ್ಕೆ ಸ್ಥಳಾಂತರಿಸಲಾಗಿದ್ದು, ಅವರಿಗೆ ವಸತಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ.