ಮರೆಯಾಗದ ಮಲೇರಿಯಾ, ಭ್ರಮೆಯಲ್ಲಿರಬೇಡಿ ಇಂದೇ ಬರಬಹುದು!
ಬೆಂಗಳೂರು, ಏಪ್ರಿಲ್ 25: ಎಚ್1ಎನ್1, ಡೆಂಗ್ಯೂ ಎನ್ನುವ ಹೊಸ ರೋಗಗಳಿಗೆ ಹೆದರಿ, ಮಲೇರಿಯಾ ರೋಗವನ್ನು ಸ್ವಲ್ಪ ಸಮಯ ಮರೆತಿರಬಹುದು ಆದರೆ ಅದು ನಮ್ಮನ್ನು ಮರೆಯುವ ಮಾತೇ ಇಲ್ಲ.
ಜಾಗತಿಕವಾಗಿ ಹೆಚ್ಚು ಜನರನ್ನು ಬಲಿತೆಗೆದುಕೊಳ್ಳುತ್ತಿರುವ ರೋಗ ಮಲೇರಿಯಾ, ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಹರಡುವ ಮಲೇರಿಯಾ ಮಾರಿ ವಿರುದ್ಧ ನಿರಂತರ ಹೋರಾಟ ನಡೆಯುತ್ತಿದ್ದರೂ ಸಂಪೂರ್ಣವಾಗಿ ಶಮನ ಮಾಡಲು ಇದುವರೆಗೂ ಸಾಧ್ಯವಾಗಿಲ್ಲ.
ಆರೋಗ್ಯ ಇಲಾಖೆಯ ನೌಕರರಲ್ಲೇ ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆ!
ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಈ ಅನಾಫಿಲಿಸ್ ಸೊಳ್ಳೆ ರಾಜ್ಯದ ಜನತೆಯನ್ನು ಬೆನ್ನು ಬಿಡದೆ ಕಾಡುತ್ತಿದೆ. ಕಳೆದ ವರ್ಷ ರಾಜ್ಯದಲ್ಲಿ 7,381 ಮಲೇರಿಯಾ ಪ್ರಕರಣಗಳು ಪತ್ತೆಯಾದರೆ, ಈ ವರ್ಷ ಮಾರ್ಚ್ ಅಂತ್ಯಕ್ಕೆ 941 ಪ್ರಕರಣಗಳು ಕಾಣಿಸಿಕೊಂಡಿದೆ.
ಸಕಾಲದಲ್ಲಿ ಚಿಕಿತ್ಸೆ ಮತ್ತು ಮದ್ದು ಸಿಗದಿದ್ದಲ್ಲಿ ಅಥವಾ ದೇಹವನ್ನು ಹೊಕ್ಕ ಪರಾವಲಂಬಿ ಸೂಕ್ಷ್ಮ ಜೀವಿಯು ಔಷಧದ ವಿರುದ್ಧ ನಿರೋಧಕ ಶಕ್ತಿ ಬೆಳೆಸಿಕೊಂಡಲ್ಲಿ ಮಲೇರಿಯಾ ಪೀಡಿತರು ಚೇತರಿಸಿಕೊಳ್ಳುವುದು ಕಷ್ಟ. ಹೀಗಾಗಿ ಪ್ರತಿವರ್ಷ ಏ.25ರಂದು ವಿಶ್ವ ಮಲೇರಿಯಾ ದಿನ ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.
ಮಲೇರಿಯಾ ಸೋಲಿಸಲು ಸಿದ್ಧರಾಗಿ ಎಂಬ ಘೋಷವಾಕ್ಯದಡಿ ಈ ವರ್ಷ ವಿಶ್ವ ಮಲೇರಿಯಾ ದಿನ ಆಚರಿಸಲಾಗುತ್ತಿದೆ. ಒಡಿಶಾ, ಮಧ್ಯಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿದೆ. ಹಾಗಾಗಿ ರಾಜ್ಯಕ್ಕೆ ಉದ್ಯೋಗ ಅರಸಿ ಬಂದವರಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪರೀಕ್ಷೆ ನಡೆಸಲಾಗುತ್ತಿದೆ.
ದಕ್ಷಿಣ ಕನ್ನಡ, ಉಡುಪಿ, ಯಾದಗಿರಿ, ಬೆಂಗಳೂರು, ಬಾಗಲಕೋಟೆ, ಗದಗ, ಹುಬ್ಬಳ್ಳಿ-ಧಾರವಾಡ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಪ್ರತಿ ವರ್ಷ ಅಧಿಕ ಮಲೇರಿಯಾ ಪ್ರಕರಣಗಳು ಪತ್ತೆಯಾಗುತ್ತಿವೆ. ದಕ್ಷಿಣ ಕನ್ನಡವೊಂದರಲ್ಲೇ ಕಳೆದ ವರ್ಷ 4,741 ಪ್ರಕರಣಗಳು ಪತ್ತೆಯಾಗಿದ್ದವು. 3 ತಿಂಗಳಲ್ಲಿ 688 ಪ್ರಕರಣಗಳು ಬೆಳಕಿಗೆ ಬಂದಿವೆ.
ರೋಗದ ಲಕ್ಷಣಗಳು: ವಿಪರೀತ ಜ್ವರ, ಮೈ ಬೆವರುವುದು, ಕೆಲವರಿಗೆ ವಾಂತಿ, ಮೈಕೈ ನೋವು, ನಿಶ್ಯಕ್ತಿ, ಮಲೇರಿಯಾ ರೋಗದ ಪ್ರಮುಖ ಲಕ್ಷಣಗಳು, ಈ ಲಕ್ಷಣಗಳು ಪ್ರತಿನಿತ್ಯ ಅಥವಾ ದಿನ ಬಿಟ್ಟು ದಿನ ಕಾಣಿಸಿಕೊಳ್ಳುತ್ತದೆ.
ನಿಯಂತ್ರಣ ಹೇಗೆ: ಮನೆ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸುವುದು, ರಾತ್ರಿ ಮಲಗುವಾಗ ಸೊಳ್ಳೆ ಪರದೆ, ಸೊಳ್ಳೆ ಬತ್ತಿ ಉಪಯೋಗ ಮಾಡುವುದು, ಜ್ವರ ಕಾಣಿಸಿಕೊಂಡಾಗ ಅಲಕ್ಷ್ಯ ಮಾಡದೆ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು.