ರಾಷ್ಟ್ರೀಯ ತೋಟಗಾರಿಕಾ ಮೇಳ-2021ಕ್ಕೆ ಇಂದು ತೆರೆ!
ಬೆಂಗಳೂರು, ಫೆ. 12: ಹೆಸರಘಟ್ಟದ ಐಐಎಚ್ಆರ್ ಆವರಣದಲ್ಲಿ ನಡೆಯುತ್ತಿರುವ ಐದು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳ-2021 ಇಂದು ಶುಕ್ರವಾರ ಅಂತ್ಯವಾಗಲಿದೆ. ತೋಟಗಾರಿಕಾ ಮೇಳ ಇದೇ ಮೊದಲ ಬಾರಿಗೆ ಅನ್ಲೈನ್ ಹಾಗೂ ಆಫ್ಲೈನ್ ಮೂಲಕ ನಡೆಯುತ್ತಿದೆ. ಈಗಾಗಲೇ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಐವತ್ತು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದಾರೆ. ಆಸಕ್ತರು ಹಾಗೂ ರೈತರಿಗೆ ಭಾಗವಹಿಸಲು ಇವತ್ತು (ಫೆ.12) ಕೊನೆಯ ದಿನವಾಗಿದೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಐಐಎಚ್ಆರ್ ಸ್ಥಳೀಯ ರೈತರ ಭೇಟಿಗೆ ಮಾತ್ರ ಅವಕಾಶ ಕಲ್ಪಿಸಿತ್ತು. ಹೊರರಾಜ್ಯಗಳ ರೈತರಿಗೆ ಆನ್ಲೈನ್ ಮೂಲಕ ಮೇಳದ ವೀಕ್ಷಣೆಗೆ ಅನುವು ಮಾಡಿಕೊಂಡಿತ್ತು. ಆದರೂ, ನಮ್ಮ ನೆರೆಯ ರಾಜ್ಯಗಳಾದ ಕೇರಳ, ತೆಲಂಗಾಣ, ಆಂಧ್ರ, ತಮಿಳುನಾಡು, ಪುದುಚೇರಿಯಿಂದ ಕೃಷಿಕರು, ತೋಟಗಾರಿಕಾ ಉತ್ಪನ್ನಗಳ ಉದ್ದಿಮೆದಾರರು ಮೇಳಕ್ಕೆ ಖುದ್ದು ಭೇಟಿಕೊಟ್ಟಿದ್ದರು. ಕೇರಳದಿಂದ ಬಹುಸಂಖ್ಯೆಯಲ್ಲಿ ಕೃಷಿ ಆಸಕ್ತರು ಆಗಮಿಸಿದ್ದು ವಿಶೇಷ.
ಉತ್ತರ ಕರ್ನಾಟಕ ಭಾಗದ ರೈತರು ತೋಟಗಾರಿಕೆ ಬೆಳೆಗಳ ಬಗ್ಗೆ ಹೆಚ್ಚು ಆಕರ್ಷಿತಗೊಂಡು, ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳ, ಕೃಷಿ ಆಧಾರಿತ ಸಸ್ವಹಾಯ ಸಂಘಗಳ ಮೂಲಕ ಭೇಟಿಕೊಟ್ಟಿದ್ದರು. ವಿಶೇಷ ಏನೆಂದರೆ, ಕೋವಿಡ್ ನಿರ್ಬಂಧದ ನಡುವೆಯೂ ಈ ಮೇಳಕ್ಕೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಮಕ್ಕಳು ಆಗಮಿಸಿದ್ದರು. ರೈತರು, ಸಂರಕ್ಷಿತ ಬೇಸಾಯ, ತೋಟಗಾರಿಕೆ ಬೇಸಾಯ ಪದ್ಧತಿಗಳ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದರು.
ಐಐಎಚ್ಆರ್ನ ಸುಮಾರು 650 ಎಕರೆ ಭೂಮಿಯಲ್ಲಿ ವಿಜ್ಞಾನಿಗಳು ಅವಿಷ್ಕರಿಸಿರುವ ವಿವಿಧ ಜಾತಿಗಳ ಹೂವು-ಹಣ್ಣು-ತರಕಾರಿಗಳ ಕುರಿತು ರೈತರು, ವಿದ್ಯಾರ್ಥಿಗಳು ಹಾಗೂ ಆಸಕ್ತರು ಮಾಹಿತಿ ಪಡೆದುಕೊಂಡರು. ಬಿತ್ತನೆ ಬೀಜ, ರಸಗೊಬ್ಬರ, ಯಂತ್ರೋಪಕರಣ, ಹೂವಿನ ಗಿಡ ಅಲಂಕಾರಿಕ ಪುಷ್ಪಗಳು, ಔಷಧೀಯ ಗಿಡಗಳು, ಸೌಗಂಧಿಕ ಬೆಳೆಗಳು ಹಾಗೂ ಅಣಬೆ ಬೆಳೆಗಳ ಉತ್ಪಾದನೆ ಮತ್ತು ತಂತ್ರಜ್ಞಾನಗಳ ಕುರಿತು ತಜ್ಞರು ವಿವರಣೆ ನೀಡುತ್ತಿದ್ದಾರೆ.