ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ, ಮುಂದೇನು?
ಬೆಂಗಳೂರು, ನವೆಂಬರ್ 3 : ನವ ಕರ್ನಾಟಕ ಪರಿವರ್ತನಾ ಯಾತ್ರೆ ರಾಜ್ಯ ಬಿಜೆಪಿ ನಾಯಕರಲ್ಲೂ ಬದಲಾವಣೆ ತಂದಂತೆ ಕಾಣಿಸುತ್ತಿದೆ. ಎಲ್ಲಾ ಒಳಜಗಳ, ಬಣ ರಾಜಕಾರಣವನ್ನು ಮರೆತು ಎಲ್ಲಾ ನಾಯಕರು ಒಂದೇ ಹಾರಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಬಳಿಕ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರು ದೆಹಲಿಗೂ ಮುಟ್ಟಿತ್ತು.
ಭ್ರಷ್ಟಾಚಾರದ ಸರ್ವ ದಾಖಲೆ ಮುರಿದ ಸಿದ್ದರಾಮಯ್ಯ : ಅಮಿತ್ ಶಾ ವಾಗ್ದಾಳಿ
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎಲ್ಲರನ್ನೂ ದೆಹಲಿಗೆ ಕರೆದು ಬುದ್ಧಿವಾದ ಹೇಳಿ ಕಳಿಸಿದ್ದರು. ನಂತರ ರಾಜ್ಯಕ್ಕೆ ಮರಳಿದ ನಾಯಕರು 'ನಾವು ಸೂರ್ಯ ಚಂದ್ರರಿದ್ದಂತೆ, ಅಣ್ಣ-ತಮ್ಮಂದಿರು ಇದ್ದಂತೆ' ಎಂದು ಹೇಳಿಕೆ ನೀಡಿ ನಮ್ಮ ನಡುವೆ ಯಾವುದೇ ಅಸಮಾಧಾನ ಇಲ್ಲ ಎಂದು ಘೋಷಿಸಿದ್ದರು.
ಚಿತ್ರಗಳು: ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಲಿರುವ ಬಿಜೆಪಿಯ ಪರಿವರ್ತನಾ ಯಾತ್ರೆ
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರನ್ನು ಅವರನ್ನು ಸರ್ವಸಮ್ಮತ ನಾಯಕ ಎಂದು ಒಪ್ಪುವ ಪರಿಸ್ಥಿತಿ ಈಗ ಇದೆ. ಮುಖ್ಯಮಂತ್ರಿಯಾದ ಬಳಿಕ 4 ವರ್ಷಗಳಲ್ಲಿ ಸಿದ್ದರಾಮಯ್ಯ ತಮ್ಮ ನೆಲೆ ಭದ್ರಪಡಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿರುವ ದೊಡ್ಡ ರಾಜ್ಯದ ಮುಖ್ಯಮಂತ್ರಿ ಎಂಬ ಕಾರಣಕ್ಕೆ ಹೈ ಕಮಾಂಡ್ ನಾಯಕರು ಅವರ ಮಾತನ್ನು ಒಪ್ಪುತ್ತಾರೆ. ಆದರೆ, ಬಿಜೆಪಿ ಪರಿಸ್ಥಿತಿ ಹೇಗಿದೆ?.....
ಬಿ.ಎಲ್.ಸಂತೋಷ್ ರಾಜ್ಯಕ್ಕೆ ವಾಪಸ್, ಬಿಎಸ್ವೈಗೆ ಸಂತೋಷವಿಲ್ಲ?
ಯಡಿಯೂರಪ್ಪ-ಈಶ್ವರಪ್ಪ
ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಮೊದಲು ಅಸಮಾಧಾನ ಹೊರಹಾಕಿದ್ದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದಲ್ಲಿ ಉಭಯ ನಾಯಕರ ನಡುವೆ ನಡೆದ ಜಟಾಪಟಿ ಗುಟ್ಟಾಗಿ ಉಳಿದಿಲ್ಲ. ನಂತರ ದೆಹಲಿಯಲ್ಲಿ ಸಂಧಾನ ಸಭೆ ನಡೆದ ಬಳಿಕ 'ನಾವು ಅಣ್ಣ-ತಮ್ಮಂದಿರು' ಇದ್ದಂತೆ ಎಂದು ಈಶ್ವರಪ್ಪ ಹೇಳುತ್ತಿದ್ದಾರೆ. ಟಿಕೆಟ್ ಹಂಚಿಕೆ ಸಮಯದಲ್ಲಿ ಮತ್ತೆ ಅಸಮಾಧಾನ ಉಂಟಾದರೆ ಆಶ್ಚರ್ಯಪಡಬೇಕಾಗಿಲ್ಲ.
