ಕೊಡಗಿನ ಜಲಪ್ರಳಯವನ್ನೂ ನರೇಂದ್ರ ಮೋದಿಯವರು ವೀಕ್ಷಿಸಲಿ
ಬೆಂಗಳೂರು, ಆಗಸ್ಟ್ 18 : ಕೊಡಗಿನಲ್ಲಿ ಜಲಪ್ರಳಯದ ನರ್ತನ ಕೇರಳದಲ್ಲಿ ಆಗುತ್ತಿರುವ ಅನಾಹುತಕ್ಕಿಂತ ವಿಭಿನ್ನವಾಗೇನೂ ಇಲ್ಲ. ಕೊಡಗು ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಭಾರೀ ವರ್ಷಧಾರೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?
ಕೇರಳದ ಕಂಡುಕೇಳರಿಯದ ದುರಂತವನ್ನು ವೀಕ್ಷಿಸಲು ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದ ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೂ ಏಕೆ ಭೇಟಿ ಕೊಟ್ಟು ಇಲ್ಲಿನ ಅನಾಹುತದ ವೀಕ್ಷಣೆ ಮಾಡಬಾರದು? ಹೆಲಿಕಾಪ್ಟರ್ ನಿಂದ ಇಲ್ಲಿಗೆ ಬರಲು ಅವರಿಗೆ ಹೆಚ್ಚು ಸಮಯ ಬೇಕಾಗಲಿಕ್ಕಿಲ್ಲ.
ಕೊಡಗಿನಲ್ಲಿ ಪ್ರವಾಹ: ದಿನದ 24 ತಾಸು ಕಾರ್ಯಾಚರಣೆಗೆ ಸಿಎಂ ಸೂಚನೆ
ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಭೇಟಿ ನೀಡಬೇಕೆಂದು ಕರ್ನಾಟಕದ ಸಂಸದರು, ಅದರಲ್ಲಿಯೂ ಬಿಜೆಪಿ ಸಂಸದರು ಪ್ರಧಾನಿಯವರನ್ನು ಏಕೆ ಕೋರಿಕೊಳ್ಳಬಾರದು? ಹೀಗೊಂದು ಮನವಿಯನ್ನು ಪ್ರಧಾನಿಗೆ ಸಂಸದರು ಸಲ್ಲಿಸಿದ್ದಾರೆಯೆ?
ಮಳೆಯ ರುದ್ರನರ್ತನದಿಂದ ಕೊಡಗು ಜಿಲ್ಲೆ ಅಕ್ಷರಶಃ ತತ್ತರಿಸಿ ಹೋಗಿದೆ. ಈ ಜಿಲ್ಲೆಯೊಂದರಲ್ಲಿಯೇ ಆರು ಜನ ಪ್ರಾಣ ಕಳೆದುಕೊಂಡಿದ್ದಾರೆ, ಸಾವಿರಾರು ಜನರು ಅತಂತ್ರರಾಗಿದ್ದಾರೆ ಮತ್ತು ಸದ್ಯಕ್ಕೆ ಲೆಕ್ಕಕ್ಕೆ ಸಿಗಲಾರದಷ್ಟು ಆಸ್ತಿಪಾಸ್ತಿ ಹಾನಿಯಾಗಿದೆ.
ಮನೆಮಠ, ಜಾನುವಾರು, ಗದ್ದೆತೋಟಗಳನ್ನು ಕಳೆದುಕೊಂಡವರಿಗೆ ಪರಿಹಾರ ದೊರಕಿಸಿ ಕೊಡಲೆಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು 200 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದಾರೆ. ಹೆಚ್ಚಿನ ಹಣಕಾಸಿನ ನೆರವಿಗಾಗಿ ಕೇಂದ್ರಕ್ಕೂ ಪತ್ರ ಬರೆದಿದ್ದಾರೆ.
ಕೊಡಗಿನಲ್ಲಿ ಅಂದು ನಡೆದದ್ದು ಜಲಪ್ರಳಯದ ಮುನ್ಸೂಚನೆಯಾಗಿತ್ತಾ?
