ಜಾನಪದ ಲೋಕದಲ್ಲಿ ಆಕರ್ಷಿಸುತ್ತಿರುವ ದಸರಾ ಗೊಂಬೆಗಳು
ರಾಮನಗರ, ಸೆಪ್ಟೆಂಬರ್ 25 : ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಅಂದ್ರೆ ಮೈಸೂರಿನಲ್ಲಿ ಮಾತ್ರವಲ್ಲ ರಾಜ್ಯದ ಮನೆಮನೆಗಳಲ್ಲೂ ಕೂಡ ದೊಡ್ಡ ಹಬ್ಬವಿದ್ದಂತೆ. ನವರಾತ್ರಿಯ ವೇಳೆ ಹಲವರು ಗೊಂಬೆಗಳನ್ನು ಕೂರಿಸುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ. ಆದ್ರೆ ಇತ್ತೀಚೆಗೆ ಈ ಸಂಪ್ರದಾಯ ನಿಧಾನವಾಗಿ ಕಣ್ಮರೆಯಾಗುತ್ತಿರುವುದು ನಿಜಕ್ಕೂ ಕಳಕಳಿಯ ಸಂಗತಿ.
In Pics : ಶೋಭನಾ ನಾಟ್ಯಕ್ಕೆ ಮನಸೋತ ಮೈಸೂರಿಗರು
ಆದರೆ ಜನಪದ ಕಾಶಿ ರಾಮನಗರ ಬಳಿಯಿರುವ ಜಾನಪದ ಲೋಕದಲ್ಲಿ ಈ ಸಂಪ್ರದಾಯ ದಶಕಗಳಿಂದ ಅನೂಚಾನವಾಗಿ ನಡೆಯುತ್ತಾ ಬಂದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ರಾಮನಗರ ಮತ್ತು ಚನ್ನಪಟ್ಟಣದ ಮಧ್ಯೆ 15 ಎಕರೆ ಪ್ರದೇಶದಲ್ಲಿ ಮೈದಳೆದಿರುವ ಜಾನಪದ ಲೋಕದಲ್ಲಿ ದಸರಾ ಗೊಂಬೆಗಳ ಪ್ರದರ್ಶನ ನಡೆಯುತ್ತಿದ್ದು ದೇಶವಿದೇಶಗಳ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ ವಿಶ್ವವಿಖ್ಯಾತ ದಸರಾಗೆ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಪ್ರವಾಸಿಗರು, ರಾಮನಗರ ದಾಟಿದ ನಂತರ 6 ಕಿ.ಮೀ. ಮೈಸೂರು ರಸ್ತೆಯಲ್ಲಿ ಚಲಿಸುತ್ತಿದ್ದಂತೆ ಸಿಗುವ ಜಾನಪದ ಲೋಕಕ್ಕೆ ಬಂದು ದಸರಾ ಗೊಂಬೆಗಳನ್ನ ವೀಕ್ಷಣೆ ಮಾಡುತ್ತಿರುವುದು ವಿಶೇಷ.
ಮೈಸೂರಿನಲ್ಲಿದೆ ಭಾರತದ ಮೊದಲ ಮರಳು ಶಿಲ್ಪ ಮ್ಯೂಸಿಯಂ!
2005ರ ಸೆಪ್ಟೆಂಬರ್ 22ರಂದು ತಮ್ಮ 90ನೇ ವಯಸ್ಸಿನಲ್ಲಿ ಗತಿಸಿದ ಪ್ರೊ. ಎಚ್ ಎಲ್ ನಾಗೇಗೌಡರು ಕರ್ನಾಟಕ ಜಾನಪದ ಪರಿಷತ್ತನ್ನು ಸ್ಥಾಪಿಸಿದ್ದು 1979ರಲ್ಲಿ. ನಂತರ ಸ್ವಯಂಪ್ರಯತ್ನದಿಂದ 1994ರಲ್ಲಿ ಬೆಂಗಳೂರಿನಿಂದ 53 ಕಿ.ಮೀ. ದೂರದಲ್ಲಿರುವ, ರಾಮನಗರದ ಬಳಿ ಜಾನಪದ ಲೋಕವನ್ನು ಲೋಕಾರ್ಪಣೆ ಮಾಡಿದರು.
