ಬಸ್ತಿ ಹಳ್ಳದಲ್ಲಿ ಬೈಕ್ ಸಮೇತ ಕೊಚ್ಚಿ ಹೋದ ಯುವಕನ ಶೋಧ ಕಾರ್ಯ ಆರಂಭ
ಚಿಕ್ಕಮಗಳೂರು, ಜುಲೈ.12: ಚಿಕ್ಕಮಗಳೂರಿನಲ್ಲಿ ಒಂದು ವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ಬುಧವಾರ ಕೊಪ್ಪ ತಾಲೂಕಿನ ಬಸ್ತಿಯಲ್ಲಿ ಅಶೋಕ್ (24) ಎಂಬಾತ ಬೈಕ್ ಸಮೇತ ಕೊಚ್ಚಿ ಹೋಗಿದ್ದರು.
ಈ ವೇಳೆ ಕಾರ್ಯಾಚರಣೆ ನಡೆಸಿ ಹಳ್ಳದಿಂದ ಬೈಕ್ ಮೇಲೆತ್ತಲಾಗಿತ್ತು. ಆದರೆ ಅಶೋಕ್ ಪತ್ತೆಯಾಗಿರಲಿಲ್ಲ. ಇಂದು ಗುರುವಾರ ಯುವಕನ ಮೃತದೇಹಕ್ಕಾಗಿ NDRF ತಂಡ ತೀವ್ರ ಶೋಧ ಕಾರ್ಯಚರಣೆ ನಡೆಸಿದೆ.
ತೀರ್ಥಹಳ್ಳಿ : ತಾಯಿಯ ಮುಂದೆಯೇ ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ
30 ಜನರ NDRF ತಂಡದಿಂದ ಶೋಧ ಕಾರ್ಯ ನಡೆಯುತ್ತಿದ್ದು, ಸುಮಾರು 2 ಕಿ.ಮೀ.ವರೆಗೂ ಶವಕ್ಕಾಗಿ ಹುಡುಕಾಟ ನಡೆಸಲಾಗಿದೆ. ತಂಡಕ್ಕೆ ಪೊಲೀಸರು, ಅಗ್ನಿಶಾಮಕದಳದವರು ಸಾಥ್ ನೀಡಿದ್ದಾರೆ.
ಆದರೆ ಶೋಧ ಕಾರ್ಯಚರಣೆಗೆ ತೀವ್ರ ಮಳೆ ಅಡ್ಡಿಯಾಗಿದ್ದು, ಸ್ಥಳದಲ್ಲಿ ನೂರಾರೂ ಜನರು ಜಮಾಯಿಸಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆ, ಶೃಂಗೇರಿ, ಕಳಸ, ಬಾಳೆಹೊನ್ನೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಬೈಕ್ನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗುತ್ತಿದ್ದ ವೇಳೆ ಆಶೋಕ್ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅಶೋಕ್ ಶೃಂಗೇರಿ ತಾಲೂಕಿನ ಮೇಗೂರು ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಜಿಲ್ಲೆಯಾದ್ಯಂತ ಇಂದು ಗುರುವಾರ ಕೂಡ ಧಾರಕಾರ ಮಳೆ ಸುರಿಯುತ್ತಿದ್ದು, ತರೀಕೆರೆ ಪಟ್ಟಣದಲ್ಲಿ ಎರಡು ಮನೆಗಳ ಗೋಡೆ ಕುಸಿದಿದೆ. ಒಂದೇ ರಸ್ತೆಯಲ್ಲಿರುವ ಅಕ್ಕಪಕ್ಕದ ಎರಡು ಮನೆಗಳ ಗೋಡೆ ಕುಸಿದಿದೆ.
ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಈ ಅನಾಹುತ ಸಂಭವಿಸಿದ್ದು, ಪರಮೇಶಪ್ಪ, ನಿಂಗಣ್ಣ ಎಂಬುವರಿಗೆ ಸೇರಿದ ಮನೆಯ ಗೋಡೆಗಳು ಕುಸಿದಿವೆ.