ಈ ನಡುವೆ ಹಲವಾರು ಸಂಘ ಸಂಸ್ಥೆಗಳು, ಮಾಧ್ಯಮಗಳು ಕೂಡ ಸೂರು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿದವರಿಗಾಗಿ ಹಣದ ಜೊತೆ ಬಟ್ಟೆಬರೆ, ಆಹಾರ ಇತ್ಯಾದಿಗಳನ್ನು ಸಂಗ್ರಹಿಸುತ್ತಿದ್ದಾರೆ. ಹಲವಾರು ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಂತ್ರಸ್ತರು ಅಲ್ಲಿಯೇ ಕಾಲ ಕಳೆಯುತ್ತಿದ್ದಾರೆ.
ಈ ವಿಪರೀತ ಪರಿಸ್ಥಿತಿಯಲ್ಲಿ ಶ್ರೀಸಾಮಾನ್ಯರು ಮಾಡಬೇಕಾದ್ದನ್ನು ಮಾಡುತ್ತಿದ್ದಾರೆ. ಆದರೆ, ಕೋಟಿ ಕೋಟಿ ಗಳಿಸುವ ಕನ್ನಡ ಚಿತ್ರರಂಗದ ಖ್ಯಾತ ನಟರು, ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕೋಟಿ ಕೋಟಿ ಆಸ್ತಿ ಘೋಷಿಸಿಕೊಂಡಿದ್ದ ರಾಜಕಾರಣಿಗಳು ಏಕೆ ತಮ್ಮ ಬಳಿಯಿರುವ ಬಿಡಿಗಾಸನ್ನು ಪರಿಹಾರ ನಿಧಿಗೆ ನೀಡಿ ಅಳಿಲು ಸೇವೆ ಸಲ್ಲಿಸಬಾರದು?
ಕಣ್ಣೆದುರಲ್ಲೇ ಬಿತ್ತು ಮನೆ... ಈ ಯಮಯಾತನೆ ಯಾರಿಗೆ ಹೇಳೋದು?!
ಈ ನಿಟ್ಟಿನಲ್ಲಿ ಪ್ರಯತ್ನಗಳೇನಾದರೂ ನಡೆದಿವೆಯಾ? ಸುದೀಪ್, ದರ್ಶನ್, ಶಿವರಾಜ್ ಕುಮಾರ್ ಮುಂತಾದ ನಟರು ಕೊಡಗಿನ ಜನರ ಸಂಕಷ್ಟಕ್ಕೆ ನೆರವಾಗಬೇಕು ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಇಷ್ಟು ಮಾಡಿದ್ದಕ್ಕೆ ಅವರಿಗೆ ಧನ್ಯವಾದಗಳು. ಜೊತೆಗೆ ಪ್ರವಾಹೋಪಾದಿಯಲ್ಲಿ ಹಣ, ಅಗತ್ಯವಾಗಿ ಬೇಕಾಗುವ ಸಾಮಗ್ರಿಗಳು ಸಂಗ್ರಹವಾಗಬೇಕು.
ಕರ್ನಾಟಕದ ರಾಜಕಾರಣಿಗಳು (ಶಾಸಕರು, ಪರಿಷತ್ ಸದಸ್ಯರು, ಸಂಸದರು, ಕಾರ್ಪೊರೇಟರುಗಳು, ಜಿಲ್ಲಾ ತಾಲೂಕಾ ಪಂಚಾಯತ್ ಸದಸ್ಯರು) ತಮ್ಮ ಒಂದು ದಿನದ ಸಂಬಳವನ್ನು ದಾನವಾಗಿ ನೀಡಿದರೂ ಸಾಕು, ಕೊಡಗು ಮತ್ತು ದಕ್ಷಿಣ ಕನ್ನಡ ಜನರಿಗೆ ಎಷ್ಟೋ ಅನುಕೂಲವಾಗುತ್ತದೆ.