ಪ್ರತಿವರ್ಷ ಜಾನಪದ ಲೋಕಕ್ಕೆ ಬರುತ್ತೇವೆ
"ಜಾನಪದ ಲೋಕದಲ್ಲಿ ದಸರಾ ಗೊಂಬೆಗಳನ್ನ ಕೂರಿಸಿರುವುದು ಬಹಳ ಸಂತೋಷ ತಂದಿದೆ. ಪ್ರತಿವರ್ಷವೂ ಇಲ್ಲಿಗೆ ಬಂದು ನವರಾತ್ರಿ ಗೊಂಬೆಗಳನ್ನ ವೀಕ್ಷಣೆ ಮಾಡಿದ ಬಳಿಕವೇ ಮೈಸೂರಿಗೆ ತೆರಳುತ್ತೇವೆ. ಈ ವರ್ಷ ಬೊಂಬೆಗಳ ಸಂಖ್ಯೆ ಇನ್ನಷ್ಟು ಹೆಚ್ಚಿದೆ, ನೋಡಲು ಕೂಡ ಸುಂದರವಾಗಿವೆ" ಎಂದು ಬೆಂಗಳೂರಿನ ನಿವಾಸಿ ಶಾಂತಮ್ಮನವರು ಮೆಚ್ಚುಗೆ ವ್ಯಕ್ತಪಡಿಸಿದರು.
ಒಂದಕ್ಕಿಂತ ಮತ್ತೊಂದು ಅದ್ಭುತವಾಗಿವೆ
ದಶಾವತಾರದ ಬೊಂಬೆಗಳು, ರಾವಣನ ದರ್ಬಾರ್, ರಾಮನ ಪಟ್ಟಾಭಿಷೇಕ, ಮತ್ತು ಕೃಷ್ಣನ ಬಾಲಲೀಲೆಯಂತಹ ಪೌರಾಣಿಕ ನೀತಿ ಕಥೆಗಳನ್ನು ಸಾರುವ ಬೊಂಬೆಗಳು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿವಿಧ ರೂಪದ ಬಣ್ಣ ಬಣ್ಣ ಬೊಂಬೆಗಳು ಪ್ರದರ್ಶನದಲ್ಲಿವೆ. ಸುಮಾರು 800 ಗೊಂಬೆಗಳನ್ನು ಬಳಸಿ ಅಂದದ ಪ್ರದರ್ಶನ ಆಯೋಜಿಸಲಾಗಿದೆ.
ನಾಗೇಗೌಡರ ಕನಸಿನ ಕೂಸು
ಎಚ್ ಎಲ್ ನಾಗೇಗೌಡರ ಕನಸಿನ ಕೂಸಾದ ಜಾನಪದ ಲೋಕವನ್ನು ಸ್ಥಾಪಿಸಿದ್ದು 1994ರಲ್ಲಿ 1996ರಲ್ಲಿ ಜಾನಪದ ಲೋಕದ ವತಿಯಿಂದ ಕೇವಲ 20 ಗೊಂಬೆಗಳಿಂದ ಪ್ರಾರಂಭವಾದ ಗೊಂಬೆ ಪ್ರದರ್ಶನ ಇಂದು 800 ಗೊಂಬೆಗಳನ್ನು ಹೊಂದಿದೆ. 5000ಕ್ಕೂ ಹೆಚ್ಚು ಗೊಂಬೆಗಳು ಜಾನಪದ ಲೋಕದ ಸಂಗ್ರಹದಲ್ಲಿವೆ.
ಸಾರ್ವಜನಿಕರು ಕೂಡ ದಾನ ನೀಡಿದ್ದಾರೆ
ಪ್ರತಿ ಭಾರಿ ಜಾನಪದ ಲೋಕಕ್ಕೆ ಬೇಟಿ ನೀಡಿ ಗೊಂಬೆ ಪ್ರದರ್ಶನ ವೀಕ್ಷಸಿದ ಪ್ರವಾಸಿಗರು ತಮ್ಮಲ್ಲಿರುವ ಗೊಂಬೆಗಳನ್ನು ಜಾನಪದ ಲೋಕಕ್ಕೆ ದಾನವಾಗಿ ನೀಡಿರುವುದು ವಿಶೇಷ. ಹೀಗಾಗಿ ಇದು ಜಾನಪದ ಲೋಕಕ್ಕೆ ಮಾತ್ರ ಸಂಬಂಧಿಸಿದ ಪ್ರದರ್ಶನವಲ್ಲ, ಇದು ಸಾರ್ವಜನಿಕರ ಪ್ರದರ್ಶನ.