ಇಂದಿರಾ ಎಮರ್ಜೆನ್ಸಿಗಿಂತಲೂ ಮೋದಿ ಎಮರ್ಜೆನ್ಸಿ ಭೀಕರ: ಕೋಡಿಹಳ್ಳಿ ಚಂದ್ರಶೇಖರ್ ಸಂದರ್ಶನ
ಕೋವಿಡ್ ಎರಡನೇ ಅಲೆಯ ಆರಂಭದಲ್ಲಿ, ಆಡಾಳಿತಾತ್ಮಕವಾಗಿ ರಾಜ್ಯ ಸರಕಾರ ಗಣನೀಯವಾಗಿ ವೈಫಲ್ಯಗೊಂಡಿದ್ದು ಗೊತ್ತಿರುವ ವಿಚಾರ. ಈ ವಿಚಾರದ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಒನ್ಇಂಡಿಯಾ ಕನ್ನಡದ' ಜೊತೆಗೆ ಫೇಸ್ ಬುಕ್ ಸಂವಾದದಲ್ಲಿ ಮಾತನಾಡುತ್ತಿದ್ದ ಕೋಡಿಹಳ್ಳಿ, ಕೋವಿಡ್ ವೈಫಲ್ಯ, ತಾವೇಕೆ ಸಾರಿಗೆ ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದು, ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಬಗ್ಗೆ ಮಾತನಾಡಿದ್ದಾರೆ.
ತುರ್ತುಪರಿಸ್ಥಿತಿ ಮಾದರಿಯಲ್ಲೇ ದೇಶದ ಆಡಳಿತ ನಡೆಯುತ್ತಿದೆ; ಜನಾಂದೋಲನವೇ ಇದಕ್ಕೆ ಉತ್ತರ
ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆ ದಾರಿ ತಪ್ಪಲು ಕೋಡಿಹಳ್ಳಿ ಚಂದ್ರಶೇಖರ್ ಅವರೇ ಕಾರಣ ಎನ್ನುವ ಮುಖ್ಯಮಂತ್ರಿ ಯಡಿಯೂರಪ್ಪನವರ ಆರೋಪದ ಬಗ್ಗೆ ಮಾತನಾಡಿದ ಅವರು, "ಈಗ ಮುಖ್ಯಮಂತ್ರಿಗಳು ಇನ್ನೇನು ಹೇಳಲು ಸಾಧ್ಯ, ಅವರೇನು ದಬ್ಬಾಕಿದ್ದಾರಾ"ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇಂದಿರಾ ಗಾಂಧಿಯವರ ಕಾಲದ ತುರ್ತು ಪರಿಸ್ಥಿತಿಗಿಂತಲೂ, ನರೇಂದ್ರ ಮೋದಿಯವರ ಕಾಲದ ತುರ್ತು ಪರಿಸ್ಥಿತಿ ಗಂಭೀರ ಎಂದು ಹೇಳಿರುವ ಕೋಡಿಹಳ್ಳಿ, ಈಗ ದೇಶದಲ್ಲಿ ಅಘೋಷಿತ ಎಮರ್ಜೆನ್ಸಿ ಇದೆ ಎಂದು ಹೇಳಿದ್ದಾರೆ. ಸಂದರ್ಶನದ ಆಯ್ದ ಭಾಗ ಇಂತಿದೆ:
ದುಡಿಯುವಂತಹ ಜನರ ಕಷ್ಟಕ್ಕೆ ಸ್ಪಂದಿಸಬೇಕಾಗಿರುವುದು ನಮ್ಮ ಕರ್ತವ್ಯ
ಪ್ರ: ರೈತ ಮುಖಂಡರಾದ ನೀವು, ಸಾರಿಗೆ ಸಂಘಟನೆಯ ಗೌರವಾಧ್ಯಕ್ಷರಾಗಿದ್ದು ಯಾಕೆ ಮತ್ತು ಹೇಗೆ?
ಕೋಡಿಹಳ್ಳಿ: ಯಾರೇ ನೊಂದಂತವರು, ದುಡಿಯುವಂತಹ ಜನರ ಕಷ್ಟಕ್ಕೆ ಸ್ಪಂದಿಸಬೇಕಾಗಿರುವುದು ನಮ್ಮ ಕರ್ತವ್ಯ. ಅವರು ನೋವಿನಲ್ಲಿದ್ದಾಗ ಮಾನವೀಯತೆ ಇರುವ ಎಲ್ಲರೂ ಸ್ಪಂದಿಸಬೇಕು. ಆ ಕೆಲಸವನ್ನೇ ನಾವು ಮಾಡಿದ್ದು, ಜವಾಬ್ದಾರಿ ಜಾಸ್ತಿ ಬಂತು. ನಾವೇನು ಇದರಲ್ಲಿ ತಪ್ಪು ಮಾಡಿಲ್ಲ, ಇದೊಂದು ಸಾಂದರ್ಭಿಕವಾಗಿ ಬಂದಂತಹ ಜವಾಬ್ದಾರಿ.