ಯಡಿಯೂರಪ್ಪಗೆ 'ಸಂತೋಷ'ವಾಗಲಿಲ್ಲ
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ರಾಜ್ಯಕ್ಕೆ ವಾಪಸ್ ಆಗಿದ್ದು ಯಡಿಯೂರಪ್ಪ ಅವರಿಗೆ ಹೆಚ್ಚು ಸಂತೋಷ ನೀಡಲಿಲ್ಲ. ಪಕ್ಷದಲ್ಲಿ ಅನಗತ್ಯಗೊಂದಲ ಉಂಟಾಗಲು ಸಂತೋಷ್ ಅವರು ಪರೋಕ್ಷವಾಗಿ ಕಾರಣ ಎಂದು ಯಡಿಯೂರಪ್ಪ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಆದರೆ, ಗುರುವಾರ ಉಭಯ ನಾಯಕರು ಕೈ ಹಿಡಿದು ರಥವೇರಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ
ಗುರುವಾರ ಪರಿವರ್ತನಾ ಯಾತ್ರೆ ಉದ್ಘಾಟನೆ ವೇಳೆ ಯಡಿಯೂರಪ್ಪ ನೇತೃತ್ವದಲ್ಲಿ ನಾವು ಯಾತ್ರೆ ಮಾಡುತ್ತೇವೆ ಎಂದು ಎಲ್ಲಾ ನಾಯಕರು ಘೋಷಣೆ ಮಾಡಿದರು. ಬಹಳ ದಿನಗಳ ಹಿಂದೆಯೇ ಯಡಿಯೂರಪ್ಪ 2018ರ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಅಸಮಾಧಾನ ಬಗೆಹರಿಸುವ ಸಲುವಾಗಿಯೇ ಈ ಘೋಷಣೆ ಮಾಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಗುಜರಾತ್ ಮೇಲೆ ಸದ್ಯ ಅಮಿತ್ ಶಾ ಕಣ್ಣು
ಕರ್ನಾಟಕ ಬಿಜೆಪಿ ನಾಯಕರು ಚುನಾವಣೆ ದಿನಾಂಕ ಘೋಷಣೆಗೆ ಮೊದಲೇ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಆದರೆ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕದ ಚುನಾವಣೆಗಿಂತ ಹೆಚ್ಚಾಗಿ ಗುಜರಾತ್ ಮೇಲೆ ಗಮನಹರಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ತಮ್ಮ ತವರು ಕ್ಷೇತ್ರದಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸುವುದು ಅಮಿತ್ ಶಾ ಮುಂದಿರುವ ಸವಾಲು. ಅದಕ್ಕಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಅತ್ತ ಹಿಮಾಚಲ ಪ್ರದೇಶ ಚುನಾವಣೆ ಮೇಲೆಯೂ ಗಮನ ಹರಿಸಿದ್ದಾರೆ.
ಬದಲಾಗುತ್ತಾ ಕಾರ್ಯತಂತ್ರ?
ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ, ಕರ್ನಾಟಕದ ನವ ಪರಿವರ್ತನಾ ಯಾತ್ರೆಗೆ ಸಿಗುವ ಜನ ಬೆಂಬಲದ ಮೇಲೆ ಕರ್ನಾಟಕದಲ್ಲಿ ಗೆಲುವು ಸಾಧಿಸುವ ಕಾರ್ಯತಂತ್ರ ಬದಲಾಗುವ ನಿರೀಕ್ಷೆ ಇದೆ. ಚುನಾವಣಾ ಚಾಣಾಕ್ಯ ಅಮಿತ್ ಶಾ ಯಾವ ದಾಳ ಉರುಳಿಸಲಿದ್ದಾರೆ? ಎಂಬುದನ್ನು ಈಗ ಉಹಿಸುವುದು ಕಷ್ಟ.
ಹೊಸ ಮುಖಗಳಿಗೆ ಆದ್ಯತೆ?
2018ರ ಚುನಾವಣೆಗೆ ಟಿಕೆಟ್ ಹಂಚಿಕೆ ಮಾಡುವ ದೊಡ್ಡ ಸವಾಲು ಪಕ್ಷದ ಮುಂದಿದೆ. ವಿವಿಧ ಪಕ್ಷಗಳಿಂದ ಹಲವು ನಾಯಕರು ಬಿಜೆಪಿ ಸೇರಿದ್ದಾರೆ. ಕಳೆದ ಬಾರಿ ಸೋತ ಶಾಸಕರಿಗೆ ಟಿಕೆಟ್, ಪಕ್ಷ ಸೇರಿದವರಿಗೆ ಟಿಕೆಟ್, ಹೊಸ ಮುಖಗಳಿಗೆ ಟಿಕೆಟ್ ಎಂದು ಹಲವು ಗೊಂದಲಗಳು ಉಂಟಾಗುವ ಸಾಧ್ಯತೆ ಇದೆ. ಇದನ್ನು ರಾಜ್ಯ ನಾಯಕರು ಹೇಗೆ ನಿರ್ವಹಿಸುತ್ತಾರೆ? ಎಂಬುದನ್ನು ಕಾದು ನೋಡಬೇಕು.