ಕೋಡಿಹಳ್ಳಿ: ಸಿಎಂ ಬಿಎಸ್ವೈ ಏನು ದಬ್ಬಾಕಿದ್ದಾರಾ: ಕೋಡಿಹಳ್ಳಿ ಚಂದ್ರಶೇಖರ್ ಸಂದರ್ಶನ
ಪ್ರ: ಸಾರಿಗೆ ನೌಕರರ ಹೋರಾಟ ದಿಕ್ಕುತಪ್ಪುತ್ತಿರುವುದಕ್ಕೆ ಕೋಡಿಹಳ್ಳಿಯವರೇ ಕಾರಣ ಎನ್ನುವ ಸಿಎಂ ಆರೋಪದ ಬಗ್ಗೆ?
ಕೋಡಿಹಳ್ಳಿ: ಮುಖ್ಯಮಂತ್ರಿಗೆ ಈ ಮಾತು ಹೇಳದೆ ಇನ್ನೇನು ಹೇಳಕ್ಕೆ ಸಾಧ್ಯ. ಕೊರೊನಾ ಮುಗಿಯಿತು ಈಗೇನು ದಬ್ಬಾಕಿ ಬಿಟ್ರಾ. ಸಮಸ್ಯೆ ಎಲ್ಲಾ ತಿಳಿಯಾಗಿದೆ, ಈಗಲಾದರೂ ನೌಕರರ ಡಿಮಾಂಡ್ ಬಗ್ಗೆ ಆಲೋಚನೆ ಮಾಡಬಹುದಲ್ಲವೇ. ಹತ್ತು ಸಾವಿರ ನೌಕರರಿಗೆ ಶಿಸ್ತುಕ್ರಮ ತೆಗೆದುಕೊಳ್ಳುವ ಕೆಲಸವನ್ನು ಅವರು ಮಾಡಿದ್ದಾರೆ. ಇದಕ್ಕಿಂತ ಚೀಪ್ ಕೆಲಸ ಇನ್ನೊಂದು ಇದೆಯಾ.
ಕರೆ ಏನಾದರೂ ಬಂದರೆ, ಬೆಳಕು ಹರಿಯುವುದರೊಳಗೆ ಭರ್ತಿಯಾಗಿ ಬಿಡುತ್ತದೆ
ಪ್ರ: ದೆಹಲಿಯಲ್ಲಿ ರೈತರ ಹೋರಾಟದ ಕಾವು ಕಮ್ಮಿಯಾಗುತ್ತಿದೆಯಾ?
ಕೋಡಿಹಳ್ಳಿ: ಹೋರಾಟದ ಕಾವು ಏನೂ ಕಮ್ಮಿಯಾಗಿಲ್ಲ, ಮುಂಗಾರು ಆರಂಭವಾಗಿರುವುದರಿಂದ, ಬಿತ್ತನೆ ಕಾಲದಲ್ಲಿ ರೈತರು ಹೊಲಗದ್ದೆಯಲ್ಲಿ ಇರಬೇಕಾಗುತ್ತದೆ. ಯಾಕೆಂದರೆ, ನಮಗೆ ಈ ಕಸುಬು ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ಕರೆ ಏನಾದರೂ ಬಂದರೆ, ಬೆಳಕು ಹರಿಯುವುದರೊಳಗೆ ಭರ್ತಿಯಾಗಿ ಬಿಡುತ್ತದೆ.
Recommended Video
ಇಂದಿರಾ ಗಾಂಧಿ ಎಮರ್ಜೆನ್ಸಿಗಿಂತಲೂ ಮೋದಿ ಎಮರ್ಜೆನ್ಸಿ ಭೀಕರ
ಪ್ರ: ತುರ್ತು ಪರಿಸ್ಥಿತಿಯ ಆಧಾರದ ಮೇಲೆ ನಮ್ಮ ದೇಶ ನಡೆಯುತ್ತಿದೆ ಎನ್ನುವ ಮಾತನ್ನು ಹೇಳಿದ್ರಿ?
ಕೋಡಿಹಳ್ಳಿ: ತುರ್ತು ಪರಿಸ್ಥಿತಿಯ ವೇಳೆ ನಾನೂ ಕೂಡಾ ವಿದ್ಯಾರ್ಥಿ ಮುಖಂಡನಾಗಿ ಹೋರಾಟ ಮಾಡಿದ್ದೆ. ಜನಸಂಘದವರೂ ಮಾಡಿದ್ದರು. ಆದರೆ, ಆಗಿನ ಎಮರ್ಜೆನ್ಸಿ ದೇಶದ ಜನರಿಗೆ ತೊಂದರೆ ಆಗಿರಲಿಲ್ಲ. ಆ ವೇಳೆ ಬ್ಯಾಂಕುಗಳು ರಾಷ್ಟ್ರೀಕರಣಗೊಂಡವು, ಇಪ್ಪತ್ತು ಅಂಶದ ಕಾರ್ಯಕ್ರಮ ಜಾರಿಗೆ ಬಂತು, ಆದರೆ ಈಗಿನ ತುರ್ತು ಪರಿಸ್ಥಿತಿ, ಅಘೋಷಿತ. ಅದಕ್ಕಿಂತಲೂ ಕಠಿಣವಾದ, ಯಾರನ್ನೂ ಜೈಲಿಗೆ ಹಾಕದೇ, ಮೋದಿ ನಡೆಸುತ್ತಿರುವ ರಾಜ್ಯಭಾರ ಇಂದಿರಾ ಗಾಂಧಿಯ ಎಮರ್ಜೆನ್ಸಿಗಿಂತಲೂ ಭೀಕರ.